ಶಿಗ್ಗಾಂವಿ: ನಾನು ಬಸವಣ್ಣನವರ ಸಂದೇಶಗಳಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿದ್ದೇನೆ. ಪಟ್ಟಣದಲ್ಲಿ ಅವರ ಪುತ್ಥಳಿ ನಿರ್ಮಿಸಲು ಸಮಾನ ಮನಸ್ಕರ ಸಭೆ ಕರೆದು ತೀರ್ಮಾನಿಸಿ ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಭರವಸೆ ನೀಡಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಂಡ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಪುತ್ಥಳಿ ನಿರ್ಮಾಣಕ್ಕೆ ಸ್ಥಳವನ್ನು ಎಲ್ಲರೂ ಸಭೆ ಸೇರಿ ತೀರ್ಮಾನಿಸಬೇಕು. ಬಸವಣ್ಣನವರ ವಚನಗಳು ಪ್ರಸ್ತುತವಾಗಿವೆ. ಸರ್ವರಿಗೂ ಸಮಾನತೆಗಾಗಿ ಈ ಮಹನೀಯರು ಹೋರಾಡಿದ್ದಾರೆ ಎಂದರು.ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಎಲ್ಲರೂ ಸಮಾನರು ಎಂಬ ಉದ್ದೇಶದ ಕಾಯಕವನ್ನು ಬಸವಣ್ಣನವರ ಅಂದಿನ ಕಾಲದಲ್ಲಿ ತಿಳಿಸಿ ಇಂದು ಕಾಯಕ ನಂಬಿ ಬದುಕುವ ಕಲೆಯನ್ನು ಹೇಳಿಕೊಟ್ಟರು ಎಂದರು.ಲಿಂಗಾಯತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ರಾಗಿ ಮಾತನಾಡಿ, ಪಟ್ಟಣದ ಯಾವುದಾದರೂ ಒಂದು ಮುಖ್ಯ ಸ್ಥಳದಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣ ಮಾಡುವಂತೆ ಶಾಸಕರಲ್ಲಿ ಮನವಿ ಮಾಡಿದರು.ತಹಸೀಲ್ದಾರ್ ರವಿಕುಮಾರ ಕೊರವರ, ಉಪತಹಸೀಲ್ದಾರ್ ಎಂ.ಎಸ್. ಗಾಮನಗಟ್ಟಿ, ಮುಖಂಡರಾದ ಶಿವಾನಂದ ಬಾಗೂರ, ವೀರೇಶ ಆಜೂರ, ಫಕ್ಕೀರಜ್ಜ ಕುಂದೂರ, ಕರಿಯಪ್ಪ ಕಟ್ಟಿಮನಿ, ಲಲಿತಾ ಹಿರೇಮಠ, ಪ್ರತಿಭಾ ಗಾಂಜಿ, ಮಾಲತೇಶ ಯಲಿಗಾರ, ಬಸವರಾಜ ಜೇಕಿನಕಟ್ಟಿ, ಶಂಕರಗೌಡ ಪಾಟೀಲ, ಗುರುಸಿದ್ದಗೌಡ ಪಾಟೀಲ ಅಶೋಕ ಕಾಳೆ, ಹನುಮಂತಪ್ಪ ಬಂಡಿವಡ್ಡರ, ನಿಂಗಣ್ಣ ಜವಳಿ, ರವಿ ಕುಡವಕ್ಕಲಗೇರ, ಭರಮಜ್ಜ ನವಲಗುಂದ, ದಯಾನಂದ ಅಕ್ಕಿ, ಬಿಇಒ ಎಂ.ಬಿ. ಅಂಬಿಗೇರ, ಬಸಲಿಂಗಪ್ಪ ನರಗುಂದ, ಫೀರಸಾಬ್ ನಧಾಪ್, ಜಿ.ಎನ್. ಯಲಿಗಾರ, ಇಒ ಕುಮಾರ ಮಣ್ಣವಡ್ಡರ, ಮಂಜುನಾಥ ಮಣ್ಣಣ್ಣವರ, ಶಿವಪ್ಪ ಗಂಜೀಗಟ್ಟಿ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಎಚ್, ಸಿಡಿಪಿಒ ಗಣೇಶ ನಿಂಗನಗೌಡ್ರ, ಸಿ.ಎಸ್. ಪಾಟೀಲ, ಅಣ್ಣಪ್ಪ ಲಮಾಣಿ, ಅಶೋಕ ಕಬನೂರ, ಈರಣ್ಣ ಸಮಗೊಂಡ ಸೇರಿದಂತೆ ಅನೇಕ ಮುಖಂಡರು ಇದ್ದರು.ವರದಾ ಬೇಡ್ತಿ ನದಿ ಜೋಡಣೆಗೆ ಒತ್ತಾಯ
ಹಾನಗಲ್ಲ: ವರದಾ ಬೇಡ್ತಿ ನದಿ ಜೋಡಣೆಗೆ ಮೊದಲ ಆದ್ಯತೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕರ್ನಾಟಕದ ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಬೇಡ್ತಿ ವರದಾ ನದಿ ಜೋಡಣಾ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ ಒತ್ತಾಯಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕದ ಹಾವೇರಿ ಗದಗ ಸೇರಿದಂತೆ ನಾಲ್ಕೈದು ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ನೀರಾವರಿಗೆ ಅತ್ಯಂತ ಉಪಯುಕ್ತ ಜಲಮೂಲವಾದ ವರದಾ ಬೇಡ್ತಿ ನದಿ ಜೋಡಣೆ ರೈತರ ಅತ್ಯಂತ ಆಶಾದಾಯಕ ಯೋಜನೆಯಾಗಿದೆ. ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆಯ ಶಿಫಾರಸ್ಸಿನಂತೆ ಭಾರತದ ಮಹಾತ್ವಾಕಾಂಕ್ಷಿ 30 ನದಿ ಜೋಡಣೆಯಲ್ಲಿ ವರದಾ ಬೇಡ್ತಿ ಅತ್ಯಂತ ಪ್ರಮುಖ ನದಿ ಜೋಡಣೆಯಾಗಿದೆ.2021ರ ಮುಂಗಡ ಪತ್ರದಲ್ಲಿ ರಾಜ್ಯ ಸರ್ಕಾರ ಸಮಗ್ರ ಯೋಜನಾ ವರದಿಯನ್ನು ತಯಾರಿಸಲು ಸೂಚಿಸಿತ್ತು. ಅದರಂತೆ ಜಲಸಂಪನ್ಮೂಲ ಇಲಾಖೆಗೆ ವರದಿಯೂ ಸಲ್ಲಿಕೆಯಾಗಿದೆ. ಈಗಾಗಲೇ ರೈತರು, ಮಠಾಧೀಶರು, ಜನಪ್ರತಿನಿಧಿಗಳು, ಪ್ರಗತಿಪರ ಚಿಂತಕರು ಈ ಯೋಜನೆ ಸಾಕಾರಕ್ಕೆ ಸರ್ಕಾರಗಳು ಶೀಘ್ರ ಮುಂದಾಗಬೇಕು ಎಂದು ಹೋರಾಟ ಮನವಿ ಸಲ್ಲಿಸಿವೆ. ರಾಜ್ಯ ಸರ್ಕಾರ ಕೂಡಲೇ ಈ ಯೋಜನೆಯ ಸಾಕಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮಹೇಶ ಮಕರವಳ್ಳಿ, ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸದಾನಂದಗೌಡ ಪಾಟೀಲ, ಮಂಜುನಾಥ ಕರಬುಳ್ಳೇರ ಇದ್ದರು.