ಕನ್ನಡಪ್ರಭ ವಾರ್ತೆ ಮೈಸೂರು
ಪರ್ಯಾಯ ರಾಜಕೀಯ ವ್ಯವಸ್ಥೆ ರೂಪುಗೊಳ್ಳುವುದು ಅನಿವಾರ್ಯ. ಪ್ರಸ್ತುತ ಪರ್ಯಾಯವಾದ ರಾಜಕೀಯ ವ್ಯವಸ್ಥೆ ಕಟ್ಟುವ ಅವಶ್ಯಕತೆ ಇದೆ. ಸಮ ಸಮಾಜಕ್ಕಾಗಿ ರಾಜಕೀಯ ಚಳವಳಿ ಆರಂಭವಾಗಬೇಕಿದೆ ಎಂದು ಸಾಮಾಜಿಕ ಹೋರಾಟಗಾರ, ನಟ ಅಹಿಂಸಾ ಚೇತನ್ ತಿಳಿಸಿದರು.ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಅಂಗಳ ಸಾಹಿತ್ಯ ಬಳಗ ಮತ್ತು ದೇವರತ್ನ ಫೌಂಡೇಶನ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿ- ಯುವಜನರ ಸಮಸ್ಯೆ- ಸವಾಲು- ಪರಿಹಾರ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಡಾ. ಅಂಬೇಡ್ಕರ್ ಅವರು ಮಹಾಡ್ ಕೆರೆ ಹೋರಾಟದ ನಂತರ ರಾಜಕೀಯ ಅಧಿಕಾರದ ಮಹತ್ವ ತಿಳಿದುಕೊಂಡರು. ಪೆರಿಯಾರ್ ತಮಿಳುನಾಡಿನಲ್ಲಿ ರಾಜಕೀಯ ಕ್ರಾಂತಿ ಮಾಡಿದರು. ಕಾನ್ಸಿರಾಂ ಉತ್ತರ ಪ್ರದೇಶವನ್ನು ರಾಜಕೀಯದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡರು. ಈಗ ಪ್ರಾದೇಶಿಕ ರಾಜಕೀಯ ರೂಪುಗೊಳ್ಳುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.12 ಸಾವಿರ ವರ್ಷಗಳ ಹಿಂದೆ ನಾಗರಿಕತೆ ಆರಂಭವಾಯಿತು. ಅಲ್ಲಿಂದ ಲಿಂಗ ಅಸಮಾನತೆ, ಪುರುಷ ಪ್ರಧಾನ ವ್ಯವಸ್ಥೆ ಬೆಳೆದು ಬಂದಿತು. ಇವತ್ತಿಗೂ ಜೀವಂತವಾಗಿದೆ. ಬ್ರಾಹ್ಮಣ್ಯರಿಗೆ ಜನ್ಮ ಆಧಾರಿತ ಸೌಲಭ್ಯಗಳು ದೊರೆತವು. 300 ವರ್ಷಗಳಿಂದ ಬಂಡವಾಳ ವ್ಯವಸ್ಥೆ ಜಾರಿಯಲ್ಲಿದೆ. 100 ವರ್ಷದಿಂದ ಹಿಂದುತ್ವ, 75 ವರ್ಷದಿಂದ ಭಾಷೆಯ ತಾರತಮ್ಯ ಕಾಣುತ್ತಿದ್ದೇವೆ. ಉತ್ತಮ ಸಂವಿಧಾನದಿಂದ ಸಮ ಸಮಾಜ ನಿರ್ಮಾಣ ಮಾಡಬೇಕು. ಸಮಾನತೆಯ ಸಮಾಜದ ಕಡೆ ಹೋಗಬೇಕು. ಜಾತಿ, ಧರ್ಮ, ಪಕ್ಷ, ಭಾಷೆ ಮುಖ್ಯವಾಗಬಾರದು ಎಂದರು.
