3 ದಶಕವಾದರೂ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ, ಹೈಟೆಕ್ ಶಾಲೆ, ಕೈಗಾರಿಕೆ ಇಲ್ಲ

KannadaprabhaNewsNetwork | Published : May 4, 2024 12:33 AM

ಸಾರಾಂಶ

ಜಿಲ್ಲೆಯಲ್ಲಿ ಮೂರು ದಶಕವಾದರೂ ಸುಸಜ್ಜಿತ ಆಸ್ಪತ್ರೆ, ಸರ್ಕಾರಿ ಮೆಡಿಕಲ್ ಕಾಲೇಜು, ಹೈಟೆಕ್ ಶಾಲೆಗಳು, ದೊಡ್ಡ ಕೈಗಾರಿಕೆಗಳು ಯಾಕೆ ಬಂದಿಲ್ಲ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯಕುಮಾರ್ ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಜಿಲ್ಲೆಯಲ್ಲಿ ಮೂರು ದಶಕವಾದರೂ ಸುಸಜ್ಜಿತ ಆಸ್ಪತ್ರೆ, ಸರ್ಕಾರಿ ಮೆಡಿಕಲ್ ಕಾಲೇಜು, ಹೈಟೆಕ್ ಶಾಲೆಗಳು, ದೊಡ್ಡ ಕೈಗಾರಿಕೆಗಳು ಯಾಕೆ ಬಂದಿಲ್ಲ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯಕುಮಾರ್ ಪ್ರಶ್ನಿಸಿದರು.

ಶುಕ್ರವಾರ ಹೊನ್ನಾಳಿ- ನ್ಯಾಮತಿ ತಾಲೂಕಿನ ಸಾಗರಪೇಟೆಯಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು 35 ವರ್ಷದಿಂದ ಶಾಸಕರಾಗಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿಲ್ಲ. ದೊಡ್ಡ ಕೈಗಾರಿಕೆ ತಂದಿಲ್ಲ. ಹೈಟೆಕ್ ಶಾಲೆಗಳೂ ಆಗಿಲ್ಲ. ದೊಡ್ಡ ಕೈಗಾರಿಕೆಗಳನ್ನು ತರಲು ಸಾಧ್ಯವಾಗಿಲ್ಲ. ಅದೇ ರೀತಿ ಡಾ.ಜಿ.ಎಂ.ಸಿದ್ದೇಶ್ವರರು ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿ ಹೋಗಿದ್ದರೂ ಪ್ರಯೋಜನ ಮಾತ್ರ ಶೂನ್ಯ ಎಂದರು.

ದಾವಣಗೆರೆ ಜಿಲ್ಲೆಯ ಜನರು ತುಂಬಾನೇ ಸ್ವಾಭಿಮಾನಿಗಳು. ಅಭಿವೃದ್ಧಿಪರ, ಜನಪರ, ಜನಾಭಿಪ್ರಾಯ, ಪ್ರಜಾಪ್ರಭುತ್ವ, ಸಂವಿಧಾನದಂತೆ ನಡೆದುಕೊಳ್ಳುತ್ತಿರುವ ನನಗೆ ಬೆಂಬಲ ನೀಡಿ. ಭರವಸೆ ಕೊಡುವವರಿಗೆ ಮತ ಕೊಡಬೇಡಿ, ಕೆಲಸ ಮಾಡುವವರಿಗೆ ಒಂದು ಅವಕಾಶ ಕೊಡಿ ಎಂದು ಹೇಳಿದರು.ನೀವು ಚಲಾಯಿಸುವ ಒಂದೊಂದು ಮತವೂ ಮಹತ್ವದ್ದೇ. ನನಗೆ ಮತ ನೀಡಿ, ಜೀವನ ಬದಲಾಗುವಂತೆ ಮಾಡುವ ಕರ್ತವ್ಯ ನನ್ನದು. ನಾನು ಕೇವಲ ಭರವಸೆ ಕೊಟ್ಟು ಹೋಗುವವನಲ್ಲ. ನಿಮ್ಮ ಮಧ್ಯೆಯೇ ಇದ್ದು ಸೇವೆ ಮಾಡಲು ಬಂದಿರುವವನು. ದೇಶಾದ್ಯಂತ ಐಎಎಸ್, ಐಪಿಎಸ್ ತರಬೇತಿ ನೀಡುವ ಕೋಚಿಂಗ್ ಸೆಂಟರ್ ಆರಂಭಿಸಿದ್ದೇನೆ. ಎಷ್ಟೋ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದ್ದೇನೆ. ಸಾವಿರಾರು ಐಎಎಸ್, ಐಪಿಎಸ್ ಅಧಿಕಾರಿಗಳು ದೇಶಾದ್ಯಂತ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಮಕ್ಕಳೂ ಈ ಸ್ಥಾನಕ್ಕೆ ಹೋಗಬೇಕು. ಈ ಜವಾಬ್ದಾರಿ ನನಗೆ ನೀಡಿ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದರೆ ಎಲ್ಲವೂ ಸಾಧ್ಯವಾಗುವಂತೆ ಮಾಡಿ ತೋರಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ಗ್ರಾಮಸ್ಥರು, ಪಕ್ಷದ ಕಾರ್ಯಕರ್ತರು ಇದ್ದರು.

- - - -3ಕೆಡಿವಿಜಿ41ಃ:

ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ್ ಹೊನ್ನಾಳಿ-ನ್ಯಾಮತಿ ತಾಲೂಕಿನ ಸಾಗರಪೇಟೆಯಲ್ಲಿ ಮತಯಾಚನೆ ಮಾಡಿದರು.

Share this article