ಮುಡಾ ವಿಚಾರದಲ್ಲಿ ಇ.ಡಿ. ಪ್ರಧಾನಿ ನರೇಂದ್ರ ಮೋದಿ , ಅಮಿತ್ ಶಾ ಕೈಗೊಂಬೆ : ಪ್ರಿಯಾಂಕ್

KannadaprabhaNewsNetwork | Updated : Apr 03 2025, 11:38 AM IST

ಸಾರಾಂಶ

ಮುಡಾ ವಿಚಾರದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಕೇಂದ್ರ ಸರ್ಕಾರದ ಕೈಗೊಂಬೆ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಹೇಳಿದಂತೆ ಕೇಳುತ್ತಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ.

 ಬೆಂಗಳೂರು :  ಮುಡಾ ವಿಚಾರದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಕೇಂದ್ರ ಸರ್ಕಾರದ ಕೈಗೊಂಬೆ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಹೇಳಿದಂತೆ ಕೇಳುತ್ತಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ವಿಚಾರದಲ್ಲಿ ತನಿಖೆಗೆ ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಇ.ಡಿ ಕ್ರಮ ರಾಜಕೀಯ ಪ್ರೇರಿತ. ಯಾವ ಕಾನೂನಿನಡಿ ದೂರು ದಾಖಲಿಸಿದ್ದೀರಿ ಎಂದು ಇ.ಡಿಗೆ ಹೈಕೋರ್ಟ್‌ ಪ್ರಶ್ನೆ ಮಾಡಿತ್ತು. ಇದೀಗ ಮತ್ತೆ ಪ್ರಕರಣವನ್ನು ಮುಂದುವರೆಸಲು ಯತ್ನಿಸಿರುವ ಇ.ಡಿ ಕೇಂದ್ರದ ಕೈಗೊಂಬೆಯಂತೆ ನಡೆದುಕೊಳ್ಳುತ್ತಿದೆ ಎಂದು ದೂರಿದ್ದಾರೆ.

ಸಿಎಂ, ಡಿಸಿಎಂ ವಿಚಾರ ಬಂದಾಗ ಇ.ಡಿ. ತ‌ನಿಖಾ ವರದಿಗಳು ಪತ್ರಿಕಾ ಪ್ರಕಟಣೆ ಮೂಲಕ ಬಹಿರಂಗವಾಗುತ್ತವೆ. ಆದರೆ ಬಿಜೆಪಿ ನಾಯಕರ ವಿರುದ್ಧದ ತನಿಖೆ ಯಾಕೆ ಬಹಿರಂಗಪಡಿಸುವುದಿಲ್ಲ? ಬಿಜೆಪಿ ನಾಯಕರ ಮೇಲೆ ಯಾಕೆ ಇ.ಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲ್ಲ ಎಂದು ಪ್ರಶ್ನಿಸಿದರು.

ಹೊಸಬಾಳೆ ಜತೆ ಪ್ರತಿಭಟಿಸಲಿ:

ಬೆಲೆ ಏರಿಕೆ ವಿರುದ್ಧದ ಬಿಜೆಪಿ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಕಳೆದ ವಿಜಯದಶಮಿಯಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಮೋಹನ್‌ ಭಾಗವತ್‌ ಕಿಡಿಕಾರಿದ್ದರು. ಮೋದಿ ಆರ್ಥಿಕತೆಯಿಂದಲೇ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಬಿಜೆಪಿಯವರು ರಾಜ್ಯದಲ್ಲಿ ಬೆಲೆ ಏರಿಕೆ ವಿರುದ್ಧ ನಡೆಸುವ ಹೋರಾಟಕ್ಕೆ ದತ್ತಾತ್ರೇಯ ಹೊಸಬಾಳೆ ಅವರನ್ನೂ ಕರೆಸಲಿ ಎಂದು ಹೇಳಿದರು.

ಇನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರು ನರೇಂದ್ರ ಮೋದಿ ಭೇಟಿ ಆದಾಗ ಬೆಲೆ ಏರಿಕೆಗಳ ಬಗ್ಗೆ ಚರ್ಚಿಸಲಿ. ಅಲ್ಲಿ ಜಾಸ್ತಿ ಆಗುತ್ತಿರುವುದರಿಂದಲೇ ಇಲ್ಲೂ ಜಾಸ್ತಿ ಆಗುತ್ತಿರುವುದು. ಈ ಸಾಮಾನ್ಯ ಜ್ಞಾನ ಬೆಳೆಸಿಕೊಂಡು ನಮಗೆ ಪಾಠ ಮಾಡುವ ಬದಲು ಮೋದಿ, ನಿರ್ಮಲಾ ಸೀತಾರಾಮನ್‌ ಅವರಿಗೆ ಸಲಹೆ ನೀಡಲಿ’ ಎಂದು ಪ್ರಿಯಾಂಕ್‌ ತಿರುಗೇಟು ನೀಡಿದರು.

ಸಂಪುಟ ಪುನರ್‌ ರಚನೆ ಚರ್ಚೆ ಇಲ್ಲ

ದೆಹಲಿಗೆ ತೆರಳುವ ಮೊದಲು ಮಾತನಾಡಿದ ಪ್ರಿಯಾಂಕ್‌ ಖರ್ಗೆ, ‘ನಾನು, ಎಂ.ಬಿ. ಪಾಟೀಲ್‌ ಹಾಗೂ ಸಂತೋಷ್‌ ಲಾಡ್‌ ಗಿಗ್‌ ಕಾರ್ಮಿಕರ ವಿಧೇಯಕದ ಬಗ್ಗೆ ಚರ್ಚಿಸಲು ರಾಹುಲ್‌ಗಾಂಧಿ ಅವರ ಭೇಟಿಗೆ ದೆಹಲಿಗೆ ಹೋಗುತ್ತಿದ್ದೇವೆ. ಈ ವೇಳೆ ನಾಲ್ಕು ಮಂದಿ ಪರಿಷತ್‌ ಸದಸ್ಯರ ನೇಮಕ, ಕೆಪಿಸಿಸಿ ಅಧ್ಯಕ್ಷರ ವಿಚಾರವೂ ಚರ್ಚೆಯಾಗಬಹುದು. ಆದರೆ, ಸಂಪುಟ ಪುನರ್‌ ರಚನೆ ವಿಷಯ ಸೇರಿ ಬೇರೆ ಯಾವ ವಿಚಾರವೂ ಚರ್ಚೆ ಮಾಡಲ್ಲ’ ಎಂದು ಸ್ಪಷ್ಟಪಡಿಸಿದರು.

Share this article