ಸರ್ಕಾರಿ ಸೇವೆಗಳು ಅರ್ಹರಿಗೆ ತಲುಪಿಸಿ

KannadaprabhaNewsNetwork |  
Published : Sep 06, 2026, 02:45 AM IST
ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದಲ್ಲಿ ಜರುಗಿದ ಪ್ರಜಾಸೇವೆ ಅಭಿಯಾನದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಮಂಜೂರಾದ ಮಾಶಾಸನದ ಆದೇಶದ ಪ್ರತಿಯನ್ನು ವಿಕಲಚೇತನ ವ್ಯಕ್ತಿಗೆ ವಿತರಿಸಲಾಯಿತು. | Kannada Prabha

ಸಾರಾಂಶ

ವೈಯಕ್ತಿಕ ಅಥವಾ ಸಾರ್ವಜನಿಕ ಕೆಲಸಗಳಿಗಾಗಿ ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಈ ಅಭಿಯಾನ ಹಮ್ಮಿಕೊಂಡಿದ್ದು ಸ್ಥಳದಲ್ಲಿಯೇ ಸಮಸ್ಯೆ ಆಲಿಸಿ ಪರಿಹರಿಸುವ ಪ್ರಯತ್ನ ಮಾಡಲಾಗುತ್ತದೆ.

ಅಳ್ನಾವರ:

ಸರ್ಕಾರಿ ಸೇವೆಗಳು ಅರ್ಹ ಫಲಾನುಭವಿಗೆ ತಲುಪಿಸಲು ಸರ್ಕಾರ ಜಾರಿಗೆ ತಂದಿರುವ ಪ್ರಜಾಸೇವಾ ಆಂದೋಲನ ಸಹಕಾರಿಯಾಗಲಿದೆ ಎಂದು ತಹಸೀಲ್ದಾರ್‌ ಡಾ. ಡಿ.ಎಚ್. ಹೂಗಾರ ಅಭಿಪ್ರಾಯಪಟ್ಟರು.

ತಾಲೂಕಿನ ಕಡಬಗಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈಯಕ್ತಿಕ ಅಥವಾ ಸಾರ್ವಜನಿಕ ಕೆಲಸಗಳಿಗಾಗಿ ಜನರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಈ ಅಭಿಯಾನ ಹಮ್ಮಿಕೊಂಡಿದ್ದು ಸ್ಥಳದಲ್ಲಿಯೇ ಸಮಸ್ಯೆ ಆಲಿಸಿ ಪರಿಹರಿಸುವ ಪ್ರಯತ್ನ ಮಾಡಲಾಗುತ್ತದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಶಾಸಕರು ಮತ್ತು ಸಚಿವರ ಮೂಲಕ ಪ್ರಸ್ತಾವನೆ ಸಲ್ಲಿಸಿ ಹಂತ-ಹಂತವಾಗಿ ಅನುದಾನದ ಲಭ್ಯತೆಯ ಮೇರೆಗೆ ಬೇಡಿಕೆ ಈಡೇರಿಸಲಾಗುವುದು ಎಂದು ತಿಳಿಸಿದರು.

ಕೆಲಸ ಮಾಡಿ ಹಲವು ತಿಂಗಳು ಕಳೆದರೂ ಕೂಲಿ ಪಾವತಿಸಿಲ್ಲವೆಂದು ನರೇಗಾ ಕಾರ್ಮಿಕರು ದೂರಿದರೆ, ಬಸ್ ಸೇವೆಯಲ್ಲಿ ಅಡಚಣೆ, ಪಡಿತರ ಕಾರ್ಡ್‌ಗಳ ವಿತರಣೆ, ರದ್ದಾದ ಮಾಸಾಶನ ಪುನರ್‌ ಮಂಜೂರಾತಿ, ವಸತಿ ಯೋಜನೆಯಡಿ ಮನೆಗಳ ಹಂಚಿಕೆ ಸೇರಿದಂತೆ ರಸ್ತೆ, ಚರಂಡಿ, ಮಕ್ಕಳಿಗೆ ಶಾಲಾ ಆಟದ ಮೈದಾನ ಮುಂತಾದ ಸಮಸ್ಯೆಗಳನ್ನು ಜನರು ಅಧಿಕಾರಿಗಳ ಮುಂದಿಟ್ಟರು.

