ಗಾಯತ್ರಿ ಶಾಂತೇಗೌಡ ಬೇಸರ । ನಗರ ಸಭೆ 80ನೇ ಸ್ವಾತಂತ್ರ್ಯ ದಿನಾಚರಣೆ
ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷ ಕಳೆದರೂ ಒಂಟಿ ಹೆಣ್ಣು ನಡುರಾತ್ರಿ ಸುರಕ್ಷಿತವಾಗಿ ಓಡಾಡುವ ಪರಿಸ್ಥಿತಿ ಇಲ್ಲದಿರುವುದು ಅತ್ಯಂತ ಬೇಸರದ ಸಂಗತಿ ಎಂದು ವಿಧಾನ ಪರಿಷತ್ತು ಸದಸ್ಯೆ ಗಾಯತ್ರಿ ಶಾಂತೇಗೌಡ ಹೇಳಿದರು.
ಚಿಕ್ಕಮಗಳೂರು ನಗರ ಸಭೆಯಿಂದ ಶನಿವಾರ ಆಯೋಜಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್,ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಮಹಾತ್ಮ ಗಾಂಧಿಜೀ ಅವರು ಮಹಿಳೆಯೊಬ್ಬಳು ನಡು ರಾತ್ರಿ ಒಂಟಿಯಾಗಿ ಯಾವಾಗ ಓಡಾಟ ಮಾಡುತ್ತಾಳೋ ಆಗ ನಮಗೆ ಸ್ವಾತಂತ್ರ್ಯ ದೊರೆಯಲಿದೆ ಎಂದು ಹೇಳಿದ್ದರು. ಆದರೆ, ಇಂದಿಗೂ ಆ ವ್ಯವಸ್ಥೆ ಸಮಾಜದಲ್ಲಿ ನಿರ್ಮಾಣವಾಗಿಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕಿದೆ ಎಂದರು.ಮಹಾತ್ಮ ಗಾಂಧಿ ಜೀ ಉಪ್ಪಿನ ಸತ್ಯಾಗ್ರಹ ಸೇರಿದಂತೆ ಅನೇಕ ಹೋರಾಟಗಳ ಮೂಲಕ ಸ್ವಾತಂತ್ರ್ಯ ತಂದುಕೊಟ್ಟರು. ಅವರೊಂದಿಗೆ ಹಲವು ಎಲ್ಲ ಮಹನೀಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಅವರನ್ನು ಸ್ಮರಿಸ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ನಗರ ಸಭೆ ಆಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ ಇಂದು ನಾವೆಲ್ಲರೂ ಸ್ವಾತಂತ್ರ್ಯವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ಬಲಿದಾನ ಮಾಡಿದ ಮಹನೀಯರು ಕಾರಣ. ಹಾಗಾಗಿ, ಅವರನ್ನು ಪ್ರತಿ ದಿನ ಸ್ಮರಿಸುವ ಕೆಲಸ ನಾವೆಲ್ಲರೂ ಮಾಡಬೇಕಿದೆ ಎಂದು ಹೇಳಿದರು.
ಕಳೆದ 3 ವರ್ಷದಿಂದ ಸರಿಯಾಗಿ ಆಸ್ತಿ ತೆರಿಗೆ ವಸೂಲಿ ಮಾಡಿಲ್ಲ. ಹಾಗಾಗಿ ನಗರ ಸಭೆಗೆ ಬರೋಬ್ಬರಿ ₹18 ಕೋಟಿ ಆಸ್ತಿ ತೆರಿಗೆ ಬಾಕಿ ಇದೆ. ಕಂದಾಯ ವಸೂಲಿಗೆ ನಗರ ಸಭೆ ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳು ಕಂಕಣ ಬದ್ಧರಾಗಬೇಕಿದೆ ಎಂದರು.
---ಬಾಕ್ಸ್---
ನಗರ ಸಭೆಯಿಂದ ಕೇಂದ್ರದ ಹೌಸಿಂಗ್ ಫಾರ್ ಆಲ್ ಯೋಜನೆ ಕುರಿತು ವಿದ್ಯಾರ್ಥಿಗಳಿಗೆಆಯೋಜಿಸಿದ್ದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸ್ವಾತಂತ್ರ್ಯ ದಿನ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು
ಪ್ರಬಂಧ ಸ್ಪರ್ಧೆಯಲ್ಲಿ ಕ್ರಮವಾಗಿ ಮಹಾಲಕ್ಷ್ಮಿ,ಚಿರಾಗ್ ಹಾಗೂ ಜಿ.ಕೀರ್ತಿ, ಶಾಲಾ ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಎಂ.ಇ.ಎಸ್. ಪ್ರೌಢಶಾಲೆ ವಿದ್ಯಾರ್ಥಿಗಳು ಕ್ರಮವಾಗಿ ಎನ್.ವರಣ್ಯ, ಸಿ.ಎಲ್.ಲಾವಣ್ಯ, ಕೆ.ಎನ್.ಪ್ರಣವ್ರಾಜ್ ಬಹುಮಾನ ಪಡೆದರು. ಇನ್ನೂ ಪ್ರಬಂಧ ಸ್ಪರ್ಧೆಯಲ್ಲಿ ಜೆ.ಎಸ್.ಪೂರ್ವಿ, ಎಚ್.ಪಿ.ಸಾನ್ವಿ, ಸಿ.ಎಚ್. ವರ್ಷಾ ಬಹುಮಾನ ಪಡೆದರು.