ಕನ್ನಡಪ್ರಭ ವಾರ್ತೆ ಬೆಂಗಳೂರು
ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ(ಹಾಪ್ಕಾಮ್ಸ್)ವು ನೃಪತುಂಗ ರಸ್ತೆಯ ಹಡ್ಸನ್ ವೃತ್ತದಲ್ಲಿ ಆಯೋಜಿಸಿದ್ದ ದ್ರಾಕ್ಷಿ ಮತ್ತು ಕಲ್ಲಂಗಡಿ ಮಾರಾಟ ಮೇಳಕ್ಕೆ ಸೋಮವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಫೆ.29 ರವರೆಗೂ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳ ಮಾರಾಟ ಮೇಳ ಆಯೋಜಿಸಲಾಗಿದೆ.
ಪ್ರತಿ ಕೆ.ಜಿ.ಗೆ ಶೇ.10ರಷ್ಟು ರಿಯಾಯಿತಿ ದೊರೆಯಲಿದ್ದು, ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಬೆಳೆಗಾರರನ್ನು ಪ್ರೋತ್ಸಾಹಿಸಲು ಮತ್ತು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಹಣ್ಣುಗಳು ಸಿಗಲಿ ಎಂಬ ಸದುದ್ದೇಶದಿಂದ ಹಾಪ್ಕಾಮ್ಸ್ನವರು ಮೇಳ ಆಯೋಜಿಸಿದ್ದಾರೆ.
ಕಳೆದ ಆರು ದಶಕರಿಂದ ಬೆಂಗಳೂರಿನ ಗ್ರಾಹಕರಿಗೆ ತಾಜಾ ಹಣ್ಣು ಮತ್ತು ತರಕಾರಿ ಸರಬರಾಜು ಮಾಡುವ ಸೇವೆಯಲ್ಲಿ ಹಾಪ್ಕಾಮ್ಸ್ ತೊಡಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಬಾರಿ ಬಿಸಿಲು ಹೆಚ್ಚಾಗಿರುವುದರಿಂದ ದ್ರಾಕ್ಷಿ ಹಣ್ಣು ಹೆಚ್ಚು ರುಚಿಕರವಾಗಿವೆ. ಬೆಂಗಳೂರು ನೀಲಿ, ಕೃಷ್ಣ ಶರದ್, ಸೋನಾಕಾ, ಇಂಡಿಯನ್ ರೆಡ್ ಗ್ಲೋಬ್, ಜಂಬೂ ಶರದ್ ಸೇರಿದಂತೆ 11 ದ್ರಾಕ್ಷಿ ತಳಿಗಳು ಹಾಗೂ ನಾಮಧಾರಿ, ಕಿರಣ್ ಮತ್ತು ಹಳದಿ ತಿರುಳಿನ ಕಲ್ಲಂಗಡಿ ಹಣ್ಣುಗಳು ಮಾರಾಟಕ್ಕಿವೆ ಎಂದು ವಿವರಿಸಿದರು.
ತೋಟಗಾರಿಕಾ ಇಲಾಖೆ ನಿರ್ದೇಶಕ ಡಿ.ಎಸ್.ರಮೇಶ್, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಸಿ.ಪಾಪಣ್ಣ, ಹಾಪ್ಕಾಮ್ಸ್ ಅಧ್ಯಕ್ಷ ಎನ್.ದೇವರಾಜ್, ವ್ಯವಸ್ಥಾಪಕ ನಿರ್ದೇಶಕ ಮಿರ್ಜಿ ಉಮೇಶ ಶಂಕರ ಉಪಸ್ಥಿತರಿದ್ದರು.