ಹುಬ್ಬಳ್ಳಿ: ಬಸವನಬಾಗೇವಾಡಿಯಲ್ಲಿ ಉದ್ಘಾಟನೆಗೊಂಡ "ಕ್ರಾಂತಿವೀರ ಬ್ರಿಗೇಡ್ " ದಲಿತರು, ಹಿಂದುಳಿದವರ ಏಳ್ಗೆಗಾಗಿ ನಿರ್ಮಾಣವಾದ ಸಂಘಟನೆಯಾಗಿದೆ. ಮುಂದಿನ ದಿನಗಳಲ್ಲಿ ನೊಂದ ದಲಿತರು, ಹಿಂದುಳಿದವರಿಗೆ ನ್ಯಾಯ ಒದಗಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಬ್ರಿಗೇಡ್ ಸಂಸ್ಥಾಪಕ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಸಂಘಟನೆಯ ಉದ್ಘಾಟನೆಯ ದಿನದಂದು ಎಲ್ಲ ಸಮಾಜದ 1008 ಸಾಧು- ಸಂತರ ಪಾದಪೂಜೆ ಮಾಡುವ ಸಂಕಲ್ಪ ಹಾಕಿಕೊಳ್ಳಲಾಗಿತ್ತು. ಸರ್ವ ಸಮಾಜದ 1200ಕ್ಕೂ ಅಧಿಕ ಸಾಧು-ಸಂತರು ಪಾಲ್ಗೊಂಡಿದ್ದರು. ಈ ಮೂಲಕ ಸಂಘಟನೆಗೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಒಂದೇ ವೇದಿಕೆಯಲ್ಲಿ ಇಷ್ಟೊಂದು ಸಾಧು-ಸಂತರ ಸಮಾಗಮವಾಗಿರುವುದು ಇತಿಹಾಸದಲ್ಲೇ ಮೊದಲು ಎಂದರು.
ಹಿಂದುಳಿದ ವರ್ಗ, ದಲಿತರು, ಇಡೀ ಹಿಂದೂ ಸಮಾಜ ಇಂದು ಹಲವು ಸಂಕಷ್ಟಗಳನ್ನು ಅನುಭವಿಸುತ್ತಿದೆ. ಬ್ರಿಗೇಡ್ ಅಂತಹ ಸಮಸ್ಯೆಗಳನ್ನು ನಿವಾರಿಸುವ ಪ್ರತಿಜ್ಞೆ ಮಾಡಿದೆ. ಸಂಘಟನೆ ದೊಡ್ಡ ಮಟ್ಟದಲ್ಲಿ ಬೆಳೆಯಲು ಹಲವು ಸಾಧು-ಸಂತರು ಆಶೀರ್ವಾದ, ಮಾರ್ಗದರ್ಶನ ನೀಡಿರುವುದು ಮತ್ತಷ್ಟು ಸ್ಫೂರ್ತಿಯಿಂದ ಕೆಲಸ ಮಾಡಲು ಪ್ರೇರಣೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಬ್ರಿಗೇಡ್ನ ಸಮಿತಿ ರಚಿಸಲು ಬೇಕಾದ ಎಲ್ಲ ರೂಪರೇಷೆ ಹಾಕಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಭಿಪ್ರಾಯ ಪಡೆಯಲು ಹುಬ್ಬಳ್ಳಿಯಲ್ಲೂ ಕಾರ್ಯಕರ್ತರ ಸಭೆ ನಡೆಸಲಾಗಿದೆ ಎಂದರು.ಈ ವೇಳೆ ಕ್ರಾಂತಿವೀರ ರಾಯಣ್ಣ ಬ್ರಿಗೇಡ್ ವಕ್ತಾರ ವೀರಣ್ಣ ಹಳೇಗೌಡ, ಅಮರೇಶ್ವರ ಶ್ರೀ, ಮಾದುಲಿಂಗ ಮಹಾರಾಜರು, ಕೆಂಚರಾಯ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಬಸವರಾಜ ನಿಡಗುಂದಿ ಸೇರಿದಂತೆ ಹಲವರಿದ್ದರು.