ಶಿಕ್ಷಣ ವ್ಯಾಪಾರೀಕರಣವಾಗಿದೆ. ರೋಹಿತ್ ಚಕ್ರತೀರ್ಥ ಮತ್ತು ಬರಗೂರು ರಾಮಚಂದ್ರಪ್ಪ ಪಠ್ಯ ಪುಸ್ತಕ ಸಮಿತಿಗಳಿಂದ ನಮಗೇ ನ್ಯಾಯ ಸಿಗಲಿಲ್ಲ. ವೈಜ್ಞಾನಿಕ ಪಠ್ಯ ಅಗತ್ಯ ಇದೆ. ಚಳವಳಿಗಳಿಂದ ನಾವೆಲ್ಲರೂ ಕಲಿಯಬೇಕು. ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಸರ್ಕಾರಿ ಉದ್ಯೋಗ ಕೊಡಬೇಕು. ಸಿನಿಮಾ ನಟರು, ಕ್ರಿಕೆಟರ್, ಉದ್ಯಮಿಗಳು ಮಾದರಿಯಲ್ಲ. ಸಮಾಜಕ್ಕೆ ನಿಸ್ವಾರ್ಥದಿಂದ ದುಡಿದವರು ಮಾದರಿ ಆಗಬೇಕು. ಅಸಮಾನತೆ, ಅನ್ಯಾಯದ ವ್ಯವಸ್ಥೆ ನಮ್ಮ ವಿರೋಧ ಎಂದು ಅವರು ತಿಳಿಸಿದರು.ಜನರ ಸಮಸ್ಯೆ ಚರ್ಚಿಸುತ್ತಿಲ್ಲ
ಪ್ರಗತಿಪರ ಚಿಂತಕ ಶಿವಸುಂದರ್ ಮಾತನಾಡಿ, ಲೋಕದ ಸಮಸ್ಯೆಗಳನ್ನು ಗೂಗಲ್ ನಲ್ಲಿ ಹುಡುಕಬಾರದು, ಜಗತ್ತಿನಲ್ಲಿ ಹುಡುಕಬೇಕು. ಸದನದಲ್ಲಿ ಜನರ ಸಮಸ್ಯೆಗಳನ್ನು ಚರ್ಚೆಗಳು ನಡೆಯುತ್ತಿಲ್ಲ. ಹನಿಟ್ರಾಪ್ ಬಗ್ಗೆ ಚೆರ್ಚೆಗಳು ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಈ ದೇಶದಲ್ಲಿ ಸಂವಿಧಾನದ ವಿರುದ್ಧವಾಗಿ ಆರ್ಥಿಕ ನೀತಿಗಳು ಇವೆ. ಸಂಪತ್ತನ್ನು ಸಾಮೂಹಿಕವಾಗಿ ಹಂಚಿಕೆ ಆಗಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ, ಪ್ರತಿಯೊಬ್ಬನಿಗೂ ಉಚಿತ, ಕಡ್ಡಾಯ ಶಿಕ್ಷಣ ಕೊಡಬೇಕು ಎಂದು ಸಂವಿಧಾನದಲ್ಲಿ ಇದೆ. ಏಕೆ ಕೊಡಲಿಲ್ಲ? ಇದು ನಮ್ಮ ಮುಂದೆ ಇರುವ ಪ್ರಮುಖ ಸಮಸ್ಯೆಗಳು ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ, ಪ್ರಗತಿಪರ ಹೋರಾಟಗಾರರಾದ ಸವಿತಾ ಪ. ಮಲ್ಲೇಶ್, ಅಹಿಂದ ಜವರಪ್ಪ, ಅಂಗಳ ಸಾಹಿತ್ಯ ಬಳಗದ ವರಹಳ್ಳಿ ಆನಂದ, ವಕೀಲ ಶಿವಪ್ರಸಾದ್, ಪ್ರದೀಪ್ ಕುಮಾರ್ ಮೊದಲಾದವರು ಇದ್ದರು.-----
ಬಾಕ್ಸ್...ಸ್ವಯಂ ಉದ್ಯೋಗದಿಂಧ ನಿರುದ್ಯೋಗ ನಿವಾರಣೆ- ದರ್ಶನ್ ಪುಟ್ಟಣ್ಣಯ್ಯ
