ಕನ್ನಡಪ್ರಭ ವಾರ್ತೆ ಮೈಸೂರು
ಪರಿಸರ ದಿನಾಚರಣೆ ಗಿಡ ನೆಡುವುದು ಎಂಬುವುದು ಹೆಚ್ಚಿನ ಜನರಲ್ಲಿದೆ. ಪರಿಸರ ರಕ್ಷಣೆಯ ದೀಕ್ಷೆ ನಮ್ಮದಾಗಿರಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ವಿ. ವಿಜಯ್ ಕುಮಾರ್ ನಾಗನಾಳ ತಿಳಿಸಿದರು.ನಗರದ ಉದಯಗಿರಿ ಗಣಪತಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪರಿಸರ ದಿನಾಚಾರಣೆಯಲ್ಲಿ ಮಾತನಾಡಿದ ಅವರು, ನಮ್ಮ ಹಿರಿಯರು ಭೂಮಿ ತಾಯಿಯನ್ನು ಪ್ರಾರ್ಥಿಸುವ ಪದ್ಧತಿಯನ್ನು ನೀಡಿದ್ದಾರೆ. ಇಂಥಹ ಭೂಮಿ ತಾಯಿ ಕ್ಷಮಾಗುಣವನ್ನು ನಮಗೆ ಉಪದೇಶಿಸುತ್ತಾಳೆ. ಭೂಮಿ ಎಲ್ಲವನ್ನು ಎಲ್ಲರನ್ನು ಧರಿಸಿದ್ದಾಳೆ. ಅವಳ ಮೇಲೆ ಪ್ರತಿ ನಿತ್ಯ ಮಾಡಬಾರದ ಅಪರಾಧಗಳನ್ನು ಮಾಡುತ್ತಿದ್ದೇವೆ. ಆದರೂ ಭೂಮಿ ಸಹಿಸಿಕೊಂಡಿದೆ. ಒಮ್ಮೆ ಕೋಪದಿಂದ ಭೂಮಿ ಕಂಪಿಸಿದರೆ ಏನಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ ಎಂದರು.
ಎಷ್ಟೇ ಅಪರಾದವನ್ನು ನಾವು ಮಾಡಿದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲರಿಗೂ ಉಪಕಾರ ಮಾಡುವ ಶ್ರೇಷ್ಠಗುಣ ಭೂಮಿಯದ್ದು. ಇವತ್ತಿನ ಯಾಂತ್ರಿಕರಣ ಜಗತ್ತಿನಲ್ಲಿ ಜೀವಿಸುವ ನಾವು ಭೂಮಿತಾಯಿಯ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಉದ್ವೇಗವನ್ನು ತಡೆಯುವ ಕ್ಷಮಾ ಗುಣವೇ ನಮಗೆ ನಿಜವಾದ ಆಭರಣ ಎಂದು ಭೂಮಿತಾಯಿ ನಮಗೆ ಕಲಿಸಿದ ಪಾಠ. ಅರಣ್ಯ ಎಂದರೆ ಆಹಾರ, ಮಳೆ, ಗಾಳಿ ಪರಿಸರ ಸಮತೋಲನ, ಮಣ್ಣು ಸಂರಕ್ಷಣೆ ಮತ್ತು ಮಾನವನ ಬೆಳವಣಿಗೆಗೆ ಬೇಕಾದ ಉತ್ಪಾದನಾ ಕೈಗಾರಿಕೆ ಎಂದು ಭಾವಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.ಗಣಪತಿ ದೇವಸ್ಥಾನದ ಟ್ರಸ್ಟಿ ರವಿಕುಮಾರ್, ರಾಜೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪಿ. ಶಶಿರೇಖಾ, ಮೇಲ್ವಿಚಾರಕ ಅಶ್ವತ್, ಕೃಷಿ ಮೇಲ್ವಿಚಾರಕ ರಾಕೇಶ್. ಸೇವಾ ಪ್ರತಿನಿಧಿ ಸೌಮ್ಯ ಹಾಗೂ ಪ್ರಗತಿಬಂಧು, ಸ್ವ- ಸಹಾಯ ಸಂಘದ ಸದಸ್ಯರು ಇದ್ದರು.