- ಗಾಂಧಿಸ್ಮೃತಿ ಕಾರ್ಯಕ್ರಮದಲ್ಲಿ ಶಾಸಕ ಡಾ.ಶಾಂತನಗೌಡ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕ್ಯಾನ್ಸರ್ ಕಾಯಿಲೆಗೂ ಚಿಕಿತ್ಸೆ ಇದೆ. ಆದರೆ ಕುಡಿತದ ಚಟ ಬಿಡಿಸಲಿಕ್ಕೆ ಚಿಕಿತ್ಸೆ ಇಲ್ಲದಂತಹ ಸಮಯದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಲಕ್ಷಾಂತರ ಮದ್ಯವ್ಯಸನಿಗಳಿಗೆ ಕುಡಿತದ ಚಟ ಬಿಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅವರ ಶ್ರಮ ನಿಜಕ್ಕೂ ಶ್ಲಾಘನಿಯ. ಅದಕ್ಕಾಗಿಯೇ ಡಾ.ವೀರೇಂದ್ರ ಹೆಗ್ಗಡೆ ಅವರು ಪೂಜ್ಯನೀಯ ಸ್ಥಾನದಲ್ಲಿದ್ದಾರೆ ಎಂದು ಡಿ.ಜಿ. ಶಾಂತನಗೌಡ ಹೇಳಿದರು.ಪಟ್ಟಣದ ಹಿರೇಕಲ್ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಗಾಂಧಿಸ್ಮೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮದ್ಯ ಕುಡಿದರೆ ಹಣ, ಕುಟುಂಬದ ನೆಮ್ಮದಿ ಹಾಳು ಎಂಬ ಅರಿವು ಇರಬೇಕು. ಡಾ.ವೀರೇಂದ್ರ ಹೆಗ್ಗಡೆ ಅವರು ಮದ್ಯಪಾನ ನಿಷೇಧ ಮಾಡಿ ಎಂದು ಇದುವರೆವಿಗೂ ಬಂದ ಎಲ್ಲಾ ಸರ್ಕಾರಗಳಿಗೂ ಮನವಿ ಮಾಡಿದ್ದರು. ಆದರೆ ಯಾವುದೇ ಸರ್ಕಾರಗಳು ಮದ್ಯಪಾನ ನಿಷೇಧ ಮಾಡದಿದ್ದಾಗ ತಾವೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮದ್ಯವರ್ಜನ ಶಿಬಿರಗಳನ್ನು ಏರ್ಪಡಿಸುತ್ತಿದ್ದಾರೆ. ಕುಡಿತದಿಂದ ಮನೆ, ಬಂಧುಗಳ ಕಳೆದುಕೊಂಡಿದ್ದ ಲಕ್ಷಾಂತರ ಜನರಿಗೆ ಮದ್ಯವ್ಯಸನದಿಂದ ಮುಕ್ತಗೊಳಿಸಿ ಅವರ ಜೀವನಕ್ಕೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು.
ಸರ್ಕಾರಿ ಶಾಲೆ ಮುಖೋಪಾಧ್ಯಾಯಿನಿ ರತ್ನಮ್ಮ ಗಾಂಧೀಜಿ ಬಗ್ಗೆ, ಜಿಲ್ಲಾ ಯೋಜನಾಧಿಕಾರಿ ಲಕ್ಷ್ಮಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊಸಕೇರಿ ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
- - -
ಗಾಂಧಿಸ್ಮೃತಿ ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು. ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀ, ಇತರ ಗಣ್ಯರು ಇದ್ದರು.