ಬ್ಯಾಡಗಿ: ಯುವಕರು ಸೂಕ್ತ ನಿರ್ಣಯ ಕೈಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ತಮ್ಮ ಬದುಕಿನ ಪ್ರತಿ ಕ್ಷಣವೂ ನಿರ್ಣಾಯಕವಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.
ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ ಭಾರತ. ಹೀಗಾಗಿ ಯುವಕರಿಂದ ಸಾರ್ಥಕ ಜೀವನವನ್ನು ದೇಶ ನಿರೀಕ್ಷಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಶಿಕ್ಷಣ, ಉದ್ಯೋಗ ಹಾಗೂ ಬದುಕಿನ ಭದ್ರತೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜವಾಬ್ದಾರಿಯುತ ಸರ್ಕಾರಗಳು ಪ್ರತಿಯೊಂದು ಕ್ಷೇತ್ರಗಳಲ್ಲಿ ಅವಕಾಶ ನೀಡಿದ ಬಳಿಕವಷ್ಟೇ ಅವರಿಂದ ಯಶಸ್ಸನ್ನು ನಿರೀಕ್ಷಿಸಬೇಕಾಗಿದೆ ಎಂದರು.
ಯುವಕರು ಯಾವುದೇ ವಿಷಯಗಳನ್ನು ಲಘುವಾಗಿ ತೆಗೆದುಕೊಳ್ಳಬಾರದು. ಮೂರ್ಖತನದ ವಿಷಯಗಳಿಂದ ದೂರವಿರಬೇಕು. ಸಕಾರಾತ್ಮಕ ಹಾಗೂ ಸೃಜನಾತ್ಮಕ ಯೋಚನೆಗಳು ಅವರದ್ದಾಗಿರಬೇಕು. ನೈತಿಕತೆಯ ಬದುಕಿಗೆ ಸಮಾಜದಲ್ಲಿ ಹೆಚ್ಚು ಗೌರವ ಸಿಗಲಿದೆ. ಸಮಾಜದಲ್ಲಿನ ತಪ್ಪುಗಳನ್ನು ಅಲ್ಲಗಳೆಯುವ ಮನೋಭಾವನೆ ಬೆಳೆಸಿಕೊಳ್ಳಬೇಕು. ತಾವು ನಿರ್ವಹಿಸುವ ಜವಾಬ್ದಾರಿಗಳು ತಮ್ಮ ಭವಿಷ್ಯವನ್ನು ರೂಪಿಸಲಿವೆ ಎಂದರು.ಇತ್ತೀಚೆಗೆ ಯೌವನದ ಬದುಕಿಗೆ ಸರಿಯಾದ ಮಾರ್ಗಗಳು ಇಲ್ಲದಂತಾಗಿದೆ. ಕತ್ತಲೆ ಜಗತ್ತಿನ ಅಪರಾಧ ಕೃತ್ಯಗಳ ಪ್ರಯೋಗ ಶಾಲೆಯ ವಸ್ತುಗಳಾಗುತ್ತಿದ್ದಾರೆ. ಚಿಕ್ಕವಯಸ್ಸಿನಲ್ಲೇ ದುಶ್ಚಟಗಳ ದಾಸರಾಗುವ ಮೂಲಕ ತಮ್ಮ ಬದುಕಿನ ಸುಧಾರಣೆಗೆ ಹೆಣಗಾಡುತ್ತಿದ್ದಾರೆ. ಹೀಗಾಗಿ ಸಮಂಜಸವಾದ ಆಯ್ಕೆ ನಿರ್ಧರಿಸುವುದೂ ಕೂಡ ಅವರಿಂದ ಸಾಧ್ಯವಾಗುತ್ತಿಲ್ಲ. ನೈಜ ವ್ಯಕ್ತಿತ್ವ ಕಳೆದುಕೊಳ್ಳುತ್ತಿರುವ ಅವರು ಜನ್ಮ ನೀಡಿದ ಪಾಲಕರಿಗೂ ಬಿಡಿಸಲಾಗದ ಕಗ್ಗಂಟಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ ತರಬೇತಿ ಪೂರ್ಣಗಳಿಸಿದವರಿಗೆ ಪ್ರಮಾಣಪತ್ರ ವಿತರಿಸಿದರು. ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಡ್ಡೀಪುಡಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ದಾನಪ್ಪ ಚೂರಿ, ರುದ್ರಪ್ಪ ಹೊಂಕಣದ, ಬೀರಪ್ಪ ಬಣಕಾರ ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ, ಶಿವಾನಂದ ಹಡಪದ, ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಚಂದ್ರಶೇಖರ ಸಿದ್ದಪ್ಪನವರ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಎಚ್.ಜಿ. ಸಣ್ಣಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಿ.ಎಸ್. ಚಿಕ್ಕಣ್ಣ ವರದಿ ವಾಚನ ಮಾಡಿದರು. ಡಾ. ಎಫ್.ಎಚ್. ಗಿಡ್ಡಣ್ಣನವರ ಸ್ವಾಗತಿಸಿದರು.