ಉಡುಪಿ: ಸ್ನೇಹ ಮತ್ತು ಒಡನಾಟ, ವಿಶ್ವಭ್ರಾತೃತ್ವ, ಮಾನವೀಯ ಕಳಕಳಿಯ ಸೇವಾ ಮನೋಭಾವ, ಸಹಾನುಭೂತಿ, ನೈತಿಕತೆ, ವೈಯುಕ್ತಿಕ ಬೆಳವಣಿಗೆ, ಉದಾರತೆ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಂಡು ಆದರ್ಶ ನಾಗರಿಕರಾಗಿ ರೂಪುಗೊಳ್ಳಲು ರೋಟರಿಯಂತಹ ವೇದಿಕೆ ಬೇರೊಂದಿಲ್ಲ. ನಿರಂತರ ಅಧ್ಯಯನಶೀಲತೆಗೆ ಒತ್ತು ನೀಡುವ ರೋಟರಿ ಅಭಿಯಾನದಲ್ಲಿ ಪಾಲ್ಗೊಂಡು ರೋಟರಿ ಜ್ಞಾನವನ್ನು ವಿಸ್ತರಿಸಿಕೊಂಡು ವ್ಯಕ್ತಿತ್ವದಲ್ಲಿ ಪರಿಪೂರ್ಣತೆಯನ್ನು ಸಾಧಿಸಿಕೊಳ್ಳಬೇಕು ಎಂದು ರೋಟರಿ ಜಿಲ್ಲೆ ೩೧೮೨ರ ನಿಕಟಪೂರ್ವ ಜಿಲ್ಲಾ ಗವರ್ನರ್ ಸಿಎ ದೇವಾನಂದ ಅಭಿಪ್ರಾಯಪಟ್ಟಿದ್ದಾರೆ.
ದೇವಾನಂದ ಅವರು ನೂತನ ಸದಸ್ಯರಿಗೆ ರೋಟರಿ ಲಾಂಛನ ತೊಡಿಸಿ, ಪ್ರಮಾಣವಚನ ಬೋಧಿಸಿದರು. ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ಬಾಸ್ರಿ ಅವರು ಸಂಕಲಿಸಿ ಹೊರತಂದ ‘ರೋಟರಿ ಎಂಬ ವಿಸ್ಮಯ ವಿಶ್ವ’ ರೋಟರಿ ಮಾಹಿತಿ ಕೈಪಿಡಿಯನ್ನೂ ದೇವಾನಂದ ಅನಾವರಣಗೊಳಿಸಿದರು.
ರೋಟರಿ ಉಡುಪಿಯ ಹಿರಿಯ ಸದಸ್ಯಾರಾಗಿದ್ದು ಪ್ರಸ್ತುತ ಲಯನ್ಸ್ ಅಂತಾರಾಷ್ಟ್ರೀಯ ಜಿಲ್ಲೆ ೩೧೭ಅ ಯ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾದ ಸಪ್ನಾ ಸುರೇಶ್ ಅವರನ್ನು ಕ್ಲಬ್ಬಿನ ವತಿಯಿಂದ ಸಂಮಾನಿಸಲಾಯಿತು, ಸಪ್ನಾ ಸುರೇಶ ಅವರು ವಿವಿಧ ಸಂಘ ಸಂಸ್ಥೆಗಳಲ್ಲಿ ತಾನು ಗಳಿಸಿದ ಅನುಭವ ಹಂಚಿಕೊಂಡರು.ಸಭೆಯ ಜಂಟಿ ಅಧ್ಯಕ್ಷತೆ ವಹಿಸಿದ್ದ ಕ್ಲಬ್ಬಿನ ಅಧ್ಯಕ್ಷ ಸೂರಜ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕ್ಲಬ್ ಮೆಂಬರ್ಶಿಪ್ ಚೇರ್ಮನ್ ರಾಮಚಂದ್ರ ಉಪಾಧ್ಯಾಯ ಸಮಾವೇಶದ ಉದ್ದೇಶಗಳ ಕುರಿತು ಮಾತನಾಡಿದರು.ಮಣಿಪಾಲ್ ಹಿಲ್ಸ್ ಅಧ್ಯಕ್ಷರಾದ ಸುರೇಶ್ ರೈ ಅನಿಸಿಕೆ ಹಂಚಿಕೊಂಡರು. ವಲಯ ಸೇನಾನಿ ಜನಾರ್ಧನ ಭಟ್ ಸಮಾರೊಪ ಮಾತುಗಳನ್ನಾಡಿದರು. ಸುಬ್ರಹ್ಮಣ್ಯ ಬಾಸ್ರಿ ನಿರೂಪಿಸಿದರು.ಕಾರ್ಯದರ್ಶಿ ಅಶೋಕ್ ಕೋಟಿಯಾನ್ ಪ್ರಕಟಣೆಗಳನ್ನು ಪ್ರಕಟಿಸಿದರು, ಮಣಿಪಾಲ್ ಹಿಲ್ಸ್ ಕಾರ್ಯದರ್ಶಿ ಶ್ರೀಲತಾ ಮಯ್ಯ ವಂದಿಸಿದರು. ಜಿ ಕೆ ಪ್ರಭು ಮತ್ತು ಕೆ ಜಿ ಪೈ ಸಹಕರಿಸಿದರು.