ಹಾವೇರಿ: ಸೌಮ್ಯ ಸ್ವಭಾವ, ಕ್ರಿಯಾಶೀಲ ವ್ಯಕ್ತಿತ್ವ, ಮೌಲಿಕ ಗುಣವುಳ್ಳ ಜಗದೀಶ ಹೊಸಮನಿಯವರು ಕೆಎಲ್ಇ ಸಂಸ್ಥೆಯಲ್ಲಿ ಸುಮಾರು ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದು, ಹಾವೇರಿ ಅವರಿಗೆ ಜನ್ಮಭೂಮಿ ಹಾಗೂ ಕರ್ಮಭೂಮಿಯೂ ಆಗಿದ್ದು, ಇಂತಹ ಉತ್ತಮ ಪ್ರಾಧ್ಯಾಪಕರು ದೊರಕಿರುವುದು ಭುವನದ ಭಾಗ್ಯ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಪತಿ ಟಿ.ಎಂ. ಭಾಸ್ಕರ್ ತಿಳಿಸಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಆಯೋಜಿಸಿದ್ದ ಡಾ. ಜಗದೀಶ ಹೊಸಮನಿಯವರ ಅಭಿನಂದನಾ ಸಮಾರಂಭ ಹಾಗೂ ನುಡಿ ಮಂದಾರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಬಹುಪಾಲು ವಸಂತಗಳನ್ನು ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗಳಿಗೆ ಮುಡಿಪಾಗಿಟ್ಟಿರುವ ಡಾ. ಜಗದೀಶ ಹೊಸಮನಿ ಅವರು ಅಪಾರ ಶಿಷ್ಯಬಳಗಕ್ಕೆ ಮಾದರಿಯಾಗಿದ್ದಾರೆ. ಸಮಾಜದ ಮತ್ತು ಶಿಕ್ಷಣದ ಸ್ವಾಸ್ಥ್ಯವನ್ನು ಕಾಪಿಟ್ಟುಕೊಂಡು ಎಲೆಮರೆಯ ಕಾಯಿಯಂತೆ ಸೂಕ್ಷ್ಮ ಸಂವೇದನಾಶೀಲರಾಗಿ, ಕರ್ತವ್ಯ ನಿರ್ವಹಿಸಿ ಸರ್ವರಿಂದಲೂ ಸೈ ಎನಿಸಿಕೊಂಡವರು. ಇವರ ಸೇವೆ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು.ಜೂನಿಯರ್ ರಾಜಕುಮಾರ್ ಎಂದೇ ಪ್ರಸಿದ್ಧರಾದ ಅಶೋಕ ಬಸ್ತಿ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ನಾನು ಹಾಗೂ ಪ್ರೊ. ಜಗದೀಶ್ ಬಾಲ್ಯ ಸ್ನೇಹಿತರು. ಸದಾ ಚುರುಕರಾದ ಪಾದರಸದಂತಹ ಗುಣ ಹೊಂದಿದವರು. ಮೂರನೇ ತರಗತಿಯನ್ನು ನಾವಿಬ್ಬರು ಒಟ್ಟಿಗೆ ಓದಿದವರು ಎಂದು ಮೆಲುಕು ಹಾಕಿದರು.
ಡಾ. ಜಗದೀಶ ಹೊಸಮನಿ ಮಾತನಾಡಿ,, ಇದೊಂದು ಅವಿಸ್ಮರಣಿಯ ಸಮಾರಂಭ. ಜೀವಮಾನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದರು.ಸಾನ್ನಿಧ್ಯ ವಹಿಸಿದ್ದ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಶಾಂತಭೀಷ್ಮ ಚೌಡಯ್ಯ ಶ್ರೀಗಳು ಹಾಗೂ ಇತರ ಗಣ್ಯರು ಲತಾಮಣಿ ಟಿ.ಎಂ. ಸಂಪಾದಿಸಿದ ನುಡಿ ಮಂದಾರ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದರು. ಸಾಹಿತಿ ಸತೀಶ ಕುಲಕರ್ಣಿ ಅವರು ನುಡಿ ಮಂದಾರ ಅಭಿನಂದನಾ ಗ್ರಂಥ ಪರಿಚಯಿಸಿದರು.ವೈಷ್ಣವಿ ಹಾನಗಲ್, ತಲಕಾಡ್ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಶಮಂತ್ಕುಮಾರ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶ್ರೀದೇವಿ ದೊಡ್ಡಮನಿ ನಿರೂಪಿಸಿದರು. ಕೀರ್ತಿಪ್ರಾಯ: ಇದೊಂದು ಅದ್ಭುತ ಸಮಾರಂಭ. ಡಾ. ಜಗದೀಶ ನನ್ನ ತಮ್ಮನಂತೆ. ತೊಂಬತ್ತರ ದಶಕದಿಂದ ಸದಾ ನನ್ನ ಒಡನಾಟದಲ್ಲಿದ್ದವನು. ಯಾಲಕ್ಕಿ ಕಂಪಿನ ನಾಡೆಂದು ಪ್ರಸಿದ್ಧವಾದ ಹಾವೇರಿಯಲ್ಲಿ ಸುಮಾರು ವರ್ಷಗಳಿಂದ ಜಿ.ಎಚ್. ಮಹಾವಿದ್ಯಾಲಯದಲ್ಲಿ ಕನ್ನಡದ ಉತ್ತಮ ಪ್ರಾಧ್ಯಾಪಕನಾಗಿ, ಸಂಶೋಧಕನಾಗಿ ಜನಮಾನಸದಲ್ಲಿ ಕೀರ್ತಿಪ್ರಾಯರಾಗಿದ್ದವರು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ತಿಳಿಸಿದರು.