ವಿಘ್ನೇಶ್ ಎಂ. ಭೂತನಕಾಡು
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬೇಸಗೆಯಲ್ಲಿ ಸತತವಾಗಿ ಮಳೆಯಾದ ಪರಿಣಾಮ ಕುಡಿಯುವ ನೀರಿನ ಸಮಸ್ಯೆ, ಕಾಡ್ಗಿಚ್ಚು ಭೀತಿ, ಮೇವಿನ ಕೊರತೆ ಸೇರಿದಂತೆ ಸಾಕಷ್ಟು ಬೇಸಗೆಯಲ್ಲಿ ಸೃಷ್ಟಿಯಾಗುವ ಸಮಸ್ಯೆಗಳು ಈ ಬಾರಿ ದೂರವಾಗಿದೆ.
ಕಾವೇರಿ ತವರು ಕೊಡಗು ಜಿಲ್ಲೆಯಲ್ಲೂ ಕೂಡ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಆದರೆ ಈ ವರ್ಷ ಮಾರ್ಚ್, ಏಪ್ರಿಲ್ ಹಾಗೂ ಮೇ ಆರಂಭದಲ್ಲೂ ಕೂಡ ಜಿಲ್ಲೆಯ ಅಲ್ಲಲ್ಲಿ ಉತ್ತಮ ಬೇಸಗೆ ಮಳೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ. ಇನ್ನೊಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಮಳೆಗಾಲ ಕೂಡ ಆರಂಭವಾಗುವುದರಿಂದ ನೀರಿನ ಸಮಸ್ಯೆ ತಲೆದೋರುವ ಪರಿಸ್ಥಿತಿ ತೀರಾ ಕಡಿಮೆಯಾಗಿದೆ.ಮಡಿಕೇರಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಕೂಟುಹೊಳೆಯಲ್ಲೂ ಕೂಡ ಸಾಕಷ್ಟು ನೀರು ಇರುವದರಿಂದ ಈ ಬಾರಿ ನಗರದಲ್ಲಿ ನೀರಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಪ್ರತಿ ವರ್ಷ ಕೂಡ ಬೇಸಗೆ ಆರಂಭವಾದರೆ ನಗರದ ವಿವಿಧ ಕಡೆಗಳಲ್ಲಿ ಸಾಮಾನ್ಯವಾಗಿ ನೀರಿನ ಸಮಸ್ಯೆ ಎದುರಾಗಿ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುತ್ತಿತ್ತು.
ಮೇವಿನ ಕೊರತೆಯೂ ಕ್ಷೀಣ: ಬೇಸಗೆಯಲ್ಲಿ ಸಾಕಷ್ಟು ಮೇವಿನ ಕೊರತೆಯನ್ನು ಜಿಲ್ಲೆಯ ಹೈನುಗಾರರು ಎದುರಿಸುತ್ತಿದ್ದರು. ತಮ್ಮ ಜಾನುವಾರುಗಳಿಗೆ ಒಣ ಹುಲ್ಲನ್ನು ನೀಡುವ ಪರಿಸ್ಥಿತಿ ಎದುರಾಗಿತ್ತು. ಆದರೆ ಈಗ ಹೊಲ, ಗದ್ದೆಗಳು ಕೂಡ ಹಸಿರಾಗಿದ್ದು, ಜಾನುವಾರುಗಳಿಗೂ ಕೂಡ ಸಾಕಷ್ಟು ಮೇವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಾಡಿನ ಪ್ರದೇಶ ಒಣಗಿ ಕಾಡು ಪ್ರಾಣಿಗಳಿಗೆ ಮೇವಿನ ಕೊರತೆಯುಂಟಾಗಿತ್ತು. ಆದರೆ ಈ ಬಾರಿ ಮಳೆಯಾದ ಹಿನ್ನೆಲೆಯಲ್ಲಿ ಮೇವಿನ ಕೊರತೆ ಹಾಗೂ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ.
ಸತತ ಮಳೆಯಿಂದಾಗಿ ಜಿಲ್ಲೆಯ ಅರಣ್ಯ ಪ್ರದೇಶವೂ ಕೂಡ ಹಸಿರಾಗಿದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾಡ್ಗಿಚ್ಚು ಭೀತಿ ಎದುರಾಗುತ್ತದೆ. ಅಲ್ಲದೆ ಪ್ರತಿ ವರ್ಷ ಕೊಡಗಿನ ಕೆಲವು ಅರಣ್ಯ ಪ್ರದೇಶಗಳು ಬಿಸಿಲಿನ ತಾಪಮಾನ ಏರಿಕೆಯ ಪರಿಣಾಮ ಕಾಡ್ಗಿಚ್ಚು ಉಂಟಾಗಿತ್ತು. ಈ ಬಾರಿ ಅರಣ್ಯ ಪ್ರದೇಶ ಹಸಿರಿನಿಂದ ಕೂಡಿದ್ದು, ಶೀತಾಂಶವಿದೆ. ಇದರಿಂದ ಕಾಡ್ಗಿಚ್ಚು ಸಂಭವಿಸುವ ಭೀತಿ ಈ ವರ್ಷ ದೂರವಾಗಿದೆ.ಬೇಸಿಗೆಯಲ್ಲಿ ಕಾವೇರಿ ನೀರು ಬತ್ತುವ ಪರಿಣಾಮ ಮಾದಪಟ್ಟಣ ಹಾಗೂ ಬಸವನಹಳ್ಳಿಯಲ್ಲಿ ನೀರಿನ ಕೊರತೆಯುಂಟಾಗುತ್ತದೆ. ಕಳೆದ ವರ್ಷ ಡಿಸೆಂಬರ್ನಲ್ಲೇ ಸಾಕಷ್ಟು ನೀರಿನ ಕೊರತೆಯುಂಟಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಈ ಬಾರಿ ಬೇಸಿಗೆಯಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಕಾವೇರಿಯಲ್ಲಿ ನೀರು ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ.
ಕಳೆದ ವರ್ಷ ಇದೇ ಅವಧಿಯಲ್ಲಿ ಕಾಡಿನ ಪ್ರದೇಶ ಒಣಗಿ ಕಾಡು ಪ್ರಾಣಿಗಳಿಗೆ ಮೇವಿನ ಕೊರತೆಯುಂಟಾಗಿತ್ತು. ಆದರೆ ಈ ಬಾರಿ ಮಳೆಯಾದ ಹಿನ್ನೆಲೆಯಲ್ಲಿ ಮೇವಿನ ಕೊರತೆ ಹಾಗೂ ಕಾಡುಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ. ಅಲ್ಲದೆ ಕಾಡ್ಗಿಚ್ಚು ಆತಂಕವೂ ದೂರವಾಗಿದೆ. ಮಳೆಯ ಹಿನ್ನೆಲೆಯಲ್ಲಿ ನಾಡಿಗೆ ಬರುವ ಕಾಡು ಪ್ರಾಣಿಗಳ ಪ್ರಮಾಣ ಕೂಡ ಕಡಿಮೆಯಾಗಿದೆ.