ಅವ್ಯವಸ್ಥೆ ಉಂಟಾಗದಂತೆ ಮುಂಜಾಗ್ರತಾ ಕ್ರಮ: ಜಾತ್ರಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ
ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದ ಪಟ್ಟಣದ ಐತಿಹಾಸಿಕ ದುರ್ಗಾದೇವಿ ಜಾತ್ರೆಯ ಫೆ.೨೦ರಿಂದ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಭಕ್ತರಿಗೆ ಯಾವುದೇ ಅವ್ಯವಸ್ಥೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಾತ್ರಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ ಹೇಳಿದರು.
ಪಟ್ಟಣದ ಸಂತೆ ಮೈದಾನದಲ್ಲಿರುವ ದುರ್ಗಾದೇವಿ ಜಾತ್ರಾ ವ್ಯವಸ್ಥಾಪಕ ಸಮಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಮೂರು ವರ್ಷಗಳಿಗೊಮ್ಮೆ ನಡೆಯುವ ದುರ್ಗಾದೇವಿ ಜಾತ್ರೆಗೆ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಎಲ್ಲ ಜನರು ಒಟ್ಟಾಗಿ ಆಚರಿಸುವ ಜಾತ್ರೆಯು ರಾಜದಲ್ಲಿಯೇ ಮಾದರಿಯಾಗಬೇಕು. ಈ ಜಾತ್ರೆಯ ಆಚರಣೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ಉತ್ತಮ ಮಳೆ ಬೆಳೆ ನೀಡಿ ಜನರು ಸುಭಿಕ್ಷರಾಗಿರುವಂತೆ ದೇವಿ ಕಾಪಾಡುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ. ಜಾತ್ರೆ ಆಚರಣೆಗೆ ಒಂದು ತಿಂಗಳ ಮೊದಲೆ ಎಲ್ಲಾ ಮುಖಂಡರು ಹಾಗೂ ದೇವಾಲಯ ಸಮಿತಿ ಸದಸ್ಯರು ಸಭೆ ಸೇರಿ ಜಾತ್ರೆ ನಡೆಸುವ ಕುರಿತು ಚರ್ಚಿಸಿ ದಿನಾಂಕ ನಿಗದಿಪಡಿಸಲಾಗಿದೆ. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರು, ಬಸ್, ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸ್ವಚ್ಛತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗಿದ್ದು ಜಾತ್ರೆಯ ಸಂದರ್ಭ ಯಾವುದೇ ತರಹದ ಸಾಂಕ್ರಾಮಿಕ ರೋಗ ಹರಡಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಾತ್ರಾ ವ್ಯವಸ್ಥಾಪಕ ಸಮಿತಿ ಕಾರ್ಯದರ್ಶಿ ಆನಂದ ನಾಯ್ಕರ, ಸಹ ಕಾರ್ಯದರ್ಶಿ ಸುರೇಶ ಮಡಿವಾಳರ, ಖಜಾಂಜಿ ಪರಮೇಶಪ್ಪ ಕರಿಗಾರ, ಸಹಖಜಾಂಜಿ ಮಾಲತೇಶ ಬೆಟಕೇರೂರ, ಗುರುಶಾಂತ ಯತ್ತಿನಹಳ್ಳಿ, ರಾಮಣ್ಣ ತೆಂಬದ, ಆನಂದ ನಲವಾಲದ, ಬಿ.ಟಿ. ಚಿಂದಿ, ಸುಭಾಕರ ಹಂಪಾಳಿ, ವಿನಾಯಕ ತಳವಾರ, ಅಲ್ತಾಫ್ ಖಾನ್ ಪಠಾಣ್, ರುದ್ರೇಶ ಬೇತೂರ, ಜ್ಯೋತಿ ಜಾಧವ, ಹರೀಶ ಕಲಾಲ, ಶಂಭು ಕರ್ಜಗಿ, ರಾಜು ತಿಪ್ಪಶೆಟ್ಟಿ, ಬೀರೇಶ ಹಾರ್ನಳ್ಳಿ, ಸಿದ್ದು ತಂಬಾಕದ, ಉಮೇಶ ಬಣಕಾರ, ಜ್ಞಾನೇಶ ಅಬಲೂರು, ಡಿ.ನಾಗರಾಜ(ಕಿಟ್ಟಿ), ಶಿವುಕುಮಾರ ಬಾಗಲಕೋಟಿ, ರಾಮು ಮುರುಡೇಶ್ವರ, ಕಾಂತೆಶ ಬಾಲಬಸವರ ಸೇರಿದಂತೆ ಭಕ್ತಾಗಳು ಇದ್ದರು.