ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿದ್ದ ತಾಲೂಕಿನ ಸಿದ್ದಾಪುರ ಗ್ರಾಪಂ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಶಿವಗಂಗಾ ಭೋವಿ, ಉಪಾಧ್ಯಕ್ಷರಾಗಿ ಗಂಗಪ್ಪ ಸುಂಕದ್ ಆಯ್ಕೆಯಾಗಿದ್ದಾರೆ.
ಕಾರಟಗಿ: ತೀವ್ರ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿದ್ದ ತಾಲೂಕಿನ ಸಿದ್ದಾಪುರ ಗ್ರಾಪಂ ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಶಿವಗಂಗಾ ಭೋವಿ, ಉಪಾಧ್ಯಕ್ಷರಾಗಿ ಗಂಗಪ್ಪ ಸುಂಕದ್ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಗುಂಪು ಅಧಿಕಾರಕ್ಕೆ ಮತ್ತೊಮ್ಮೆ ಬಂದಿದೆ. ಈ ಮೂಲಕ ಗ್ರಾಪಂನಲ್ಲಿ ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥರೆಡ್ಡಿ ಹೊಸಮನಿಯ ಕಾಂಗ್ರೆಸ್ ಬಣ ಮೇಲುಗೈ ಸಾಧಿಸಿದಂತಾಗಿದೆ. ೨೬ ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾಗಿತ್ತು.ಅಧ್ಯಕ್ಷೆ ಸ್ಥಾನಕ್ಕೆ ಆಯ್ಕೆ ಬಯಸಿ ಶಿವಗಂಗಾ ಪಂಪಾಪತಿ ಭೋವಿ ಮತ್ತು ಲಕ್ಷ್ಮೀದೇವಿ ಹನುಮಂತಪ್ಪ ಭೋವಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಗಂಗಪ್ಪ ವೀರಭದ್ರಪ್ಪ ಸುಂಕದ ಮತ್ತು ಹಬೀದಾ ಬೇಗಂ ಖಾದರ್ಸಾಬ್ ಬಂಡ್ರಾಳ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಶಿವಗಂಗಮ್ಮ ಭೋವಿ ೧೫ ಮತಗಳು ಅವರ ಪ್ರತಿಸ್ಪರ್ಧಿ ಲಕ್ಷ್ಮೀದೇವಿ ಭೋವಿ ೧೧ ಮತಗಳನ್ನು ಪಡೆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಗಂಗಪ್ಪ ಸುಂಕದ್ ೧೫ ಮತಗಳು ಮತ್ತು ಅಬೀದಾ ಬೇಗಂ ಬಂಡ್ರಾಳ ೧೧ ಮತಗಳನ್ನು ಪಡೆದರು. ಚುನಾವಣಾಧಿಕಾರಿಯಾಗಿ ತಾಪಂ ಎಡಿ ವೈ.ವನಜಾ ಕಾರ್ಯನಿರ್ವಹಿಸಿದರು.ವಿಜಯೋತ್ಸವ:ಗ್ರಾಪಂಗೆ ನೂತನ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ಆಗುತ್ತಿದ್ದಂತೆಯೇ ಸದಸ್ಯರು ಹಾಗೂ ಬೆಂಬಲಿಗರೊಂದಿಗೆ ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥರೆಡ್ಡಿ ಹೊಸಮನಿ ನಿವಾಸಕ್ಕೆ ತೆರಳಿ ಹೂಮಾಲೆ ಹಾಕಿ ವಿಜಯೋತ್ಸವ ಆಚರಿಸಿದರು. ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ಜಿದ್ದಾಜಿದ್ದಿ:ತಾಲೂಕಿನ ಅತಿದೊಡ್ಡ ಗ್ರಾಪಂ ಸಿದ್ದಾಪುರದಲ್ಲಿ ಕಾಂಗ್ರೆಸ್ನ ಎರಡು ಬಣಗಳು ತಮ್ಮ ಪಾರುಪತ್ಯ ಸ್ಥಾಪನೆಗೆ ಚುನಾವಣೆಯಲ್ಲಿ ಜಿದ್ದಾಜಿದ್ದಿನ ರಾಜಕೀಯ ಚುಟುವಟಿಕೆ ನಡೆಸಿದವು. ಕಳೆದ ವಾರದಿಂದ ಎಲ್ಲ ಸದಸ್ಯರನ್ನು ಬೇರೆ ಕಡೆ ಪ್ರವಾಸಕ್ಕೆ ಕಳುಹಿಸಿದ್ದರು. ನಿರೀಕ್ಷೆಯಂತೆ ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಹೊಸಮನಿ ಅವರ ಗುಂಪು ಅಧಿಕಾರಕ್ಕೆ ಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.