ಇತ್ತೀಚೆಗೆ ಯುವ ಜನಾಂಗಕ ಹೆಚ್ಚು ಹೆಚ್ಚು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಯುವ ಜನರಲ್ಲಿ ದುಶ್ಚಟಗಳ ವಿರುದ್ಧ ಅರಿವು ಮತ್ತು ಮಾದಕ ವಸ್ತು ನಿರ್ಮೂಲನೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳ ಜತೆಗೂಡಿ ಅಗರವಾಲ್ ಸಮಾಜದ ವತಿಯಿಂದ ಮಾನವ ಸರಪಳಿ ರಚಿಸಲಾಯಿತು.
ನಗರದ ಜಿಎಸ್ಎಸ್ಎಸ್ ಕಾಲೇಜು, ಎನ್ಎಸ್ಎಸ್ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಈ ಬೃಹತ್ಮಾನವ ಸರಪಳಿ ನಿರ್ಮಾಣದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇತ್ತೀಚೆಗೆ ಯುವ ಜನಾಂಗಕ ಹೆಚ್ಚು ಹೆಚ್ಚು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಉಜ್ವಲವಾಗಿ ರೂಪುಗೊಳ್ಳಬೇಕಾದ ಅವರ ಭವಿಷ್ಯ ಈ ವ್ಯಸನದಿಂದಾಗಿ ಬಲಿಯಾಗುತ್ತಿದೆ. ಆದ್ದರಿಂದ ಇಂತಹ ಜಾಗೃತಿ ಕಾರ್ಯಕ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಕಾಲೇಜು ವಿದ್ಯಾರ್ಥಿಗಳು, ಯುವಜನರು ಮತ್ತು ಮಕ್ಕಳು ಮಾದಕ ವಸ್ತುಗಳ ಬಳಕೆಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಅಂತಹ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ಆಯೋಜಕ ಅಗರವಾಲ್ ಸಮಾಜದ ಮುಖಂಡ ಎಸ್.ಕೆ. ಮಿತ್ತಲ್ ತಿಳಿಸಿದರು.
ಈ ವೇಳೆ ಮೈವಿವಿ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ಎಂ.ಬಿ. ಸುರೇಶ್, ಎನ್ಸಿಸಿ ಅಧಿಕಾರಿ ಕರ್ನಲ್ ರೋಹಿತ್ ಠಾಕೂರ್, ಡಾ. ಮಂಜುನಾಥ್, ರಂಗನಾಥ್, ಎನ್.ಆರ್. ಮಂಜುನಾಥ್, ವಿಕ್ರಂ ಅಯ್ಯಂಗಾರ್, ದತ್ತಾತ್ರೇಯ ಶಿಂಧೆ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.