ಕೊಪ್ಪಳ: ಮಕ್ಕಳು ಉತ್ತಮವಾಗಿ ಮತ್ತು ಸಂಸ್ಕಾರಯುತವಾಗಿ ಭವಿಷ್ಯ ಕಟ್ಟಿಕೊಳ್ಳಲು ಧಾರ್ಮಿಕ ಶಿಕ್ಷಣ ಮತ್ತು ಅವುಗಳ ಆಚರಣೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದು ಇಲ್ಲಿನ ರಾಘವೇಂದ್ರ ಸ್ವಾಮಿಗಳ ಮಠದ ಪ್ರಧಾನ ಅರ್ಚಕ ರಘುಪ್ರೇಮಾಚಾರ್ ಮುಳಗುಂದ ಹೇಳಿದರು.
ಶಿಬಿರ ನಡೆಸಿಕೊಡಲು ಬಂದಿರುವ ಉಡುಪಿಯ ಯದುನಂದನ ಅಚಾರ್ ಮಾತನಾಡಿ, ಕೊಪ್ಪಳದಲ್ಲಿ ಮೊದಲ ಬಾರಿಗೆ ಕಾರ್ಯಕ್ರಮ ಆಯೋಜಿಸಿದ್ದು ಖುಷಿ ನೀಡಿದೆ. ಯಾವುದೇ ಕಾರ್ಯಕ್ರಮ ಮಾಡಿದರೂ ಮೊದಲು ದೀಪ ಬೆಳಗಿಸಲಾಗುತ್ತದೆ. ಇದು ಜ್ಞಾನದ ಪ್ರತೀಕವಾಗಿದೆ. ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಕಲಿಸಿದರೆ ಮಕ್ಕಳಲ್ಲಿ ಸಂಸ್ಕಾರ ಬೆಳೆಯುತ್ತದೆ ಎಂದು ಹೇಳಿದರು.
ಅರ್ಚಕ ಗೋವಿಂದಾಚಾರ್ ಬಾದರ್ಲಿ, ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಚುನಾಯಿತ ಪ್ರತಿನಿಧಿ ಗುರುರಾಜ ಎನ್.ಜೋಶಿ, ರಾಜ್ಯ ಕೇಂದ್ರ ಕಾರ್ಯಕಾರಿಣಿ ಸದಸ್ಯ ಎಚ್.ಬಿ. ದೇಶಪಾಂಡೆ, ವೇಣುಗೋಪಾಲ ಜಹಗೀರದಾರ್, ರಮೇಶ ಜಹಗೀರದಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.