ಹುಬ್ಬಳ್ಳಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಿಂದುತ್ವದ ಪರ ತಮ್ಮ ನಿಲುವು ಪ್ರಕಟಿಸುವುದರೊಂದಿಗೆ ಇತರರಿಗೆ ಮಾದರಿಯಾಗಿದ್ದಾರೆ. ಅವರಿಗೆ ಈಗಲಾದರೂ ಬುದ್ಧಿ ಬಂದಿದೆ. ಅದರಂತೆ ಮುಖಮಂತ್ರಿ ಸಿದ್ದರಾಮಯ್ಯನವರಿಗೂ ಬುದ್ದಿ ಬರಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಸ್ವಾಂತಂತ್ರ್ಯ ಪೂರ್ವದಲ್ಲಿನ ಕಾಂಗ್ರೆಸ್ಸಿಗರು ಸ್ವಾತಂತ್ರ್ಯದ ಹೋರಾಟ ಮಾಡಿದ್ದೇ ಹಿಂದುತ್ವವನ್ನು ಮತ್ತೆ ವೈಭವೀಕರಿಸುವ ಉದ್ದೇಶದಿಂದ. ಹಳೇ ಕಾಂಗ್ರೆಸ್ಸಿಗರ ರಕ್ತದಲ್ಲಿ ಈಗಲೂ ಹಿಂದುತ್ವ ಅಡಗಿದೆ. ಕಾಂಗ್ರೆಸ್ನಲ್ಲಿರುವ ಎಲ್ಲರೂ ಧರ್ಮದ್ರೋಹಿಗಳಲ್ಲ. ಆದರೆ, ಕೆಲವರು ಮತಬ್ಯಾಂಕ್ಗಾಗಿ ಮುಸ್ಲಿಮರನ್ನು ಓಲೈಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಹಿಂದುತ್ವ ನಾಶಮಾಡಲು ಯತ್ನಿಸಿದ ವ್ಯಕ್ತಿ, ಪಕ್ಷ ದೇಶದಲ್ಲಿ ನಿರ್ನಾಮ ಆಗುತ್ತಿದೆ. ಯಾವುದಾದರೂ ರಾಜಕಾರಣಿಗಳ ಮಗಳನ್ನು ಮುಸ್ಲಿಮರು ಆಸೆ ತೋರಿಸಿ, ಅನ್ಯಾಯ ಮಾಡಿದಾಗ ಲವ್ ಜಿಹಾದ್ ವಿರುದ್ಧದ ಕಾನೂನು ಸರಿ ಎಂಬುದು ಆಗ ಗೊತ್ತಾಗುತ್ತದೆ. ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರನ್ನು ಶಿವಮೊಗ್ಗ ಜಿಲ್ಲೆಗೆ ಬರದಂತೆ ಸರ್ಕಾರ ನಿಷೇಧ ಹೊರಡಿಸಿರುವುದು ಸರಿಯಲ್ಲ. ಹೆಣ್ಣುಮಕ್ಕಳ ರಕ್ಷಣೆಗಾಗಿ ಮುತಾಲಿಕ್ ಕೆಲಸ ಮಾಡುತ್ತಿದ್ದಾರೆ. ಆದರೆ, ಸರ್ಕಾರ ಯಾರನ್ನೋ ತೃಪ್ತಿಪಡಿಸಲು ಮುತಾಲಿಕ್ ಅವರಂತಹ ರಾಷ್ಟ್ರಭಕ್ತರಿಗೆ ಈ ರೀತಿಯ ತೊಂದರೆ ನೀಡುತ್ತಿರುವುದು ಸರಿಯಲ್ಲ ಎಂದರು.