ಮುಂಡರಗಿ: ಬದುಕಿನೂದ್ದಕ್ಕೂ ಹಲವು ಏರಿಳಿತ ಕಂಡ ಕವಿ ಡಾ. ದ.ರಾ.ಬೇಂದ್ರೆಯವರಿಗೆ ಅನುಭಾವಿ ಕವಿ ಅರವಿಂದರ ಸಂಪರ್ಕವಿತ್ತು. ಜನಪದರ ಒಳಮಿಡಿತ ಹಾಗೂ ಭಾಷೆಯ ಸೊಗಡಿನ ಒಡನಾಟವಿತ್ತು. ವೇದೋಪನಿಷತ್ತುಗಳ ಅಧ್ಯಯನವಿತ್ತು. ಹಾಗಾಗಿ ಅವರ ಕಾವ್ಯ ಜನಮನ್ನಣೆ ಪಡೆಯಿತು ಎಂದು ಮಕ್ಕಳ ಸಾಹಿತಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ.ನಿಂಗು ಸೊಲಗಿ ಹೇಳಿದರು.
ದ.ರಾ. ಬೇಂದ್ರೆಯವರು ಬದುಕಿನ ಪ್ರತಿ ಕ್ಷಣ ಭಾವನಾತ್ಮಕ ನೆಲೆಯಲ್ಲಿ ಅನುಭವಿಸಿ ಸೃಜನಾತ್ಮಕ ಅಭಿವ್ಯಕ್ತಿಯಾಗಿ ಕವಿತೆ ಬರೆಯುತ್ತ ಯುಗದ ಕವಿಯಾಗಿ ಹೆಸರಾದವರು. ಬೇಂದ್ರೆಯವರ ಕಾವ್ಯದಲ್ಲಿ ನಾದವಿದೆ. ಜೀವ ಭಾವದ ಮಿಡಿತವಿದೆ. ಜತೆಗೆ ಪ್ರತಿಭಟನೆಯ ಧ್ವನಿಯೂ ಇದೆ.ಅವರು ಹಲವು ಕಷ್ಟ ಮೆಟ್ಟಿ ಬೆಳೆದವರು. ಬ್ರಿಟೀಷ ವಸಾಹತುಶಾಹಿ ವಿರುದ್ಧ ಪದ್ಯ ಬರೆದ ಕಾರಣ ಜೈಲು ವಾಸ ಅನುಭವಿಸಿದರು.ಹಲವು ವರ್ಷಗಳ ಕಾಲ ನಜರಬಂಧಿಯಲ್ಲಿ ಕಾಲ ಕಳೆಯಬೇಕಾಯಿತು. ಕವಿ, ನಾಟಕಕಾರ, ಕತೆಗಾರರಾಗಿ, ಅನುವಾದಕರಾಗಿ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ವರಕವಿ ಬೇಂದ್ರೆಯವರಿಗೆ ಜ್ಞಾನಪೀಠ ಒಲಿದು ಬಂತು ಎಂದು ಅವರು, ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತಲಿತ್ತು, ನೀ ಹೀಂಗ ನೋಡಬ್ಯಾಡ ನನ್ನ, ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ ಮೊದಲಾದ ಗೀತೆಗಳನ್ನು ಸಂದರ್ಭೋಚಿತವಾಗಿ ಹಾಡುತ್ತ ಮಕ್ಕಳ ಮನದಲ್ಲಿ ಬೇಂದ್ರೆ ಕವಿತೆಗಳ ಭಾವವನ್ನು ಡಾ ನಿಂಗು ಬಿತ್ತಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕರ್ನಾಟಕ ಸಂಭ್ರಮ 50 ರ ಅಂಗವಾಗಿ ಕರ್ನಾಟಕ ಏಕೀಕರಣದಲ್ಲಿ ಹೋರಾಡಿದ ಮಹನೀಯರನ್ನು ಹಾಗೂ ಕಲೆ ಸಾಹಿತ್ಯ ಸಂಸ್ಕೃತಿಗಾಗಿ ಹೋರಾಡಿ ಈ ನಾಡಿಗೆ ಮಹತ್ತರವಾದ ಕೊಡುಗೆ ನೀಡಿದ ಮಹನೀಯರ ಜೀವನ ಚರಿತ್ರೆ ಇಂದಿನ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯ ಮಾಡುತ್ತಾ ಬಂದಿದ್ದೇವೆ ಎಂದರು.ಪರಸಪ್ಪ ಹಳ್ಳಿಕೇರಿ ಕಾರ್ಯಕ್ರಮ ಉದ್ಘಾಟಿಸಿದರು.