ಕಾನೂನು ಬಂದು 50 ವರ್ಷವಾದರೂ ನಿಂತಿಲ್ಲ ಜೀತ ಪದ್ಧತಿ

KannadaprabhaNewsNetwork |  
Published : Mar 06, 2026, 02:30 AM IST
ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಗುರುವಾರ ಜಿಪಂ ಸಭಾಂಗಣದಲ್ಲಿ ಜೀತ ಪದ್ಧತಿ ನಿಷೇಧಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿದರು. | Kannada Prabha

ಸಾರಾಂಶ

ಜೀತ ಪದ್ಧತಿಯು ಅನಿಷ್ಠ ಸಂಪ್ರದಾಯ. ಇದು ಸಮಾನತೆ ಮತ್ತು ಮಾನವ ವಿರೋಧಿ ಪದ್ಧತಿ. ಇದನ್ನು ತಡೆಗಟ್ಟಲು ಸಮಾಜದ ಎಲ್ಲರೂ ಕೈಜೋಡಿಸಬೇಕು. ವಿಶೇಷವಾಗಿ ಸಂಬಂಧಿಸಿದ ಇಲಾಖೆಗಳ ಮತ್ತು ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯತೆ ಇರಲಿ ಎಂದು ಜಿಲ್ಲಾಧಿಕಾರಿ ಹೇಳಿದರು.

ಧಾರವಾಡ:

ಕರ್ನಾಟಕದಲ್ಲಿ ಜೀತ ಪದ್ಧತಿ ನಿಷೇಧ ಕಾನೂನು ಜಾರಿಗೆ ಬಂದು 50 ವರ್ಷಗಳಾದರೂ ಇನ್ನೂ ಕೆಲವೆಡೆ ಈ ಪದ್ಧತಿ ಕಂಡು ಬರುತ್ತಿರುವುದು ಆತಂಕಕಾರಿ ವಿಷಯ ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಹೇಳಿದರು.

ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಗುರುವಾರ ಜಿಲ್ಲಾ ಪಂಚಾಯಿತಿಯಲ್ಲಿ ಜೀತ ಪದ್ಧತಿ ನಿಷೇಧಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿದ ಅವರು, ಜೀತ ಪದ್ಧತಿಯು ಅನಿಷ್ಠ ಸಂಪ್ರದಾಯ. ಇದು ಸಮಾನತೆ ಮತ್ತು ಮಾನವ ವಿರೋಧಿ ಪದ್ಧತಿ. ಇದನ್ನು ತಡೆಗಟ್ಟಲು ಸಮಾಜದ ಎಲ್ಲರೂ ಕೈಜೋಡಿಸಬೇಕು. ವಿಶೇಷವಾಗಿ ಸಂಬಂಧಿಸಿದ ಇಲಾಖೆಗಳ ಮತ್ತು ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯತೆ ಇರಲಿ. ಜೀತ ಮುಕ್ತ ಜಿಲ್ಲೆ ಹಾಗೂ ಸಮಾಜವನ್ನು ರೂಪಿಸಲು ಪ್ರಯತ್ನಿಸಬೇಕು. ಈ ಪದ್ಧತಿ ದಾಸ್ಯದ ಸಂಕೇತ. ಜೀತ ಮುಕ್ತ ಸಮಾಜವಾಗಲು ಮತ್ತು ಪರಸ್ಪರಲ್ಲಿ ಸಮಾನತೆ ಸಾಧಿಸಲು ಸರ್ಕಾರಗಳು ಅನೇಕ ಕಾಯ್ದೆ, ಕಾನೂನು ಅನುಷ್ಠಾನಗೊಳಿಸಿವೆ. ಅಧಿಕಾರಿಗಳ ಇಚ್ಛಾಶಕ್ತಿಯಿಂದ ಮಾತ್ರ ಪರಿಣಾಮಕಾರಿಯಾಗಿ ಜಾರಿಯಾಗಲು ಸಾಧ್ಯವಿದೆ ಎಂದರು.

ಒಂದು ವೇಳೆ ಮಕ್ಕಳು ಶಾಲೆ ಬಿಟ್ಟು ಕೆಲಸಕ್ಕೆ ಹೋಗುತ್ತಿರುವುದು ಕಂಡುಬಂದರೆ, ಸಂಬಂಧಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಅರಿವು ಮೂಡಿಸಿ, ಮಕ್ಕಳನ್ನು ಮರುಶಾಲೆಗೆ ಕರೆತರುವ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ ಎಫ್. ದೊಡ್ಡಮನಿ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಜನರನ್ನು ಜೀತಕ್ಕೆ ಇಟ್ಟುಕೊಂಡು ಅವರಿಗೆ ಕನಿಷ್ಠ ವೇತನ, ಊಟ, ವಸತಿ, ವೈದ್ಯಕೀಯ ಸೌಲಭ್ಯ ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಿ, ಹೊರಗಿನ ಜಗತ್ತನ್ನು ಕಾಣದಂತೆ ಅವರನ್ನು ಕೂಡಿ ಹಾಕುವಂತಹ ಹಲವಾರು ಅಮಾನವೀಯ ಘಟನೆಗಳು ಈಗಲೂ ನಡೆಯುತ್ತಿವೆ. ಜಿಲ್ಲೆಯ ಕೈಗಾರಿಕಾ ಪ್ರದೇಶಗಳಿಗೆ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಕಾರ್ಮಿಕರಿಗೆ ನ್ಯಾಯಯುತ ದೊರಕಬೇಕಾದ ಸೌಲಭ್ಯ, ಯೋಜನೆಗಳು ಅವರಿಗೆ ಸರಿಯಾಗಿ ತಲುಪುತ್ತಿವೆಯೇ ಎಂಬುದರ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಿದರು. ರಾಜ್ಯ ಉನ್ನತ ಅಧಿಕಾರಿ ಸಮಿತಿ ಸದಸ್ಯ ವಿಲಿಯಂ ಕ್ರಿಸ್ಟೋಫರ್ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ವಿ. ಏಣಗಿ ಮಾತನಾಡಿದರು. ಜಿಪಂ ಸಿಇಒ ಭುವನೇಶ ಪಾಟೀಲ, ಉಪ ಪೊಲೀಸ್ ಆಯುಕ್ತ ರವೀಶ ಸಿ.ಆರ್., ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ, ಸಹಾಯಕ ಕಾರ್ಮಿಕ ಆಯುಕ್ತ ಸಚಿನ ಹಳೇಮನಿ ಇದ್ದರು. ಮಾರಿಕಾಂಬಾ ಕುಲಕೋಟಿ ಸ್ವಾಗತಿಸಿದರು. ಅಶೋಕ ಒಡೆಯರ ನಿರೂಪಿಸಿದರು. ಬಸವರಾಜ ಪಂಚಾಕ್ಷರಿಮಠ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಕ್ಕೆ ಗೂಡ್ಸ್ ವಾಹನ ಡಿಕ್ಕಿ: ಇಬ್ಬರು ಸಾವು
ದುಬೈನಲ್ಲಿ ಸಿಲುಕಿದ್ದ ಬಳ್ಳಾರಿಗರು ಸುರಕ್ಷಿತವಾಗಿ ವಾಪಸ್