ಪವನಕುಮಾರ ಲಮಾಣಿ
ಕನ್ನಡಪ್ರಭ ವಾರ್ತೆ ಸವಣೂರುಎಲ್ಲೆಡೆ ಬಿಸಿಲಿನ ಜಳ ಹೆಚ್ಚುತ್ತಿದ್ದು, ಕುಡಿಯುವ ನೀರಿನ ಬವಣೆಯಿಂದ ಜನ ತತ್ತರಿಸುತ್ತಿದ್ದಾರೆ. ಪಟ್ಟಣದ ನಿವಾಸಿಗಳಿಗೆ 15 ದಿನಗಳಿಗೆ ಒಮ್ಮೆಯೂ ನೀರು ಸಿಗದಂತಾಗಿದ್ದು, ಗ್ರಾಮೀಣ ಭಾಗದ ಜನರು ನೀರಿಗಾಗಿ ಪರದಾಡುವಂತಾಗಿದೆ. ಇನ್ನು ಜಾನುವಾರುಗಳಿಗಂತೂ ನೀರಿಗಾಗಿ ಹುಡುಕಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಕುಡಿಯುವ ನೀರಿನ ಬವಣೆ ಎಲ್ಲೆಡೆ ಕಾಣಿಸಿಕೊಂಡಿದೆ. ಆದರೆ, ಅಧಿಕಾರಿಗಳು ಯಾವುದೇ ರೀತಿ ಕ್ರಮಕ್ಕೆ ಮುಂದಾಗದೆ ಚುನಾವಣೆ ಕರ್ತವ್ಯದಲ್ಲೇ ನಿರತರಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರ ಪ್ರದೇಶಗಳಲ್ಲಿ ೧೫ರಿಂದ ೨೦ ದಿನಗಳ ವರೆಗೂ ನೀರು ಸಿಗುವುದು ವಿರಳವಾಗಿದೆ ಎನ್ನುತ್ತಾರೆ ನಗರ ನಿವಾಸಿ ಮುಜಾಯಿದ್ ಖಾನ್ ಐರಾಣಿ.ವರದಾ ನದಿ ಬತ್ತಿ ಎರಡು ತಿಂಗಳಾಗಿದ್ದು, ಕೆರೆಕಟ್ಟೆಗಳು ಬರಡಾಗಿವೆ. ಪಟ್ಟಣದ ಪುರಾತನ ಮೋತಿ ತಲಾಬ್ ಕೂಡ ಬತ್ತುತ್ತಿದೆ. ಕೆರೆ ತುಂಬಿಸುವ ಯೋಜನೆ ಮಾಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಗಳು ಬರಡಾಗಿವೆ. ಇದರಿಂದ ವೀಳ್ಯದೆಲೆ ತೋಟಗಳು ಕೆಂಪಗಾಗುತ್ತಿವೆ. ಹೀಗಾಗಿ, ಬಡ ಕೂಲಿ ಕಾರ್ಮಿಕರು ಗುಳೆ ಹೋಗುತ್ತಿದ್ದಾರೆ. ಗುಳೆ ತಡೆಯುವ ಯಾವ ಕಾರ್ಯವೂ ಆಗುತ್ತಿಲ್ಲ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಎರಡು ತಿಂಗಳ ಕಾಲ ಬೇಸಿಗೆಯಲ್ಲಿ ಕುಡಿಯುವ ನೀರನ್ನು ಹೇಗೆ ಪೂರೈಸುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಬೋರ್ವೆಲ್ಗಳು ಕೂಡ ಬರಡಾಗುತ್ತಿದೆ. ಇದರಿಂದ ಗ್ರಾಮ ಪಂಚಾಯ್ತಿಗಳಿಂದ ನೀರು ಪೂರೈಸುವುದು ಕಷ್ಟಕರವಾಗಿದೆ. ನಗರ ಪ್ರದೇಶಗಳಲ್ಲಿ ಹಂತ ಹಂತವಾಗಿ ನೀರನ್ನು ಪೂರೈಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಕಂಡು ಬಂದಲ್ಲಿ ರೈತರಿಂದ ಬೋರ್ವೆಲ್ಗಳನ್ನು ಅವಶ್ಯವಿದ್ದರೆ ಪಡೆದು ಕುಡಿಯುವ ನೀರಿಗಾಗಿ ಬಳಸಿಕೊಳ್ಳಲಾಗುವುದು. ಬರಗಾಲವಾಗಿರುವುದರಿಂದ ಜನ ನೀರನ್ನು ಮಿತವಾಗಿ ಬಳಸಿ ಎಂದು ತಾಪಂ ಇಒ ಎಫ್.