ಜಿಲ್ಲೇಲಿ ವ್ಯಾಪಕವಾಗಿ ಹರಡುತ್ತಿರುವ ಮಾದಕವಸ್ತು ಸರಬರಾಜು: ಮಾಜಿ ಶಾಸಕ ಮಸಾಲಾ ಜಯರಾಮ್ ಕಳವಳ

KannadaprabhaNewsNetwork |  
Published : Jul 15, 2025, 11:45 PM IST
15 ಟಿವಿಕೆ 1 – ತುರುವೇಕೆರೆಯ ಮಾಜಿ ಶಾಸಕ ಮಸಾಲಾ ಜಯರಾಮ್ ಪತ್ರಿಕಾಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ತುರುವೇಕೆರೆ ತಾಲೂಕು ಮಾಯಸಂದ್ರದಲ್ಲೂ ಅಪರಾಧ ಪ್ರಕರಣ ಹೆಚ್ಚಾಗಿರುವುದು ಆತಂಕ ಸೃಷ್ಟಿಸಿದೆ. ಗಾಂಜಾ ಸೇವನೆಯಿಂದ ಪ್ರಭಾವಿತರಾದ ಕೆಲವರು ಅಂಗಡಿಗಳಿಗೆ ನುಗ್ಗಿ ಅಂಗಡಿಯ ಮಾಲೀಕರನ್ನು ಹೆದರಿಸಿ, ಮೊಬೈಲ್ ಕಳವು ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಗೃಹ ಸಚಿವರೇ ತಮ್ಮ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಸರಬರಾಜು ಹೆಚ್ಚುತ್ತಿದೆ, ಗಾಂಜಾ, ಅಫೀಮು ಸೇರಿ ವಿವಿಧ ಮಾದಕ ವಸ್ತುಗಳ ಸೇವನೆಯಿಂದ ಯುವ ಜನತೆ ದಾರಿ ತಪ್ಪುತ್ತಿದ್ದಾರೆ. ಈಗಲಾದರೂ ಪೊಲೀಸ್ ವ್ಯವಸ್ಥೆಯನ್ನು ಬಿಗಿಗೊಳಿಸದಿದ್ದರೆ ಅಮಾಯಕ ಜನರು ಬಲಿಯಾಗುವ ಸಾಧ್ಯತೆ ಇದೆ ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಹೇಳಿದರು.

ಚಿಕ್ಕೋನಹಳ್ಳಿಯ ಫಾರಂ ಹೌಸ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಅದರಲ್ಲೂ ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಸರಬರಾಜು ಹೆಚ್ಚುತ್ತಿದೆ. ರಾಜ್ಯದ ಗೃಹ ಸಚಿವರ ಕ್ಷೇತ್ರದಲ್ಲೇ ವ್ಯಾಪಕವಾಗಿ ಈ ಜಾಲ ಹರಡುತ್ತಿದ್ದು, ಬೇರೆ ಜಿಲ್ಲೆಗಳ ಗತಿ ಏನು ಎಂದು ಪ್ರಶ್ನಿಸಿದ್ದಾರೆ.

ತಮ್ಮ ಸ್ವಗ್ರಾಮ ಅಂಕಳಕೊಪ್ಪದಲ್ಲೇ ಮಾದಕ ವಸ್ತುಗಳ ಸೇವನೆ ಮತ್ತು ಸರಬರಾಜು ಹೆಚ್ಚಿದೆ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ತಿಳಿಸಿದರೆ, ಮಾರುವವರಿಗೇ ಪೊಲೀಸರು ಮಾಹಿತಿ ನೀಡಿ ಪರಾರಿಯಾಗುವಂತೆ ಮಾಡುತ್ತಿದ್ದಾರೆಂದು ಮಸಾಲಾ ಜಯರಾಮ್ ಆರೋಪಿಸಿದರು.

ಇತ್ತೀಚೆಗೆ ತಮ್ಮ ಗ್ರಾಮದಲ್ಲಿ ಮಾದಕ ದ್ರವ್ಯಗಳ ವ್ಯಸನಿಯೋರ್ವ ತಮ್ಮ ಸಂಬಂಧಿಯೋರ್ವರನ್ನು ಕೊಚ್ಚಿ ಕೊಲೆ ಮಾಡಿದ. ಮಾದಕ ವಸ್ತು ಸೇವಿಸುವ ಯುವಕರು ವ್ಹೀಲಿಂಗ್ ಮಾಡುವ ಹುಚ್ಚಾಟ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಿರಾತಂಕವಾಗಿ ನಡೆಯುತ್ತಿವೆ. ಇದನ್ನು ನಿಯಂತ್ರಿಸಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಅವರು ದೂರಿದರು.

ತುರುವೇಕೆರೆ ತಾಲೂಕು ಮಾಯಸಂದ್ರದಲ್ಲೂ ಅಪರಾಧ ಪ್ರಕರಣ ಹೆಚ್ಚಾಗಿರುವುದು ಆತಂಕ ಸೃಷ್ಟಿಸಿದೆ. ಗಾಂಜಾ ಸೇವನೆಯಿಂದ ಪ್ರಭಾವಿತರಾದ ಕೆಲವರು ಅಂಗಡಿಗಳಿಗೆ ನುಗ್ಗಿ ಅಂಗಡಿಯ ಮಾಲೀಕರನ್ನು ಹೆದರಿಸಿ, ಮೊಬೈಲ್ ಕಳವು ಮಾಡಿದ್ದಾರೆ. ಡಾಬಾವೊಂದಕ್ಕೆ ನುಗ್ಗಿ ಊಟ ಮಾಡುತ್ತಿರುವವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಆದರೂ ಸಹ ಪೊಲೀಸರು ಅವರನ್ನು ಬಂಧಿಸಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆ: ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವುದನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ತಾವು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದರೂ ಸಹ ಏನೂ ಪ್ರಯೋಜನವಾಗಿಲ್ಲ. ಹಾಗಾಗಿ ಇನ್ನು ಕೆಲವು ದಿನ ಕಾಲ ನೋಡಿ ಎಸ್ಪಿ ಕಚೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಮಸಾಲಾ ಜಯರಾಮ್ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ಮಾಜಿ ಸದಸ್ಯ ಲಕ್ಷ್ಮೀನರಸಿಂಹ (ಲಚ್ಚಿ), ಮುಖಂಡರಾದ ವಿ.ಬಿ.ಸುರೇಶ್, ನಾಗಲಾಪುರ ಮಂಜಣ್ಣ, ಡ್ರೈವಿಂಗ್ ಸ್ಕೂಲ್ ಬಸವರಾಜು, ಜಗದೀಶ್, ಕಾಳಂಜೀಹಳ್ಳಿ ಸೋಮಣ್ಣ ಸೇರಿ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