ಶಿವಕುಮಾರ ಕುಷ್ಟಗಿ ಗದಗ
10 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಕೋಟುಮಚಗಿ ತಾಲೂಕಿನಲ್ಲಿ ದೊಡ್ಡ ಗ್ರಾಮ. ಆದರೆ ಈ ಗ್ರಾಮದಲ್ಲಿ ಪ್ರಸಕ್ತ ಬೇಸಿಗೆಯಲ್ಲಿ ನೀರಿನ ಬವಣೆ ತೀವ್ರವಾಗಿದ್ದು, ಸಮಸ್ಯೆ ಕೂಡಾ ದೊಡ್ಡದಾಗಿಯೇ ಬೆಳೆದು ನಿಂತಿದ್ದು ಜನರು ತತ್ತರಿಸಿ ಹೋಗಿದ್ದಾರೆ.
3 ಆರ್ ಓ ಪ್ಲ್ಯಾಂಟ್: ಕೋಟುಮಚಗಿ ಗ್ರಾಮದಲ್ಲಿ ಪ್ರಸ್ತುತ 3 ಶುದ್ಧ ಕುಡಿವ ನೀರಿನ ಘಟಕಗಳಿದ್ದು, ಮೂರರಲ್ಲಿ ಎರಡು ಸ್ಥಗಿತಗೊಂಡು ಹಲವಾರು ತಿಂಗಳು ಕಳೆದಿವೆ, ಇನ್ನುಳಿದ ಒಂದನ್ನು ಕಳೆದ ಮೂರು ದಿನಗಳ ಹಿಂದಷ್ಟೇ ರಿಪೇರಿ ಮಾಡಿಸಿದ್ದು, ಅದೊಂದೇ ಘಟಕದಿಂದ ಇಡೀ ಗ್ರಾಮದ ಜನರಿಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡಲು ಸಾಧ್ಯವಾಗದೇ ಆಗಾಗ್ಗೆ ಸ್ಥಗಿತಗೊಳ್ಳುತ್ತಿದ್ದು, ಅನಿವಾರ್ಯವಾಗಿ ಗ್ರಾಮಸ್ಥರು ಮತ್ತೆ ಅಕ್ಕಪಕ್ಕದ ಊರಿಗೆ ತೆರಳಿ ಶುದ್ಧ ಕುಡಿವ ನೀರು ತರುವಂತಾಗಿದೆ.ನೀರು ಕೊಡಲು ಆಗುತ್ತಿಲ್ಲ: ಗ್ರಾಮದಲ್ಲಿ ಕುಡಿವ ನೀರಿಗೆ ಮಾತ್ರವಲ್ಲದೇ ನಿತ್ಯವೂ ಸಾರ್ವಜನಿಕರು ಬಳಕೆ ಮಾಡುವ ನೀರಿನ ಪರಿಸ್ಥಿತಿ ಕೂಡಾ ತೀರಾ ಹದಗೆಟ್ಟಿದ್ದು, ಸದ್ಯ 18 ರಿಂದ 20 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಗ್ರಾಮಸ್ಥರಿಗೆ ನೀರು ತರುವುದೇ ಒಂದು ಉದ್ಯೋಗವಾಗಿ ಮಾರ್ಪಟ್ಟಿದೆ. ಈ ಗ್ರಾಮಕ್ಕೆ ನೀರು ಪೂರೈಕೆ ಮಾಡುವ ನಾಲ್ಕಕ್ಕೂ ಹೆಚ್ಚು ಕೊಳವೆ ಬಾವಿಗಳಿದ್ದು, ಎಲ್ಲದರಲ್ಲಿ ಹೇರಳವಾದ ನೀರು ಲಭ್ಯವಿದೆ. ಆದರೆ ಅಧಿಕಾರಿಗಳು ಮತ್ತು ಗ್ರಾಪಂ ಸಮನ್ವಯತೆಯ ಕೊರತೆಯಿಂದ ಸೂಕ್ತ ರೀತಿಯಲ್ಲಿ ನೀರು ಸಂಗ್ರಹಿಸಿ ವಿತರಣೆ ಮಾಡಲು ಸಾಧ್ಯವಾಗದೇ ಇರುವುದು ಕೂಡಾ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರ ನೇರ ಪರಿಣಾಮ ಏನೂ ಅರಿಯದ ಸಾರ್ವಜನಿಕರು ಎದುರಿಸುತ್ತಿದ್ದಾರೆ.
ಜನರೇಕೆ ಕುಡಿಯುತ್ತಿಲ್ಲ: ಕೋಟುಮಚಗಿ ಗ್ರಾಮ ಸೇರಿದಂತೆ ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಸದ್ಯ ಪೂರೈಕೆ ಮಾಡುತ್ತಿರುವ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಪರೀಕ್ಷಾ ವರದಿಗಳು ಬಂದಿವೆ. ಆ ವರದಿಗಳನ್ನು ನಿಮಗೆ ಕೊಡುತ್ತೇವೆ ಎನ್ನುತ್ತಾರೆ ಅಧಿಕಾರಿಗಳು. ಆದರೆ ಆಯಾ ಗ್ರಾಮಗಳಲ್ಲಿನ ಜನರು ಮಾತ್ರ ಕೊಳವೆಬಾವಿಗಳಿಂದ ಪೂರೈಕೆ ಮಾಡುವ ನೀರು ಗಡುಸಾಗಿದೆ, ಆ ನೀರನ್ನು ನಾವಲ್ಲ, ಜಾನುವಾರು ಸಹ ಕುಡಿಯುತ್ತಿಲ್ಲ ಎನ್ನುತ್ತಾರೆ.
ಮನೆಯಲ್ಲಿ ದ್ವಿಚಕ್ರ ವಾಹನ ಇದ್ದವರು ಅಕ್ಕಪಕ್ಕದ ಊರಿಗೆ ಹೋಗಿ ಕುಡಿವ ನೀರು ತರುತ್ತಾರೆ, ವಾಹನ ಇಲ್ಲದವರು, ಮನೆಯಲ್ಲಿ ವಯೋವೃದ್ಧರು ಇರುವವರು ಅನಿವಾರ್ಯವಾಗಿ ಎರಡು ಮೂರು ದಿನವಾದರೂ ಸರಿ ಸರದಿ ಸಾಲಿನಲ್ಲಿ ನಿಂತು ಕುಡಿವ ನೀರು ಪಡೆಯುವಂತಾಗಿದೆ.
ಕಳೆದ ಕೆಲ ದಿನಗಳಿಂದ ನೀರಿನ ಸಮಸ್ಯೆ ಇತ್ತು ಅದನ್ನು ಸರಿಪಡಿಸಲಾಗಿದೆ. 3ಆರ್ ಓ ಪ್ಲ್ಯಾಂಟ್ ಗಳಲ್ಲಿ ಒಂದನ್ನು ಸರಿಪಡಿಸಲಾಗಿದೆ. ಇನ್ನೆರಡು ಸರಿಪಡಿಸುವುದು ಹಾಗೂ ನೀರು ಪೂರೈಕೆಯಲ್ಲಿ ಆಗುತ್ತಿರುವ ವಿಳಂಬ ಕುರಿತು ಚರ್ಚಿಸಲು ತುರ್ತು ಸಭೆ ಕರೆಯಲಾಗಿದೆ ಎಂದು ಕೋಟುಮಚಗಿ ಪಿಡಿಓ ಸಂತೋಷ ಎಂ.ಎಚ್ ಹೇಳಿದರು.