ಶಿಗ್ಗಾಂವಿ: ಅಂಗವಿಕಲ ಪ್ರತಿ ಮಕ್ಕಳಲ್ಲಿ ವಿಶೇಷ ಜ್ಞಾನಶಕ್ತಿ ಅಡಗಿದೆ. ಅದನ್ನು ಗುರುತಿಸಿ ಅರ್ಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸುವುದು ಮುಖ್ಯ. ಯಾವ ಮಗುವೂ ವಂಚಿತರಾಗಬಾರದು. ಅದನ್ನು ಆಯಾ ಶಿಕ್ಷಕರು, ಪಾಲಕರು ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಾಲ್ ಹೇಳಿದರು. ಪಟ್ಟಣದ ಸಂಗನಬಸವ ಮಂಗಲಭವನದಲ್ಲಿ ನಡೆದ ಜಿಲ್ಲಾ ಮಟ್ಟದ ವಿಶ್ವ ಅಂಗವಿಕಲರ ದಿನಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಪ್ರತಿ ಇಲಾಖೆವಾರು ಮಂಜೂರಾದ ಅನುದಾನದಲ್ಲಿ ಅಂಗವಿಕಲರಿಗೆ ನೀಡುವ ಶೇ. ೫ರಷ್ಟು ಹಣವನ್ನು ಅವರಿಗಾಗಿ ಖರ್ಚು ಮಾಡಬೇಕು. ಅದರಲ್ಲಿ ಯಾವುದೇ ಹಣ ದುರ್ಬಳಕೆ ಆಗಬಾರದು. ಇಲ್ಲಿನ ಮಕ್ಕಳು ಭವಿಷ್ಯದಲ್ಲಿ ಐಎಎಸ್, ಐಪಿಎಸ್ ಓದುವ ಸಾಮರ್ಥ್ಯ ಹೊಂದಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ನಾನು ಸಹ ಅಂಗವಿಕಲ ಮಕ್ಕಳ ಸಂಜ್ಞಾಭಾಷೆ ಕಲಿತು ಮಾತನಾಡಲು ಯತ್ನಿಸುತ್ತೇನೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಾಗರಾಜ ಮಾತನಾಡಿ, ಅಂಗವಿಕಲ ಮಕ್ಕಳ ಸಾಧನೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಮಹಿಳಾ ವಿಶ್ವಕಪ್ ತರುವುದರ ಮೂಲಕ ದೇಶದ ಜನ ಮೆಚ್ಚುವಂತಾಗಿದೆ. ಪ್ರತಿಭೆ ಪ್ರತಿ ಮಗುವಿನಲ್ಲಿದೆ ಅದನ್ನು ನಿರ್ಲಕ್ಷ್ಯ ತೋರದೆ ಅವಕಾಶ ಕಲ್ಪಿಸುವ ಗುಣ ಅಗತ್ಯವಾಗಿದೆ ಎಂದರು.ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರೀಕರ ಕಲ್ಯಾಣ ಇಲಾಖೆ ಅಧಿಕಾರಿ ಆಶು ನದಾಫ್ ಮಾತನಾಡಿ, ಅಂಗವಿಕಲ ಮಕ್ಕಳು ಸಹ ಸಮಾಜದ ಅಂಗವೆಂದು ಪರಿಗಣಿಸಿರಿ. ಅಂಕವಿಕಲತೆ ದೌರ್ಬಲ್ಯ ಅಲ್ಲ. ಅವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಜತೆಗೆ ಸಾಧನೆಯ ಮಾರ್ಗದಲ್ಲಿ ನಡೆಯಬೇಕು ಎಂದರು.
ಮಾಜಿ ಸಂಸದ ಎಂ.ಸಿ. ಕುನ್ನೂರ, ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಪುಟ್ಟಪ್ಪ ಜಲದಿ ಮಾತನಾಡಿದರು. ಇದೇ ವೇಳೆ ಅಂಗವಿಕಲ ಜಾನಪದ ಕಲಾವಿದರಿಂದ ಗುರುರಾಜ ಚಲವಾದಿ ಸಂಗೀತ ಕಾರ್ಯಕ್ರಮ ಜರುಗಿತು. ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಅಂಗವಿಕಲ ಮಕ್ಕಳಿಗೆ ಪ್ರಶಸ್ತಿ ಪತ್ರ, ಬಹುಮಾನಗಳನ್ನು ವಿತರಿಸಿದರು. ಅಂಗವಿಕಲ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು.ತಾಲೂಕು ಪಂಚಾಯಿತಿ ಇಒ ಮಂಜುನಾಥ ಸಾಳೋಂಕಿ, ಜಿಲ್ಲಾ ಸಕ್ಷಮ ಅಧ್ಯಕ್ಷೆ ಪ್ರಭಾವತಿ ತಿಳುವಳ್ಳಿ, ಅಂಗವಿಕಲ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಹದೇವ ಎಚ್.ಡಿ, ಅಂಗವಿಕಲರ ಜಿಲ್ಲಾ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಪಾಟೀಲ, ಅಂಗವಿಕಲ ಮಕ್ಕಳ ವಸತಿ ಶಾಲೆಗಳ ಸ್ವಯಂ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಆರ್.ಶಿವಕುಮಾರ, ಜಿಲ್ಲಾ ಉಪಾಧ್ಯಕ್ಷ ಮೌನೇಶ ಬಡಿಗೇರ, ಬಾಲಕೃಷ್ಣ, ಧರ್ಮಪ್ಪ ರಾಮಾಪುರ, ರಾಜು ಜವಳಿ, ಪಾಂಡುರಂಗ, ವೀರಯ್ಯ ಹಿರೇಮಠ, ಲಕ್ಷ್ಮೀ ಎಸ್., ಅಂಗವಿಕಲರ ಸಂಘದ ಎಲ್ಲ ಸದಸ್ಯರು, ವಿವಿಧ ತಾಲೂಕಿನ ಅಧ್ಯಕ್ಷರುಗಳು, ಶಿಕ್ಷಕರು, ಪಾಲಕರು ಇದ್ದರು.