ಪರಿಸರ ಕಾಳಜಿ ಮನೆಯಿಂದಲೇ ಆರಂಭವಾಗಲಿ: ಸಿದ್ದರಾಜ ಕಲಕೋಟಿ

KannadaprabhaNewsNetwork | Published : Jun 8, 2025 2:22 AM
ಹಾವೇರಿಯ ಇಲ್ಲಿಯ ಬಿ.ಎಂ. ಇಂಟರ್‌ನ್ಯಾಶನಲ್‌ ಪಬ್ಲಿಕ್‌ ಶಾಲೆಯಲ್ಲಿ ಇತ್ತೀಚೆಗೆ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಶಾಲೆಯ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಉದ್ಘಾಟಿಸಿದರು.

ಹಾವೇರಿ: ಪರಿಸರ ಮಾಲಿನ್ಯದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿರಬೇಕು. ಅದಕ್ಕಾಗಿ ಪರಿಸರ ಕಾಳಜಿ ಮಕ್ಕಳಿಗೆ ಮನೆಯಿಂದಲೇ ಆರಂಭವಾಗಬೇಕು ಎಂದು ಬಿಎಂ ಇಂಟರ್‌ನ್ಯಾಶನಲ್‌ ಪಬ್ಲಿಕ್‌ ಶಾಲೆಯ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಹೇಳಿದರು.

ಇಲ್ಲಿಯ ಬಿ.ಎಂ. ಇಂಟರ್‌ನ್ಯಾಶನಲ್‌ ಪಬ್ಲಿಕ್‌ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು. ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಎಸೆಯುವುದು, ಕಸ ತ್ಯಾಜ್ಯ ಹಾಕುವುದನ್ನು ಎಲ್ಲ ಕಡೆ ನೋಡುತ್ತೇವೆ. ಇಂದಿನಿಂದ ನಮ್ಮೆಲ್ಲ ಮಕ್ಕಳು ಎಲ್ಲಿಂದರಲ್ಲಿ ಪ್ಲಾಸ್ಟಿಕ್ ಎಸೆಯುವುದನ್ನು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಪರಿಸರಕ್ಕೆ ಈ ಪ್ಲಾಸ್ಟಿಕ್‌ ಅತ್ಯಂತ ಮಾರಕವಾಗಿದೆ. ಪರಿಸರ ಉಳಿಸಲು ಪ್ರಮುಖವಾಗಿ ಗಿಡ-ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಾಗಬೇಕು. ನಮ್ಮ ಮನೆಯ ಪರಿಸರದಲ್ಲಿ ಪ್ರತಿಯೊಂದು ಮಗು ಒಂದೊಂದು ಗಿಡಗಳನ್ನು ಪಾಲನೆ ಪೋಷಣೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಮಾರಕ ಕಾಯಿಲೆಗಳು ಬಂದ ಸಂದರ್ಭಗಳಲ್ಲಿ ಆಕ್ಸಿಜನ್‌ ಕೊರತೆಯಿಂದ ಅನೇಕರು ಮೃತಪಟ್ಟಿರುವುದನ್ನು ನಾವು ನೋಡುತ್ತೇವೆ. ಇದಕ್ಕೆಲ್ಲ ಪರಿಹಾರ ಗಿಡಗಳನ್ನು ಬೆಳೆಸಿ ಮುನ್ನಡೆಯುವುದೊಂದೆ ದಾರಿ. ನಮ್ಮ ಭೂಮಿ, ನಮ್ಮ ಭವಿಷ್ಯ, ನಾವು ಎಂಬ ಘೋಷಣೆ ಮಹತ್ವದ್ದಾಗಿದೆ. ಪರಿಸರಸ್ನೇಹಿ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಪರಿಸರದ ಮೇಲೆ ಕನಿಷ್ಠ ಪರಿಣಾಮ ಬೀರುವಂತಹ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಗಮನವಿರಬೇಕು. ನೀರು ಮತ್ತು ಶಕ್ತಿಯನ್ನು ಸಂರಕ್ಷಿಸಿ ಉಳಿಸಿದ ಪ್ರತಿಯೊಂದು ಹನಿ ನೀರು ಮತ್ತು ಪ್ರತಿಯೊಂದು ವ್ಯಾಟ್ ಶಕ್ತಿಯ ಆರೋಗ್ಯಕರ ಜೀವನಕ್ಕೆ ಕೊಡುಗೆ ನೀಡುತ್ತದೆ. ಅರಣ್ಯ, ಗಾಳಿ, ನೀರಿನ ಮಾಲಿನ್ಯ ಮಾಡುವುದನ್ನು ಇಂದಿನಿಂದಲೇ ನಿಲ್ಲಿಸಬೇಕು ಎಂದು ಹೇಳಿದರು.

ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ವಿದ್ಯಾರ್ಥಿಗಳಾದ ಪ್ರಥ್ವಿಕ್‌ ವಿ. ಹಾವನೂರ್ ಮತ್ತು ದೀಕ್ಷಿತಾ ಎಸ್. ಕಲಕೋಟಿ ಪರಿಸರ ದಿನಾಚರಣೆ ಕುರಿತು ಮಾತನಾಡಿದರು. ಪ್ರಾಂಶುಪಾಲರು, ಶಿಕ್ಷಕರು ಇದ್ದರು.