ಆಹಾರ ಅರಸಿ ನಾಡಿಗೆ ಬರುತ್ತಿರುವ ಕಾಡು ಪ್ರಾಣಿಗಳಿಗೆ ಅರಣ್ಯದಲ್ಲಿಯೇ ಹಣ್ಣಿನ ಗಿಡ ನೆಡುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಕಡಬಗಟ್ಟಿ ಗ್ರಾಮದ ಗೋವಿಂದ ಪಾಟೀಲ ಹೇಳುವ ಮೂಲಕ ಅಧಿಕಾರಗಳ ಗಮನ ಸೆಳೆದರು. ಕಾಡು ಹಂದಿ ಮತ್ತಿತರ ಪ್ರಾಣಿಗಳಿಂದ ಉಂಟಾದ ಬೆಳೆ ನಾಶಕ್ಕೆ ಪರಿಹಾರ ನೀಡುವಂತೆಯೂ ರೈತರು ಸಭೆಯಲ್ಲಿ ಆಗ್ರಹಿಸಿದರು.

ಅಳ್ನಾವರದಲ್ಲಿ ಪಶು ಆಸ್ಪತ್ರೆಯನ್ನು ಪಟ್ಟಣದಿಂದ ದೂರ ನಿರ್ಮಿಸಿದ್ದು ಜಾನುವಾರುಗಳನ್ನು ಅಲ್ಲಿಯ ವರೆಗೆ ತೆಗೆದುಕೊಂಡು ಹೋಗುವುದು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಇದ್ದ ಸ್ಥಳದಲ್ಲಿಯೇ ಪಶು ಆಸ್ಪತ್ರೆ ಪ್ರಾರಂಭಿಸಬೇಕು ಮತ್ತು ಕಡಬಗಟ್ಟಿ ಗ್ರಾಮದಲ್ಲಿ ಪಶು ಆಸ್ಪತ್ರೆಯ ಉಪ ಕೇಂದ್ರ ತೆರೆಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಮಾಸಾಶನ ಮಂಜೂರಾತಿ ಪತ್ರಗಳನ್ನು ಫಲಾನುಭವಿಗಳಿಗೆ ಸಭೆಯಲ್ಲಿ ವಿತರಿಸಲಾಯಿತು. ಭಾಗ್ಯಲಕ್ಷ್ಮೀ ಬಾಂಡಗಳ ಪುಸ್ತಕಗಳನ್ನು ಇದೇ ವೇಳೆ ಹಂಚಿಕೆ ಮಾಡಲಾಯಿತು. ಹುಲಿಕೇರಿ, ಕಾಶೆನಟ್ಟಿ ರಸ್ತೆ ಅಗಲಿಕರಣ, ದುರಸ್ತಿ, ರಸ್ತೆಯ ಅಕ್ಕ ಪಕ್ಕದಲ್ಲಿ ಬೆಳೆದು ನಿಂತಿರುವ ಗಿಡ-ಕಂಟಿಗಳ ಕಟಾವು ಮಾಡುವುದು, ವಿದ್ಯುತ್ ದೀಪಗಳ ಅಳವಡಿಕೆ, ನೀರು ಸರಬರಾಜು ಸೇರಿದಂತೆ ವಿವಿಧ ಮನವಿಗಳು ಸಲ್ಲಿಕೆಯಾದವು.

ತಾಪಂ ಇಒ ಪ್ರಶಾಂತ ತುರಕಾಣಿ, ಅಂಗನವಾಡಿ ಮೇಲ್ವಿಚಾರಕಿ ಶಿಲ್ಪಾ ತರಗಾರ, ಆರ್‌ಎಫ್‌ಒ ಬಸವರಾಜ, ತಾಪಂ ಎಡಿ ಸಂತೋಷ ತಳಕಲ್ ಹಾಗೂ ವಿವಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಪಿಡಿಒ ಆನಂದ ಪಾಟೀಲ ಸ್ವಾಗತಿಸಿ ನಿರೂಪಿಸಿದರು. ಕಾರ್ಯದರ್ಶಿ ಷಣ್ಮುಖ ಸುಳಗೇಕರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅ. 22ರ ವರೆಗೆ ಮತದಾರ ಚೀಟಿ ತಿದ್ದುಪಡಿಗೆ ಅವಕಾಶ
ಬಸ್ ನಿಲ್ಲದಿದ್ದರೆ ಹೆದ್ದಾರಿ ಬಂದ್: ಗ್ರಾಮಸ್ಥರ ಎಚ್ಚರಿಕೆ