ಹಾವೇರಿ: ಯುವ ಸಮುದಾಯಕ್ಕೆ ಬದುಕು ಮತ್ತು ಶಿಕ್ಷಣದ ಮೌಲ್ಯಗಳ ಅರಿವು ಅಗತ್ಯವಾಗಿದೆ. ಶಿಕ್ಷಣ ಎಂದರೇ ಕೇವಲ ಪಠ್ಯಪುಸ್ತಕಗಳ ಅಧ್ಯಯನವಲ್ಲ, ಬದುಕನ್ನು ಹೀಗೆಯೇ ರೂಪಿಸಿಕೊಳ್ಳಬೇಕೆಂಬ ದೃಢವಾದ, ಗಟ್ಟಿ ನಿರ್ಧಾರ ಇದರಲ್ಲಿದೆ ಎಂದು ಎಸ್ಪಿ ಯಶೋದಾ ವಂಟಗೋಡಿ ತಿಳಿಸಿದರು.ಇಲ್ಲಿಯ ಹೊಸಮಠದ ಎಸ್ಜೆಎಂ ಪದವಿಪೂರ್ವ ಕಾಲೇಜಿನ 2025- 26ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಮತದಾರರ ಸಾಕ್ಷರತಾ ಸಂಘ, ಭಾರತ ಸ್ಕೌಟ್ ಮತ್ತು ಗೈಡ್ಸ್ ಘಟಕಗಳ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸೈಬರ್ ಆಕ್ರಮಣದ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.ವಿದ್ಯಾರ್ಥಿನಿಯರು ತಮ್ಮ ವಿವೇಕ, ವಿಚಾರಗಳು ಸಕಾರಾತ್ಮಕವಾಗಿರಬೇಕು. ಇದರಿಂದ ನಿಮ್ಮ ಮುಂದಿನ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಶಿಕ್ಷಣದ ಪ್ರಥಮ ಹಂತದ ಮೊದಲ ಗುರುಗಳು ತಂದೆ- ತಾಯಿ. ಅವರ ಮಾರ್ಗರ್ಶನದಲ್ಲಿ ಅವರ ಆಕಾಂಕ್ಷೆಯನ್ನು ನಮ್ಮ ಮನದಲ್ಲಿ ಇಟ್ಟುಕೊಂಡು ಆ ಗುರಿಯನ್ನು ತಲುಪುವ ನಿರಂತರ ಪ್ರಯತ್ನ ಮಕ್ಕಳದ್ದಾಗಬೇಕು.
21 ವರ್ಷದೊಳಗಿರುವ ಯುವಕರ ಸಾವಿನ ಸಂಖ್ಯೆ ಹೆಚ್ಚಾಗಿರುವುದಕ್ಕೆ ಕಾರಣ ಅವರು ಸರಿಯಾದ ರಕ್ಷಣಾ ಸೂಚನೆಗಳನ್ನು ಪಾಲಿಸದೇ ಇರುವುದು ಎಂಬುದು ಕಂಡುಬಂದಿದೆ. ಕಾರಣ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ನ್ನು ಬಳಸಬೇಕೆಂದು ಸೂಚಿಸಿದರು.ಸಾನಿಧ್ಯ ವಹಿಸಿದ್ದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಶಿಕ್ಷಣ ಎಂಬ ಮಹಾ ಮರದಲ್ಲಿ ನಿಮ್ಮ ನಿರ್ದಿಷ್ಟ ಗುರಿಯೊಂದಿಗೆ ಚಂಚಲ ಮನಸ್ಸನ್ನು ನಮ್ಮ ಹತೋಟಿಯಲ್ಲಿ ಇಟ್ಟುಕೊಂಡು ಜ್ಞಾನ ಪಡೆಯುವುದೇ ಸ್ವತಂತ್ರವಾದ ನಮ್ಮ ಆಸ್ತಿ ಎಂದರು. ಡಿಡಿಪಿಯು ಅಶೋಕ ಶಾಸ್ತ್ರಿ, ನಿವೃತ್ತ ಉಪನ್ಯಾಸಕ ಎಂ.ಕೆ. ಕಲ್ಲಜ್ಜನವರ, ಪ್ರಾಚಾರ್ಯ ವಿ.ಎನ್. ಆಲದಕಟ್ಟಿ ಉಪಸ್ಥಿತರಿದ್ದರು. ಡಾ. ಜೆ.ಡಿ. ಲಮಾಣಿ ನಿರೂಪಿಸಿದರು. ರಾಜಾನಾಯ್ಕ ವಂದಿಸಿದರು.