ದಾವಣಗೆರೆ: ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ನಿಮಿತ್ತ ನಗರದ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಬಯಲು ಜಂಗಿ ಕುಸ್ತಿ ಪಂದ್ಯಾವಳಿಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ರಾಜ್ಯ ಕುಸ್ತಿ ಪಟುಗಳ ಸಂಘದ ಅಧ್ಯಕ್ಷ ಬಿ.ವೀರಣ್ಣ ಮಾತನಾಡಿ, ಜಾತ್ರೆ ನಿಮಿತ್ತ ಮೂರು ದಿನಗಳ ಕಾಲ ಬಯಲು ಜಂಗಿ ಕುಸ್ತಿ ಹಮ್ಮಿಕೊಳ್ಳಲಾಗಿದೆ. ಕುಸ್ತಿಯಲ್ಲಿ ಹೊರ ರಾಜ್ಯಕ್ಕೂ ದಾವಣಗೆರೆ ಹೆಸರು ಹೋಗುವಂತೆ ಕುಸ್ತಿಗಳನ್ನು ನಡೆಸಲಾಗುವುದು ಎಂದರು.
ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಹೆಸರಾಂತ ವಿಕ್ಕಿ ಪೈಲ್ವಾನ್, ಸುಮಿತ್ ಪೈಲ್ವಾನ್ ಸೇರಿದಂತೆ ರಾಷ್ಟ್ರೀಯ, ಅಂತರ ರಾಷ್ಟ್ರೀಯ, ಕುಸ್ತಿ ಪೈಲ್ವಾನರು ಈಗಾಗಲೇ ದಾವಣಗೆರೆಗೆ ಬಂದಿದ್ದಾರೆ. ಅವರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕುಸ್ತಿಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.ದುರ್ಗಾಂಬಿಕಾ ದೇವಸ್ಥಾನ ಧರ್ಮದರ್ಶಿ ಗೌಡರ ಚನ್ನಬಸಪ್ಪ, ಪಾಲಿಕೆ ಮಾಜಿ ಮೇಯರ್ ಗೋಣೆಪ್ಪ, ಪಾಲಿಕೆ ಸದಸ್ಯ ವೀರೇಶ್, ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್, ಪಿ.ಜೆ. ನಾಗರಾಜ್, ಅಮೃತ್ ಮೈಸೂರು, ಶ್ರೀನಿವಾಸ್, ರಾಮಣ್ಣ, ಅರುಣ್ ಕುಮಾರ್, ಸುರೇಶ್, ರಾಘವೇಂದ್ರ ಚೌವ್ಹಾಣ್, ಶಂಕರ್ ಪಿಸಾಳೆ, ಬಣಕಾರ್ ಭರಮಪ್ಪ ಇತರರು ಇದ್ದರು.
ದಾವಣಗೆರೆಯಲ್ಲಿ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ಇಂದಿನಿಂದ ಬಯಲು ಜಂಗೀ ಕುಸ್ತಿಗೆ ಚಾಲನೆ ನೀಡಿದ್ದು, ಮೊದಲ ದಿನದ ಪಂದ್ಯದಲ್ಲಿ ಅಖಾಡದಲ್ಲಿ ಗೆಲವಿಗೆ ಶ್ರಮಿಸುತ್ತಿರುವ ಕುಸ್ತಿಪಟುಗಳು.