ಯಾದಗಿರಿ : ಇತ್ತೀಚೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕರ್ನಾಟಕದಲ್ಲಿ ಲೋಕಸಭೆ ಫಲಿತಾಂಶ ನಂತರ ಬಿಜೆಪಿ ಖಂಡಿತ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿಕೆ ನೀಡಿರುವುದಕ್ಕೆ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಈ 5 ವರ್ಷ ಅಲ್ಲದೇ ಮುಂದಿನ 5 ವರ್ಷಗಳವರೆಗೆ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದು ವ್ಯಂಗವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆ ಮೊದಲು ಬಿಜೆಪಿ ನಾಯಕರು ದೇಶದಲ್ಲಿ ಈ ಭಾರಿ ಪಕ್ಷ 400 ಸ್ಥಾನ ಗಳಿಸುತ್ತದೆ ಎಂದು ಅತೀ ಆತ್ಮವಿಶ್ವಾಸದಿಂದ ಬೀಗಿದರು. ಈಗಾಗಲೇ 4ನೇ ಹಂತದ ಚುನಾವಣೆ ಮುಕ್ತಾಯಗೊಂಡಿದೆ. ಆದರೆ, ಬಿಜೆಪಿ ನಾಯಕರಲ್ಲಿ ತಮ್ಮ ಪಕ್ಷ ಹಾಗೂ ಎನ್ಡಿಎ ಮೈತ್ರಿಕೂಟ ತಮ್ಮ ನಿರೀಕ್ಷೆಯಂತೆ ಸ್ಥಾನಗಳು ಬರುವುದಿಲ್ಲ ಎಂದು ಅವರ ಮನಸ್ಸಿಗೆ ಖಚಿತವಾಗಿದೆ. ಪರಿಣಾಮ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಇತರ ನಾಯಕರು ಎಲ್ಲೂ ಇದರ ಬಗ್ಗೆ ಮಾತನಾಡುತ್ತಿಲ್ಲ. ಈ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಉತ್ತಮ ಸಾಧನೆ ಮಾಡಲಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ನಡೆಸಿದ ದುರಾಡಳಿತದಿಂದ ಜನರು ಬೇಸತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ನೀಡಿ ಗೆಲ್ಲಿಸುವ ಮೂಲಕ ಮತದಾರರು ಸ್ಪಷ್ಟ ಬಹುಮತ ನೀಡಿದ್ದಾರೆ. ಆದರೆ, ಮಹಾರಾಷ್ಟ್ರದಲ್ಲಿ 3 ಪಕ್ಷಗಳು ಕೂಡಿ, ಮುಖ್ಯಮಂತ್ರಿಯಾಗಿ ಏಕನಾಥ ಶಿಂಧೆಯವರು ದಿನಾಲು ಹಲವಾರು ಒತ್ತಡಗಳ ಮಧ್ಯೆ ಅಧಿಕಾರ ನಡೆಸುತ್ತಿದ್ದಾರೆ, ಅವರಿಗೆ ನಮ್ಮ ರಾಜ್ಯದಲ್ಲಿ ನಮ್ಮ ಪಕ್ಷದ 4 ಶಾಸಕರನ್ನು ಕರೆದುಕೊಂಡು ಹೋಗುವ ಧೈರ್ಯವಿಲ್ಲ, ಆ ರಾಜ್ಯದಲ್ಲೆ ಜನಪ್ರೀಯತೆ ಕಳೆದುಕೊಂಡಿದ್ದಾರೆ. ಮೊದಲು ಅವರು ತಮ್ಮ ಸರ್ಕಾರ ಉಳಿಸಿಕೊಳ್ಳಲಿ ಎಂದು ಸವಾಲು ಹಾಕಿದರು.
ಇನ್ನು ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಕುರಿತು ಮಾತನಾಡಿದ ಅವರು, ಈ ವಿಷಯದಲ್ಲಿ ಅವರು ತಪ್ಪು ಮಾಡಿರುವುದು ಸತ್ಯ ಎಂಬುದು ಅವರಿಗೆ ಮನವರಿಕೆಯಾಗಿದೆ. ಪರಿಣಾಮ ಭಯದಿಂದ ವಿದೇಶಕ್ಕೆ ತೆರಳಿದ್ದಾರೆ. ಅವರಿಗೆ ಕೇಂದ್ರದ ಬಿಜೆಪಿ ಸರ್ಕಾರ ಸಂಪೂರ್ಣ ಸಹಕರಿಸಿದೆ ಎಂದು ದೂರಿದರು.