ಸ್ವಯಂ ಉದ್ಯೋಗದಿಂದಲೇ ನಿರುದೋಗ್ಯ ಸಮಸ್ಯೆ ನಿವಾರಣೆ ಸಾಧ್ಯ. ಹೀಗಾಗಿ, ಯುವ ಜನರು ಉದ್ಯೋಗಿ ಆಗುವುದಕ್ಕಿಂತ ಉದ್ಯೋಗದಾತರಾಗಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಕರೆ ನೀಡಿದರು.ಉನ್ನತ ಶಿಕ್ಷಣ ಕೈಗಾರಿಕಾ ಉದ್ಯೋಗಕ್ಕೆ ಪೂರಕವಾಗಿ ರೂಪಗೊಳ್ಳಬೇಕು. ಸ್ಥಳೀಯ ಉದ್ಯೋಗ ಸೃಷ್ಟಿಗೆ ಮೊದಲ ಆದ್ಯತೆ ನೀಡಬೇಕು. ಇದರಿಂದ ಸ್ಥಳೀಯ ಆರ್ಥಿಕ ಚಟುವಟಿಕೆಗಳು ವೃದ್ಧಿಗೆ ಸಾಧ್ಯವಾಗಲಿದೆ. ಬೆಂಗಳೂರಿನಂತಹ ಮಹಾನಗರಗಳಿಗೆ ವಲಸೆ ಹೋಗಿರುವ ಹಳ್ಳಿಯ ಯುವಕರನ್ನು ಮರಳಿ ಹಳ್ಳಿಕಡೆಗೆ ಕರೆ ತರಲು ಅನುಕೂಲವಾಗಲಿದೆ ಎಂದರು.
ಐಟಿ- ಬಿಟಿಯಿಂದ ದೊಡ್ಡ ಮಟ್ಟ ಉದ್ಯೋಗ ಸೃಷ್ಟಿ ಸಾಧ್ಯವಿಲ್ಲ. ಅದು ಸಾಧ್ಯವಾಗುವುದು ಸಣ್ಣ ಕೈಗಾರಿಕೆಗಳಿಂದ ಮಾತ್ರ. ನವೋದ್ಯಮ ಎಂದರೆ ಬರೀ ಐಟಿ- ಬಿಟಿಯಷ್ಟೇ ಅಲ್ಲ, ಗ್ರಾಮಾಂತರ ಪ್ರದೇಶದಲ್ಲಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುವುದೂ ಸ್ಟಾರ್ಟ್ ಅಪ್. ರಿಸ್ಕ್ ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಂಡು ಹೊಸ ಪ್ರಯತ್ನಕ್ಕೆ ಯುವ ಜನರು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.----
ಕೋಟ್...ಬೆಟ್ಟದಂತ ನಮ್ಮ ಸಮಸ್ಯೆಗಳು ಪರ್ವತದಂತೆ ಬೆಳೆಯುತ್ತಿವೆ. ಇವುಗಳನ್ನು ಪ್ರಶ್ನಿಸಬೇಕಾದ ವಿದ್ಯಾರ್ಥಿ ಯುವಜನರು ಸಾಮಾಜಿಕ ಜಾಲತಾಣದಲ್ಲಿ ಮುಳುಗಿದ್ದಾರೆ. ಗೂಗಲ್ ನಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಂದು ಮೈ ಮರೆಯುತ್ತಿದ್ದಾರೆ. ಭೂಮಿ, ಶಿಕ್ಷಣ, ಆರೋಗ್ಯ, ಉದ್ಯೋಗ ಸಮಸ್ಯೆ ಇತ್ಯರ್ಥಕ್ಕೆ ಕೂತು ಚರ್ಚಿಸಬೇಕು. ಜನಪ್ರತಿನಿಧಿಗಳು ಸದನದ ಒಳಗೆ ಹೋರಾಡಬೇಕು. ತಮ್ಮ ಸಮಸ್ಯೆ ಇತ್ಯರ್ಥಪಡಿಸದಿದ್ದರೆ ಸದನಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ಕೊಡಬೇಕು.
- ಅಹಿಂದ ಜವರಪ್ಪ, ಸಾಮಾಜಿಕ ಹೋರಾಟಗಾರ