ಚನ್ನಪಟ್ಟಣ: ನಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜಮುಖಿ ಕೆಲಸಗಳಿಗೆ, ದಾನ ಧರ್ಮ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ರೈಲ್ವೆ ಪೊಲೀಸ್ ಅಧಿಕಾರಿ ರಾಂಪುರ ಮಲ್ಲೇಶ್ ತಿಳಿಸಿದರು.
ಸಾಮಾಜಿಕ ಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ತಾಲೂಕಿನ ಪ್ರಬುದ್ಧರು, ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಸಮಾನ ಮನಸ್ಕರೆಲ್ಲರೂ ಸೇರಿ ಶುಭೋದಯ ಸಾಂಸ್ಕೃತಿಕ ತಂಡ ಕಟ್ಟಿಕೊಂಡು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಶುಭೋದಯ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಲಬ್ನ ಅಧ್ಯಕ್ಷ ಎಂ.ಶಿವಮಾದು ಮಾತನಾಡಿ, ಮನುಷ್ಯನ ಹುಟ್ಟು-ಸಾವು ಸಹಜ. ಆದರೆ ಇವೆರಡರ ಮಧ್ಯೆ ಹೇಗೆ ಬದುಕಬೇಕೆಂಬುದೇ ಜೀವನ. ಸ್ವಾರ್ಥಕ್ಕಾಗಿ ಬದುಕದೆ ಸಮಾಜ ಸೇವೆಗೆ ಮೀಸಲಿಡಬೇಕು, ಇದರಿಂದ ಬದುಕು ಸಾರ್ಥಕತೆ ಜತೆಗೆ ಸಮಾಧಾನ ಇರುತ್ತದೆ. ನಿಸ್ವಾರ್ಥ ಸೇವೆ ನಮ್ಮ ಮೌಲ್ಯವನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಶುಭೋದಯ ತಂಡ ಕಟ್ಟಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಗಿಡ ನೆಡುವ ಕಾರ್ಯಕ್ರಮ ಮೊದಲಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.ಕ್ಲಬ್ನ ಗೌರವಾಧ್ಯಕ್ಷ ಹಾಪ್ಕಾಮ್ಸ್ ಸಿದ್ದಪ್ಪ ಚಂದು, ಎಲೆಕ್ಟ್ರಾನಿಕ್ಸ್ ಮಾಲೀಕ, ಉದ್ಯಮಿ ಮಹೇಶ್ವರ್, ಮುಖಂಡರಾದ ರಾಂಪುರ ಮಲವೇಗೌಡ, ಆರ್.ಕೆ.ರಾಮಕೃಷ್ಣೇಗೌಡ ಮಾತನಾಡಿದರು. ಉಪಾಧ್ಯಕ್ಷ ಬಿ.ಪುಟ್ಟಲಿಂಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಖಜಾಂಚಿ ಸಿ.ಎಸ್. ಶ್ರೀಕಂಠಯ್ಯ ಲೆಕ್ಕಪರಿಶೋಧನಾ ವರದಿ ಮಂಡಿಸಿದರು.
ಪೊಟೋ೩೧ಸಿಪಿಟಿ೧: ಚನ್ನಪಟ್ಟಣದಲ್ಲಿ ಶುಭೋದಯ ಸಾಂಸ್ಕೃತಿಕ, ಕ್ರೀಡಾ ಕ್ಲಬ್ನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಲಾಯಿತು.