ಇಂದಿರಾ ಕ್ಯಾಂಟೀನಲ್ಲಿ ಇನ್ನು ಮೊಟ್ಟೆ ಪೂರೈಕೆ: ಸಚಿವ ರಹೀಂ ಖಾನ್

KannadaprabhaNewsNetwork |  
Published : Jun 05, 2025, 02:17 AM IST
4ಕೆಡಿವಿಜಿ5, 6-ದಾವಣಗೆರೆ ಪಾಲಿಕೆ ಮುಂಭಾಗದ ಇಂದಿರಾ ಕ್ಯಾಂಟೀನ್‌ಗೆ ಪೌರಾಡಳಿತ ಮತ್ತು ವಕ್ಫ್ ಸಚಿವ ರಹೀಂ ಖಾನ್ ಭೇಟಿ ನೀಡಿ, ಅಲ್ಲಿ ವಿದ್ಯಾರ್ಥಿನಿಯರು, ಸಾರ್ವಜನಿಕರೊಂದಿಗೆ ಆಹಾರದ ರುಚಿ ಸವಿದರು. ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಮಾಜಿ ಶಾಸಕ ಎಸ್.ರಾಮಪ್ಪ ಇತರರು ಇದ್ದರು. | Kannada Prabha

ಸಾರಾಂಶ

ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಾರ್ವಜನಿಕರಿಗೆ ಪೋಷಕಾಂಶಯುಕ್ತ ಮಾಂಸಾಹಾರ, ಮೊಟ್ಟೆ ನೀಡಬೇಕೆಂಬ ಬೇಡಿಕೆ ಇದ್ದು, ಈ ಹಿನ್ನೆಲೆ ಮೊಟ್ಟೆ ನೀಡುವ ಪ್ರಸ್ತಾವ ಸರ್ಕಾರದ ಮುಂದಿದೆ ಎಂದು ಪೌರಾಡಳಿತ ಮತ್ತು ವಕ್ಫ್ ಸಚಿವ ರಹೀಂ ಖಾನ್ ತಿಳಿಸಿದರು.

ಮಾಂಸಾಹಾರಕ್ಕೆ ಜನರ ಒತ್ತಡ ಹಿನ್ನೆಲೆ ಸರ್ಕಾರ ಚಿಂತನೆ । ದುಶ್ಚಟಗಳ ನಿಗ್ರಹಕ್ಕೆ ಮಸೂದೆ ಅಗತ್ಯ

ಕನ್ನಡಪ್ರಭ ವಾರ್ತೆ ದಾವಣಗೆರೆ

ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಾರ್ವಜನಿಕರಿಗೆ ಪೋಷಕಾಂಶಯುಕ್ತ ಮಾಂಸಾಹಾರ, ಮೊಟ್ಟೆ ನೀಡಬೇಕೆಂಬ ಬೇಡಿಕೆ ಇದ್ದು, ಈ ಹಿನ್ನೆಲೆ ಮೊಟ್ಟೆ ನೀಡುವ ಪ್ರಸ್ತಾವ ಸರ್ಕಾರದ ಮುಂದಿದೆ ಎಂದು ಪೌರಾಡಳಿತ ಮತ್ತು ವಕ್ಫ್ ಸಚಿವ ರಹೀಂ ಖಾನ್ ತಿಳಿಸಿದರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಡವರಿಗೆ ಊಟದಲ್ಲಿ ಪೋಷಕಾಂಶ ಸಿಗಬೇಕು. ಇದಕ್ಕಾಗಿ ಮಾಂಸಹಾಕ, ಮೊಟ್ಟೆಯನ್ನು ನೀಡುವಂತೆ ಸಾರ್ವಜನಿಕರಿಂದ ಬೇಡಿಕೆ ವ್ಯಕ್ತವಾಗುತ್ತಿದ್ದು, ಮೊಟ್ಟೆ ನೀಡುವ ಪ್ರಸ್ತಾವವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದರು.

