ವಿದ್ಯಾಕಾಂತರಾಜ್
ಸರ್ಕಾರ ವಿದ್ಯುತ್ ಬಿಲ್ ಬಾಕಿ ಪಾವತಿಸದ ಕಾರಣ ಈ ವರ್ಷ ಎತ್ತಿನಹೊಳೆಯಿಂದ ನೀರು ಹರಿಯುವುದು ಅನುಮಾನ.
ಎತ್ತಿನಹೊಳೆಯಿಂದ ಕುಡಿಯುವ ನೀರನ್ನು ಜೂನ್ 15ರಿಂದ ಮೇಲೆತ್ತಬೇಕಿದೆ. ಯೋಜನೆ ಕಾರ್ಯಾರಂಭಕ್ಕೆ ಇನ್ನು 10 ದಿನಗಳು ಮಾತ್ರ ಬಾಕಿ ಇದ್ದರೂ ಸರ್ಕಾರ ಬಾಕಿ ಇರುವ ₹254 ಕೋಟಿ ಮೊತ್ತದ ಬೃಹತ್ ವಿದ್ಯುತ್ ಬಿಲ್ಲನ್ನು ಪಾವತಿಸಿಲ್ಲ. ಹಾಗಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬಗ್ಗೆ ಯೋಚಿಸುತ್ತಿದೆ. ಈ ಕುರಿತು ಹಿರಿಯ ಅಧಿಕಾರಿಗಳ ನಡುವೆ ಮಾತುಕತೆ ನಡೆದಿದೆ ಎಂಬುದು ಸ್ಥಳೀಯ ಸೆಸ್ಕ್ ಅಧಿಕಾರಿಗಳ ಮಾತು.ಬಯಲುನಾಡಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ 2008ರಲ್ಲಿ ₹8 ಸಾವಿರ ಕೋಟಿ ವೆಚ್ಚದಲ್ಲಿ ಮೈದಳೆದ ಈ ಯೋಜನೆ, 2014ರಲ್ಲಿ ಭೂಮಿ ಪೂಜೆ ನೆರವೇರುವ ವೇಳೆಗೆ ₹13 ಸಾವಿರ ಕೋಟಿಗೆ ತಲುಪಿತ್ತು. 10 ವರ್ಷಗಳ ನಂತರ, 2024ರ ಸೆಪ್ಟಂಬರ್ನಲ್ಲಿ ಯೋಜನೆ ಉದ್ಘಾಟನೆಗೊಳ್ಳುವ ವೇಳೆಗೆ ಯೋಜನಾ ವೆಚ್ಚ ₹23 ಸಾವಿರ ಕೋಟಿಗೆ ತಲುಪಿತ್ತು. ಉದ್ಘಾಟನೆಗೊಂಡು ಎರಡು ವರ್ಷ ಕಳೆದರೂ ನಿಗದಿತ ಪ್ರದೇಶಗಳಿಗೆ ನೀರು ಹರಿಸಲು ಯೋಜನೆಯಿಂದ ಸಾಧ್ಯವಾಗಿಲ್ಲ. ಆದರೆ, ಸರ್ಕಾರ ಪ್ರಾಯೋಗಿಕವಾಗಿ ನೀರು ಹರಿಸಿದ್ದಕ್ಕೆ ಬಳಕೆಯಾದ ವಿದ್ಯುತ್ ಬಿಲ್ಲೇ ₹259 ಕೋಟಿ ಈ ಪೈಕಿ, ₹5 ಕೋಟಿ ವಿದ್ಯುತ್ ಬಿಲ್ಲನ್ನು ಮಾತ್ರ ಪಾವತಿಸಲಾಗಿದೆ.
ಈ ಮಧ್ಯೆ, ಸಕಾಲಿಕವಾಗಿ ವಿದ್ಯುತ್ ಬಿಲ್ ಪಾವತಿಸದ ಕಾರಣ ಸೆಸ್ಕ್, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ವಿದ್ಯುತ್ ಸಂಪರ್ಕವನ್ನು 2025ರ ಡಿಸೆಂಬರ್ 16ರಿಂದ ಕಡಿತಗೊಳಿಸಿತ್ತು. ಸತತ ಮೂರು ತಿಂಗಳು ವಿದ್ಯುತ್ ಸಂಪರ್ಕವಿಲ್ಲದೆ ದಿನದೂಡಿದ ಇಲಾಖೆ, ಅಂತಿಮವಾಗಿ ₹5 ಕೋಟಿ ಪಾವತಿಸಿ ಉಳಿದ ಹಣವನ್ನು 2026ರ ಜೂನ್ 15ರೊಳಗಾಗಿ ಭರಿಸುವ ಭರವಸೆ ನೀಡಿ, ಏಪ್ರಿಲ್ 1ರಿಂದ ಸಂಪರ್ಕ ಪಡೆದಿದೆ. ಆದರೆ, ಇನ್ನೂ ಬಾಕಿ ಬಿಲ್ ಪಾವತಿಸಿಲ್ಲ. ಹೀಗಾಗಿ, ಮತ್ತೆ ವಿದ್ಯುತ್ ಕಡಿತ ನಿಶ್ಚಿತ ಎನ್ನಲಾಗುತ್ತಿದೆ.