ಶಿಕ್ಷಣ, ಆರೋಗ್ಯ ಮಾನವ ಎರಡು ಕಣ್ಣಿದ್ದಂತೆ: ಶಾಸಕ ಆರ್.ವಿ. ದೇಶಪಾಂಡೆ

KannadaprabhaNewsNetwork | Published : Jun 1, 2025 2:43 AM
ವಿದ್ಯಾರ್ಥಿಗಳು ತಮ್ಮ ದೈನಂದಿನ ಬದುಕಿನಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಎಲ್ಲಿಲ್ಲದ ಮಹತ್ವ ನೀಡಬೇಕು.

ದಾಂಡೇಲಿ: ವಿದ್ಯಾರ್ಥಿಗಳು ತಮ್ಮ ದೈನಂದಿನ ಬದುಕಿನಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಎಲ್ಲಿಲ್ಲದ ಮಹತ್ವ ನೀಡಬೇಕು. ಅವು ಮಾನವ ಬದುಕಿನ ಎರಡು ಕಣ್ಣುಗಳು ಇದ್ದಂತೆ. ಶಿಕ್ಷಣ ಜ್ಞಾನ ಮತ್ತು ಉದ್ಯೋಗ ನೀಡಿದರೆ, ಆರೋಗ್ಯ ಜೀವನೋತ್ಸಾಹದ ಬದುಕನ್ನು ನೀಡುತ್ತದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಅವರು ಇಲ್ಲಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಧಾನ ಮಂತ್ರಿ ಉಚ್ಛತರ ಶಿಕ್ಷಣ ಅಭಿಯಾನ ಯೋಜನೆಯಡಿ ಮಂಜೂರಾದ ₹5 ಕೋಟಿ ಸಾಂಸ್ಥಿಕ ಅಭಿವೃದ್ಧಿ ಯೋಜನೆಯನ್ನು ಉದ್ಘಾಟಿಸಿ ಹಾಗೂ ಗ್ರಂಥಾಲಯ, ಬಿಸಿಎ ಕಟ್ಟಡ ಮತ್ತು ವ್ಯಾಯಾಮ ಶಾಲೆಗಳ ಶಂಕುಸ್ಥಾಪನಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು. ಭಾರತದ 10 ಸಾವಿರಕ್ಕೂ ಹೆಚ್ಚು ಕಾಲೇಜುಗಳು ಕೇಂದ್ರ ಸರ್ಕಾರಕ್ಕೆ ₹5 ಕೋಟಿ ಸಾಂಸ್ಥಿಕ ಅಭಿವೃದ್ಧಿ ಯೋಜನೆಯನ್ನು ಮಂಜೂರು ಮಾಡಲು ಅರ್ಜಿ ಸಲ್ಲಿಸಿದ್ದು, ಕೇವಲ ದೇಶಾದ್ಯಂತ ೩೦೦ ಕಾಲೇಜುಗಳು ಆಯ್ಕೆಯಾಗಿವೆ. ಅದರಲ್ಲಿ ಕರ್ನಾಟಕದಿಂದ ಕೇವಲ ೨೦ ಕಾಲೇಜುಗಳು ಆಯ್ಕೆಯಾಗಿದ್ದು, ಅವುಗಳಲ್ಲಿ ದಾಂಡೇಲಿ ಕಾಲೇಜು ಕೂಡ ಒಂದಾಗಿರುವುದು ಹೆಮ್ಮೆಯ ವಿಷಯ ಎಂದರು.

ಅವರು ಹೊಸ ಕಟ್ಟಡ ಕಾಮಗಾರಿಗಳ ನಿರ್ಮಾಣ, ನವೀಕರಣ, ಉನ್ನತೀಕರಣ, ಉಪಕರಣಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಐದು ಕೋಟಿ ರೂಪಾಯಿಗಳ ಅನುದಾನದ ಹಂಚಿಕೆ ವಿವರಗಳನ್ನು ಸಭೆಗೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಅಷ್ಪಾಕ ಶೇಖ್, ತಹಶೀಲ್ದಾರ ಶೈಲೇಶ ಪರಮಾನಂದ, ನಗರಸಭೆ ಆಯುಕ್ತ ವಿವೇಕ ಬನ್ನೆ, ತಾಪಂ ಇಒ ಟಿ.ಸಿ.ಹಾದಿಮನಿ, ನಗರಸಭೆ ಸದಸ್ಯರಾದ ಮೋಹನ ಹಲವಾಯಿ, ಸಂಜಯ ನಂದ್ಯಾಳಕರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಯಾಸ್ಮೀನ ಕಿತ್ತೂರ, ಬಶೀರ ಅಹಮ್ಮದ ಗಿರಿಯಾಲ, ಇಕ್ಬಾಲ ಶೇಖ, ರಫೀಕ ಖಾನ, ಸರಸ್ವತಿ ರಜಪೂತ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಾಂಶುಪಾಲ ಡಾ.ಎಂ.ಡಿ.ಒಕ್ಕುಂದ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಬಸವರಾಜ ಹೂಲಿಕಟ್ಟಿ ಕೊನೆಯಲ್ಲಿ ವಂದಿಸಿದರು. ಮನೋಹರ ಉಡಚಂಚಿ ಕಾರ್ಯಕ್ರಮ ನಿರೂಪಿಸಿದರು. ೨೮ಡಿಎನ್‌ಡಿ೨ಎ

ಪ್ರಧಾನ ಮಂತ್ರಿ ಉಚ್ಛತರ ಶಿಕ್ಷಣ ಅಭಿಯಾನ ಯೋಜನೆಯಡಿ ಮಂಜೂರಾದ ಸಾಂಸ್ಥಿಕ ಅಭಿವೃದ್ದಿ ಯೋಜನೆಯ ಉದ್ಘಾಟಿಸಿ ಶಾಸಕ ಆರ್‌.ವಿ. ದೇಶಪಾಂಡೆ ಮಾತನಾಡಿದರು.