ಯಲ್ಲಾಪುರ: ಜೇನು ಸಾಕಣೆಯಿಂದ ಆರ್ಥಿಕ ಅಭಿವೃದ್ಧಿಯೊಂದಿಗೆ ಬೆಳೆಗಳ ವೃದ್ಧಿಯನ್ನೂ ಅಧಿಕಗೊಳಿಸಿಕೊಳ್ಳಬಹುದು. ಮಹಿಳೆಯರು ತಮ್ಮ ದೈನಂದಿನ ಕಾರ್ಯದಲ್ಲಿ ಏಕಾಗ್ರತೆ ಸಾಧಿಸುವುದು ಅಗತ್ಯವಾಗಿದ್ದು, ಜೇನು ಸಾಕಾಣಿಕೆಗೆ ಅವರ ಪರಿಶ್ರಮ ಮುಖ್ಯ ಎಂದು ಜೇನು ಕೃಷಿ ತಜ್ಞ, ಉತ್ತಮ ಕೃಷಿಕ ಪ್ರಶಸ್ತಿ ಪುರಸ್ಕೃತ ಗಣಪತಿ ನಾಯ್ಕ ಆನಗೋಡ ಹೇಳಿದರು.
ಅವರು ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ವಜ್ರಳ್ಳಿಯ ಭಾಗ್ಯಶ್ರೀ ಸಂಜೀವಿನಿ ಒಕ್ಕೂಟವು ಕುಮಟಾದ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ಕೃಷಿ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮಹಿಳಾ ಕೃಷಿ ಸಾಂಸ್ಥಿಕ ತರಬೇತಿ ಕಾರ್ಯಕ್ರಮದಲ್ಲಿ ಜೇನು ಕೃಷಿಯ ಬಗೆಗೆ ಮಾಹಿತಿ ನೀಡಿ ಮಾತನಾಡಿದರು.
ಪಶು ಪರಿವೀಕ್ಷಕ ಕೆ.ಜಿ. ಹೆಗಡೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಜಾನುವಾರು ಸಾಕುವುದು ಸವಾಲಿನ ಕೆಲಸವಾಗಿದ್ದು, ಹೈನುಗಾರಿಕೆಯ ಬಗ್ಗೆ ಆಸಕ್ತಿ ಇದ್ದರೆ ಮಾತ್ರ ಯಶಸ್ಸು ಗಳಿಸಬಹುದು ಎಂದರು.ಕೃಷಿಕ ಗೋಪಾಲ ಭಟ್ಟ ನಡಿಗೆಮನೆ ಮಾತನಾಡಿ, ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಬೀಜಾಮೃತ, ಜೀವಾಮೃತ, ರಸಗೊಬ್ಬರ ಮುಂತಾದ ವಿವಿಧ ಅಂಶಗಳ ಕುರಿತು ಮಾಹಿತಿ ನೀಡಿದರು.ಅನ್ನಪೂರ್ಣ ಭಟ್ಟ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದರು. ಭಾಗ್ಯಶ್ರೀ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶುಕ್ರಿ ಗೌಡ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಪ್ರಕಾಶ, ಸಂಗಮೇಶ ಗುನಗಿ, ಪಿಡಿಒ ಸಂತೋಷಿ ಬಂಟ, ಗ್ರಾಪಂ ಸದಸ್ಯೆ ರತ್ನಾ ಬಾಂದೇಕರ್, ವಲಯ ಮೇಲ್ವಿಚಾರಕ ರಾಜಾರಾಮ ವೈದ್ಯ, ಕೆ. ಮೀನಾಕ್ಷಿ, ಕೌಶಲ್ಯ ಸಂಯೋಜಕಿ ಷರೀಫಾ ಮುಲ್ಲಾ ಉಪಸ್ಥಿತರಿದ್ದರು.
ಶ್ರೀಲತಾರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಹೇಮಾವತಿ ಆಚಾರಿ ಸ್ವಾಗತಿಸಿದರು. ಭಾಗೀರಥಿ ಭಟ್ಟ ನಿರ್ವಹಿಸಿದರು. ರವಿಶಂಕರ ಕೆ.ಎಂ. ಪ್ರಾಸ್ತಾವಿಕ ಮಾತನಾಡಿದರು. ಎಂ.ಬಿ.ಕೆ. ಅಂಕಿತಾ ಗೌಡ ವಂದಿಸಿದರು.