ಕನ್ನಡಪ್ರಭ ವಾರ್ತೆ, ಶಿವಮೊಗ್ಗ ಪರಿಸರ ನಾಶದಿಂದ ಮನುಕುಲ ತೊಂದರೆಗೆ ಸಿಲುಕಿದ್ದು, ಇನ್ನಾದರೂ ಎಚ್ಚೆತ್ತುಕೊಂಡು ಪರಿಸರ ರಕ್ಷಿಸುವ ಕೆಲಸ ಆಗಬೇಕು. ಪರಿಸರ ಸಂರಕ್ಷಣೆ ಸಮಾಜದ ಪ್ರತಿಯೊಬ್ಬರ ಕರ್ತವ್ಯ ಆಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಹೇಳಿದರು. ನಗರದ ರಾಜೀವ್ ಗಾಂಧಿ ಬಡಾವಣೆಯ ರೋಟರಿ ಚಿತಾಗಾರದಲ್ಲಿ ಶನಿವಾರ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಯುಮಾಲಿನ್ಯ, ಜಲಮಾಲಿನ್ಯ ಸೇರಿದಂತೆ ಪರಿಸರ ಮಾಲಿನ್ಯ ಹೆಚ್ಚಾದರೆ ಬದುಕಲು ಒಳ್ಳೆಯ ವಾತಾವರಣ ಇರುವುದಿಲ್ಲ. ಪ್ರತಿಯೊಬ್ಬರು ಸಸಿಗಳನ್ನು ನೆಡುವ ಜತೆಯಲ್ಲಿ ಪೋಷಣೆ ಕಾರ್ಯ ನಡೆಸಿದರೆ ಉತ್ತಮ ಪರಿಸರ ನಮ್ಮದಾಗುತ್ತದೆ ಎಂದು ತಿಳಿಸಿದರು. ರೋಟರಿ ಸಹಾಯಕ ಗವರ್ನರ್ ರವಿ ಕೋಟೋಜಿ ಮಾತನಾಡಿ, ರೋಟರಿ ಸಂಸ್ಥೆ ನಿರ್ವಹಿಸುತ್ತಿರುವ ರೋಟರಿ ಚಿತಾಗಾರವು ಉತ್ತಮವಾಗಿ ನಡೆಯುತ್ತಿದೆ. ಸೂಕ್ತ ವ್ಯವಸ್ಥೆಗಳನ್ನು ಒಳಗೊಂಡಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಡಾ. ಪರಮೇಶ್ವರ್ ಶಿಗ್ಗಾವಿ ಮಾತನಾಡಿ, ಪರಿಸರ ನಾಶವು ಹೆಚ್ಚಿನ ಸಮಸ್ಯೆಗಳನ್ನು ತಂದೊಡಲಿದೆ. ಆದ್ದರಿಂದ ಪರಿಸರ ನಾಶ ತಪ್ಪಿಸಬೇಕಿದೆ. ಬಾಲ್ಯದಿಂದಲೇ ಮಕ್ಕಳಲ್ಲಿ ಪರಿಸರ ಜಾಗೃತಿ ಬೆಳೆಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ರೋಟರಿ ಚಿತಾಗಾರ ಆವರಣದಲ್ಲಿ ವಿವಿಧ ರೀತಿಯ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ, ಖಜಾಂಚಿ ಜಿ.ವಿಜಯ್ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶಚಂದ್ರ, ಪೂರ್ವ ಸಂಸ್ಥೆ ಕಾರ್ಯದರ್ಶಿ ಕಿಶೋರ್ ಕುಮಾರ್, ದಿವ್ಯಾ ಪ್ರವೀಣ್, ಶ್ರೀಕಾಂತ್, ಡಾ. ಗುಡದಪ್ಪ ಕಸಬಿ, ನಿವೃತ್ತ ಡಿಎಫ್ಒ ಮಂಜುನಾಥ್, ಸಿ.ಕೆ.ವಿಜಯಕುಮಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. - - - -29ಎಸ್ಎಂಜಿಕೆಪಿ03: ಶಿವಮೊಗ್ಗದ ರಾಜೀವ್ ಗಾಂಧಿ ಬಡಾವಣೆಯ ರೋಟರಿ ಚಿತಾಗಾರದಲ್ಲಿ ಶನಿವಾರ ಸಸಿ ನೆಡುವ ಕಾರ್ಯಕ್ರಮ ನಡೆಯಿತು.