ಕನ್ನಡಪ್ರಭ ವಾರ್ತೆ ಆನಂದಪುರ
ಸಾಗರ ಜನರಲ್ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವುದೇ ನನ್ನ ಗುರಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.ಸಾಗರ ವಿಧಾನಸಭಾ ಕ್ಷೇತ್ರದ ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ ಸಾಗರ ಜನರಲ್ ಆಸ್ಪತ್ರೆಗೆ ನೂರು ಹಾಸಿಗೆಯ ವ್ಯವಸ್ಥೆ ಕಲ್ಪಿಸುವುದರ ಮೂಲಕ ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು. ಬುಧವಾರ ರಾತ್ರಿ ಆನಂದಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದ ಅವರು, ಸಾಗರ ಜನರಲ್ ಆಸ್ಪತ್ರೆಗೆ ಶಿಕಾರಿಪುರ, ಸೊರಬ ಹಾಗೂ ಸಿದ್ದಾಪುರ ಭಾಗಗಳಿಂದ. ರೋಗಿಗಳು ಬರುತ್ತಿದ್ದಾರೆ. ಎಲ್ಲಾ ರೋಗಿಗಳಿಗೂ ಉತ್ತಮ ಆರೋಗ್ಯ ಸೇವೆ ನೀಡುತ್ತಿರುವ ವೈದ್ಯರ ತಂಡ ಸಾಗರದಲ್ಲಿದ್ದು, ಇದನ್ನು ಮೇಲ್ದರ್ಜೆಗೆ ಏರಿಸುವ ಉದ್ದೇಶದಿಂದ 1 ಕೋಟಿ 42, ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಹಾಗೆ ಆನಂದಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ 60 ಲಕ್ಷ, ಗೌತಮಪುರ ಆರೋಗ್ಯ ಕೇಂದ್ರಕ್ಕೆ 30 ಲಕ್ಷ, ಬಂದಗದ್ದೆ ಸಮುದಾಯ ಆರೋಗ್ಯ ಕೇಂದ್ರಕ್ಕೆ 30 ಲಕ್ಷ ಅನುದಾನಗಳನ್ನು ನೀಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಂದಿನ ದಿನಗಳಲ್ಲಿ ಆವಿನಹಳ್ಳಿ , ತುಮರಿ, ರಿಪ್ಪನ್ಪೇಟೆ, ಹೊಸನಗರ ಆಸ್ಪತ್ರೆಗಳ ಅಭಿವೃದ್ಧಿ ಕೈಗೊಂಡರೆ ಈ ಭಾಗದ ರೋಗಿಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದರಿಂದ ಸಾಗರ ಜನರಲ್ ಆಸ್ಪತ್ರೆಗೆ ಬರುವಂತಹ ರೋಗಿಗಳ ಒತ್ತಡ ಕಡಿಮೆಯಾಗುವ ದೃಷ್ಟಿಯಿಂದ ಕ್ಷೇತ್ರದ ಎಲ್ಲಾ ಆಸ್ಪತ್ರೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅನಿತಾ ಕುಮಾರಿ, ಸೋಮಶೇಖರ್ ಲೌಗೆರೆ, ಎನ್. ಉಮೇಶ್, ರೆಹಮತ್ ಉಲ್ಲಾ, ಆನಂದಪುರ ಪಂಚಾಯತ್ ಅಧ್ಯಕ್ಷ ಮೋಹನ್ ಕುಮಾರ್, ಆಚಾಪುರ ಪಂಚಾಯತ್ ಅಧ್ಯಕ್ಷ ಕಲೀಮುಲ್ಲಾ ಖಾನ್, ಗೌತಮ ಪುರ ಪಂಚಾಯತ್ ಅಧ್ಯಕ್ಷ ಗಂಗಮ್ಮ ನಾಗಪ್ಪ, ಬಗರ್ ಹುಕ್ಕುಂ ಸಮಿತಿ ಸದಸ್ಯ ರವಿಕುಮಾರ್ ದಾಸಕೊಪ್ಪ, ಶರತ್ ನಾಗಪ್ಪ, ಆನಂದ ಹರಟೆ, ಚೇತನ್ ರಾಜ್ ಕಣ್ಣೂರ್, ವೈದ್ಯಾಧಿಕಾರಿಗಳಾದ ಡಾ.ಕಾಂತೇಶ್, ಡಾ.ಸೌಮ್ಯ, ಡಾ.ಸುರೇಶ್, ಇತರರಿದ್ದರು.