ಕನ್ನಡಪ್ರಭ ವಾರ್ತೆ ಬೇಲೂರು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಕೆ ಎಲ್ ನಟರಾಜ್ ಹಾಗೂ ಕಾರ್ಯದರ್ಶಿಯಾಗಿ ಎನ್ ಎ ಸುನೀಲ್ ಕುಮಾರ್ ಆಯ್ಕೆಯಾದರು.ವಕೀಲರ ಸಂಘಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಸಿ ಎಂ ಪೃಥ್ವಿ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕೆ ಎಲ್ ನಟರಾಜ್ ಹಾಗೂ ಜಿ ಟಿ ಪ್ರಕಾಶ್ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಬಹುಮತಗಳ ಅಂತರದಿಂದ ಚುನಾಯಿತರಾದ ಕೆ ಎಲ್ ನಟರಾಜ್ ಅಧ್ಯಕ್ಷರಾಗಿ ಹಾಗೂ ಅವಿರೋಧವಾಗಿ ಆಯ್ಕೆಯಾದ ಪ್ರಧಾನ ಕಾರ್ಯದರ್ಶಿ ಎನ್ ಎ ಸುನೀಲ್ ಕುಮಾರ್, ಉಪಾಧ್ಯಕ್ಷರಾಗಿ ಪಂಚಾಕ್ಷರಿ, ಖಜಾಂಚಿ ಕಿರಣ್ ಕುಮಾರ್ ಹಾಗೂ ಸಹ ಕಾರ್ಯದರ್ಶಿಯಾಗಿ ವನಮಾಲಿನಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಯಾದ ಕೆ ವಿ ರತೀಶ್ ಹಾಗೂ ಮಂಜುನಾಥ್ ಘೋಷಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಕೆ ಎಲ್ ನಟರಾಜ್, ನನ್ನ ಮೇಲೆ ಅಭಿಮಾನವಿಟ್ಟು ನನಗೆ ಈ ಚುನಾವಣೆಯಲ್ಲಿ ಅಭೂತ ಪೂರ್ವದ ಗೆಲುವನ್ನು ತಂದುಕೊಟ್ಟು, ವಕೀಲರ ಸಂಘದ ಕೆಲಸವನ್ನು ಮಾಡಲು ನನಗೆ ಅವಕಾಶ ಮಾಡಿಕೊಟ್ಟ ಹಿರಿಯ ಹಾಗೂ ಕಿರಿಯ ವಕೀಲರಿಗೆ ಅಭಿನಂದನೆ ಎಂದರು. ಮಾಜಿ ಅಧ್ಯಕ್ಷರ ಹಾಗೂ ಹಿರಿಯರ ಸಹಕಾರ ಪಡೆದು ನಮಗೆ ಮೀಸಲಿಟ್ಟಿರುವ ನ್ಯಾಯಾಲಯದ ನಿವೇಶನದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರಲ್ಲದೆ, ರಾಜ್ಯ ಹಾಗೂ ಜಿಲ್ಲಾ ವಕೀಲರ ಸಹಕಾರ ಪಡೆದು ಸಂಘದ ಅಭಿವೃದ್ಧಿಗೆ ಶ್ರಮವಹಿಸುವುದಾಗಿ ತಿಳಿಸಿದರು.ನಂತರ ಮಾತನಾಡಿದ ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿಎಂ ಪೃಥ್ವಿ, 2025 ಹಾಗೂ 2026ನೇ ಸಾಲಿಗೆ ನೂತನವಾಗಿ ಸಮಿತಿ ರಚನೆಯಾಗಿದ್ದು ಅವರ ಎಲ್ಲಾ ಕೆಲಸಗಳಿಗೆ ನಾವು ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಸಂಘದ ಬಾಕಿ ಇರುವ ಕೆಲಸ ಕಾರ್ಯಗಳನ್ನು ನಡೆಸುವುದರ ಜೊತೆಗೆ ವಕೀಲರಿಗೆ ಹಿರಿಯರಿಂದ ಮಾರ್ಗದರ್ಶನ, ಸಲಹೆ, ಸಹಕಾರ, ಹೆಚ್ಚಿನ ತರಬೇತಿಗಳನ್ನು ನೀಡಲು ನೂತನ ಆಯ್ಕೆಯಾಗಿರುವ ಅಧ್ಯಕ್ಷರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ವಕೀಲರಾದ ಚಂದ್ರೇಗೌಡ, ದೇವರಾಜು, ಮಂಜೇಗೌಡ, ಮಹೇಶ್, ಚಂದ್ರು, ಗಂಗಾಧರಸ್ವಾಮಿ, ದಿಲೀಪ್ ಪ್ರದೀಪ್, ಪೃಥ್ವಿ , ಗಿರೀಶ್, ಶ್ರೀನಿಧಿ ಇತರರು ಹಾಜರಿದ್ದರು.