ಜಿ. ಚಿನ್ನಣ್ಣವರ ಹೇಳಿದರು.ಬೇಸಿಗೆಯಲ್ಲಿ ನೀರಿನ ಅಭಾವ ಅತಿ ಹೆಚ್ಚು ಕಂಡುಬಂದಿದೆ. ಪ್ರಾಣಿ ಪಕ್ಷಿಗಳಿಗೆ ನೈಸರ್ಗಿಕವಾಗಿ ನೀರು ಸಿಗುತ್ತಿಲ್ಲ. ತಾಲೂಕಿನ ಜನರು ಹಾಗೂ ಪ್ರಾಣಿ, ಪಕ್ಷಿಗಳು ಬಿಸಿಲಿನ ಜಳಕ್ಕೆ ತತ್ತರಿಸಿ ಹೋಗಿದ್ದಾರೆ. ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನದಿಂದ ನದಿ ಕೆರೆಗಳು ಬತ್ತಿ ಹೋಗಿವೆ. ೧೯ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ನೀರಿನ ಬವಣೆ ಎದ್ದು ಕಾಣುತ್ತಿದೆ. ಕಿಮೀ ದೂರದ ರೈತರ ಬೋರ್ವೆಲ್ಗಳಿಂದ ನೀರನ್ನು ತರುವ ಸ್ಥಿತಿ ಎದುರಾಗಿದೆ. ಅಧಿಕಾರಿಗಳು ಕುಡಿಯುವ ನೀರು ಸರಿಯಾಗಿ ಪೂರೈಸಲು ಕ್ರಮ ಕೈಗೊಳ್ಳದ ಕಾರಣ ಇಚ್ಚಂಗಿ ಗ್ರಾಮ ಪಂಚಾಯತಿ ಕೆಲ ಸದಸ್ಯರು ರಾಜೀನಾಮೆ ನೀಡಲು ಮುಂದಾಗಿರುವ ಘಟನೆಯೂ ನಡೆದಿದೆ.
ಶುದ್ಧ ಕುಡಿಯುವ ನೀರಿನ ಘಟಕಗಳು ತಾಲೂಕಿನ ಪ್ರತಿ ಗ್ರಾಮದಲ್ಲಿದ್ದು, ಇವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ಗ್ರಾಮಗಳಲ್ಲಿ ಚಾಲನೆ ನೀಡಿದ ಎರಡರಿಂದ ಮೂರು ತಿಂಗಳಿನಲ್ಲೇ ಬಂದ್ ಆಗಿವೆ. ಘಟಕಗಳು ಸ್ಥಗಿತವಾಗಿ ವರ್ಷಗಳೇ ಕಳೆದರೂ ಸಂಬಂಧಿಸಿದವರು ದುರಸ್ತಿ ಮಾಡಿಸಲು ಮುಂದಾಗುತ್ತಿಲ್ಲ. ಮನವಿ ನೀಡಿದರೂ ಸರಿಯಾಗಿ ಸ್ಪಂದಿಸಿಲ್ಲ ಎಂದು ಸೇವಾಲಾಲಪೂರ್, ಮಂತ್ರೋಡಿ, ನಾಯಿಕೆರೂರ, ತಾಲೂಕಿನ ಬಹಳಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಯಲು ಸೀಮೆಯಾದ ನಮ್ಮ ತಾಲೂಕಿನಲ್ಲಿ ಅನೇಕ ಕೆರೆಗಳು ಬತ್ತಿದ್ದು, ಅಂತರ್ಜಲ ಮಟ್ಟ ಬಹಳಷ್ಟು ಕೆಳಮಟ್ಟದಲ್ಲಿದೆ. ದನಕರುಗಳಿಗೆ ನೀರು ಸಿಗುತ್ತಿಲ್ಲ. ಹಾಗಾಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕ್ರಮವಹಿಸಬೇಕು ಎಂದು ಶಿರಬಡಗಿ ಗ್ರಾಪಂ ಸದಸ್ಯರಾದ ತುಕಾರಾಮ ಮಹದೇವಪ್ಪ ನಾಯಕ್ ಹೇಳಿದರು.
ಖಾಸಗಿ ಬೋರ್ವೆಲ್ನಿಂದ ನೀರುನೀರಿನ ಸಮಸ್ಯೆ ಎದುರಾದ ಕಡೆ ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಾಗುತ್ತಿದೆ. ಖಾಸಗಿ ಬೋರ್ವೆಲ್ ಬಾಡಿಗೆ ಪಡೆದು ನೀರು ಪೂರೈಸಲಾಗುವುದು.ಮಹಮ್ಮದ್ ಖಿಜರ್, ಸವಣೂರು ಉಪವಿಭಾಗಾಧಿಕಾರಿ