ಆರಂಭದಲ್ಲೇ ರೋಗ ಪತ್ತೆಯಿಂದ ಗುಣಮುಖರಾಗಲು ಸಾಧ್ಯ: ಅನ್ನಪೂರ್ಣ ನರೇಶ್

KannadaprabhaNewsNetwork | Published : Nov 25, 2024 1:03 AM

ಕೊಪ್ಪ, ಮ್ಯಾಮೋಗ್ರಫಿ ಪರೀಕ್ಷೆಯಿಂದ ಆರಂಭದಲ್ಲೇ ಕ್ಯಾನ್ಸರ್‌ ನಂತ ಕಾಯಿಲೆ ಪತ್ತೆ ಹಚ್ಚಿದರೆ ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದು ಕೊಪ್ಪ ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯೆ ಅನ್ನಪೂರ್ಣ ನರೇಶ್ ಹೇಳಿದರು.

ಕ್ಯಾನ್ಸರ್ ತಜ್ಞರಿಂದ ಮ್ಯಾಮೋಗ್ರಫಿ ಪರೀಕ್ಷಾ ಶಿಬಿರ

ಕನ್ನಡಪ್ರಭ ವಾರ್ತೆ, ಕೊಪ್ಪ

ಮ್ಯಾಮೋಗ್ರಫಿ ಪರೀಕ್ಷೆಯಿಂದ ಆರಂಭದಲ್ಲೇ ಕ್ಯಾನ್ಸರ್‌ ನಂತ ಕಾಯಿಲೆ ಪತ್ತೆ ಹಚ್ಚಿದರೆ ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದು ಕೊಪ್ಪ ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯೆ ಅನ್ನಪೂರ್ಣ ನರೇಶ್ ಹೇಳಿದರು. ಶುಕ್ರವಾರ ತಾಲೂಕಿನ ನಾರ್ವೆಯ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ನವಚೈತ್ರ ಸಾಂಸ್ಕೃತಿಕ ವೇದಿಕೆ ೧೭೩ನೇ ಶಿಬಿರದ ಅಂಗವಾಗಿ ಅನ್ನಪೂರ್ಣ ನರೇಶ್ ಮತ್ತು ಇತರರ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಕ್ಯಾನ್ಸರ್ ತಜ್ಞರಿಂದ ನಡೆದ ಮ್ಯಾಮೋಗ್ರಫಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಒಂದು ಕಾಲದಲ್ಲಿ ಕ್ಯಾನ್ಸರ್ ಎಂದರೆ ಗ್ರಾಮೀಣ ಜನರಲ್ಲಿ ದೊಡ್ಡ ರೋಗ ಎನ್ನುವ ಆತಂಕವಿತ್ತು. ಇಂದಿನ ಮುಂದುವರಿದ ತಂತ್ರಜ್ಞಾನ ಯುಗ ದಲ್ಲಿ ಕ್ಯಾನ್ಸರ್ ರೋಗ ಲಕ್ಷಣ ಪತ್ತೆಹಚ್ಚಿ ಸಂಪೂರ್ಣ ಗುಣಪಡಿಸುವ ವ್ಯವಸ್ಥೆ ಇದೆ. ಕ್ಯಾನ್ಸರ್ ಎಂದರೆ ಭಯಪಡುವುದು, ಸ್ತನ ಕ್ಯಾನ್ಸರ್ ತಪಾಸಣೆಗೆ ಮುಜುಗರ ಪಟ್ಟುಕೊಳ್ಳುವುದರಿಂದ ರೋಗ ಲಕ್ಷಣಗಳು ಗೋಚರವಾಗದೆ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ.

ಆರಂಭಿಕ ಹಂತದಲ್ಲಿಯೇ ರೋಗ ಲಕ್ಷಣ ಕಂಡುಹಿಡಿಯಲು ಅನುಕೂಲವಾಗುವಂತೆ ಬೆಂಗಳೂರಿನಿಂದ ಮ್ಯಾಮೊಗ್ರಫಿ ವಾಹನ ನಾರ್ವೆಯಂತಹ ಸಣ್ಣ ಗ್ರಾಮಕ್ಕೆ ತರಲಾಗಿದೆ. ಬಸ್ಸಿನ ಒಳಭಾಗದಲ್ಲಿಯೇ ಸಂಪೂರ್ಣ ತಪಾಸಣಾ ಸೌಲಭ್ಯವಿದ್ದು ಮ್ಯಾಮೋಗ್ರಫಿ ಪತ್ತೆಹಚ್ಚುವ ಯಂತ್ರವೂ ಇದೆ. ಇಬ್ಬರು ಮಹಿಳಾ ತಜ್ಞೆಯರು ತಪಾಸಣೆ ಮಾಡುತ್ತಾರೆ. ಮುಜುಗರ ಪಡದೆ ನಿರ್ಲಕ್ಷ್ಯ ಮಾಡದೆ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆ ನೀಡಿದರು. ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನ, ಕೆಡಿಪಿ ಸದಸ್ಯ ಚಿಂತನ್ ಬೆಳಗೊಳ, ಆಸ್ಪತ್ರೆ ಜನಸಂಪರ್ಕಾಧಿಕಾರಿ ಗಣೇಶ್, ಕೆಡಿಪಿ ಸದಸ್ಯ ನಾರ್ವೆ ಸಾಧಿಕ್, ಮಹಮ್ಮದ್ ಶಬೀರ್ ನಾರ್ವೆ, ಅಬ್ದುಲ್ ರಶೀದ್ ನಾರ್ವೆ, ಸುಭದ್ರಮ್ಮ, ದಿನೇಶ್ ಕೆ.ಸಿ., ಗ್ರಾ.ಪಂ. ಉಪಾಧ್ಯಕ್ಷೆ ಆಶಾ ಸುರೇಶ್, ನವಚೈತ್ರ ಸಾಂಸ್ಕೃತಿಕ ವೇದಿಕೆ ಉಪಾಧ್ಯಕ್ಷ ಸಂತೋಷ್ ಕುಲಾಸೋ, ಸಂಚಾಲಕ ಅಮರ್ ಶೆಟ್ಟಿ ಮುಂತಾದವರಿದ್ದರು.