ಮೊಟ್ಟೆಯನ್ನು ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀಡುವ ಪ್ರಸ್ತಾವವು ಶೀಘ್ರವೇ ಕಾರ್ಯ ರೂಪಕ್ಕೆ ತರುವ ಉದ್ದೇಶವಿದೆ. ಇದರಿಂದ ರಾಜ್ಯಾದ್ಯಂತ ಲಕ್ಷಾಂತರ ಬಡ ಜನರಿಗೆ ಹೆಚ್ಚು ಪೋಷಕಾಂಶಯುಕ್ತ ಆಹಾರವನ್ನು ಕಡಿಮೆ ಬೆಲೆಯಲ್ಲಿ ಪಡೆಯಲು ಅವಕಾಶವೂ ಸಿಕ್ಕಂತಾಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ 2 ವರ್ಷದಲ್ಲಿ ಮತ್ತೆ 186 ಹೊಸ ಇಂದಿರಾ ಕ್ಯಾಂಟೀನ್‌ಗಳಿಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ನೂರಕ್ಕೂ ಹೆಚ್ಚು ಕ್ಯಾಂಟೀನ್ ಕಾರ್ಯಾರಂಭ ಮಾಡಿವೆ. ಉಳಿದವೂ ಇನ್ನು 2 ತಿಂಗಳಲ್ಲಿ ಆರಂಭವಾಗಲಿವೆ ಎಂದು ತಿಳಿಸಿದರು.

ರಾಜ್ಯದ ಬಡವರು, ಕಾರ್ಮಿಕರು, ಶ್ರಮಿಕರು, ವಿದ್ಯಾರ್ಥಿಗಳು, ಮಹಿಳೆಯರು, ನಗರ ಅಶಕ್ತರಿಗೆ ಕಡಿಮೆ ಬೆಲೆಯಲ್ಲಿ ಪೋಷಕಾಂಶ ಆಹಾರವು ಇದರಿಂದ ಸಿಗಲಿದೆ. ಇಂದಿರಾ ಕ್ಯಾಂಟೀನ್‌ಗಳನ್ನು ವಿಸ್ತರಿಸುವ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಹೊಸ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಜಂಟಿಯಾಗಿ ಹಣಕಾಸು ಹೊಣೆ ಹೊತ್ತಿದ್ದು, ಹೊಸ ಮೆನ್ಯು, ಗುಣಮಟ್ಟ, ಸ್ವಚ್ಛತೆ, ಪೌಷ್ಟಿಕಾಂಶವುಳ್ಳ ಆಹಾರ ಪೂರೈಸಲು ಹೆಚ್ಚು ಒತ್ತು ನೀಡುತ್ತಿದೆ. ಮೊಟ್ಟೆ ವಿತರಣೆ ಬಗ್ಗೆ ಸಾರ್ವಜನಿಕರಿಂದ ಹೆಚ್ಚು ಒತ್ತಡ ಕೇಳಿ ಬರುತ್ತಿದೆ. ಮೊಟ್ಟೆ ನೀಡುವ ಸೇವೆಯನ್ನೂ ಆರಂಭಿಸುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದು, ಆದಷ್ಟು ಬೇಗನೆ ಮೊಟ್ಟೆ ಸಹ ಇಂದಿರಾ ಕ್ಯಾಂಟೀನ್ ಮೂಲಕ ನೀಡಲಾಗುವುದು ಎಂದು ಪುನರುಚ್ಛರಿಸಿದರು.

ಬೇರೆಯವರು ಎಂತೆಂಹದ್ದೋ ಮಸೂದೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಆದರೆ, ಬಡವರಿಗೆ ಅನುಕೂಲಕರವಾದ ಮಸೂಗೆಗಳ ಜಾರಿಗೊಳಿಸುವ ಅಗತ್ಯವಿದೆ. ಜೂಜಾಟ, ಕುಡಿತ ಮತ್ತಿತರೆ ಸಾಮಾಜಿಕ ದುಶ್ಚಟಗಳ ವಿರುದ್ಧದ ಮಸೂದೆಗಳನ್ನು ಜಾರಿಗೆ ತಂದರೆ ಬಡವರು ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ ವಕ್ಫ್ ತಿದ್ದುಪಡಿ ಮಸೂದೆಗೆ ಆಕ್ಷೇಪಿಸಿದರು.

ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಹರಿಹರ ಮಾಜಿ ಶಾಸಕ ಎಸ್.ರಾಮಪ್ಪ, ಪಾಲಿಕೆ ಆಯುಕ್ತೆ ರೇಣುಕಾ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್‌, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ ಇತರರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