-ರೆಡ್ ಕ್ರಾಸ್ ವತಿಯಿಂದ ‘ವಿಶ್ವ ಜೀನಿವಾ ಒಪ್ಪಂದ’ ದಿನಾಚರಣೆ
ಕನ್ನಡಪ್ರಭ ವಾರ್ತೆ ಬೀದರ್
ಮನುಷ್ಯನ ಮತ ಬೇಧ ಭಾವನೆಗಳಿಂದ ಕೊಲೆ, ಸುಲಿಗೆ, ರಕ್ತಪಾತದಂತಹ ವಿನಾಶ ಕ್ರಾಂತಿಗಳು, ಯುದ್ಧಗಳು ಉಂಟಾಗುತ್ತಿವೆ. ಇದರಿಂದ ಸಮಾಜದಲ್ಲಿ ಅಶಾಂತಿ, ಸಾವು-ನೋವು ಕಾಡುತ್ತಿವೆ, ಆದರಿಂದ ಇದನ್ನು ತಡೆಯಲು ಪ್ರತಿಯೊಬ್ಬರು ವಿಶ್ವಶಾಂತಿಗಾಗಿ ಕೈಜೋಡಿಸಬೇಕೆಂದು ಪಶು ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಡಾ ಎಂ.ಡಿ. ಸುರಣಗಿ ತಿಳಿಸಿದರು.ಅವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬೀದರ್ ವತಿಯಿಂದ ನಗರದ ಪಶು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜೀನಿವಾ ಒಪ್ಪಂದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಡಾ. ವೀರಶೆಟ್ಟಿ ಮೈಲೂರ್ಕರ ಮಾತನಾಡಿ, ಯುದ್ಧಗಳ ಸಂದರ್ಭದಲ್ಲಿ ಗಾಯಳಗಳ ಚಿಕಿತ್ಸೆಗೆ ಅವಕಾಶ ಕಲ್ಪಿಸಲು, ಯುದ್ಧ ನಿರಾಶ್ರಿತರಿಗೆ ರಕ್ಷಣೆ ನೀಡಲು ರೆಡ್ ಕ್ರಾಸ್ ಸಂಸ್ಥೆಯ ಜಿನ್ ಹೆನ್ರಿ ಡ್ಯೂನಂಟ್ ಅವರ ನೇತೃತ್ವದಲ್ಲಿ 1864 ಆಗಸ್ಟ 22 ರಂದು ಮೊದಲ ಜೀನಿವಾ ಒಪ್ಪಂದ 12 ರಾಷ್ಟ್ರಗಳ ಮಧ್ಯೆ ನಡೆಯಿತು. ಮುಂದೆ ಯುದ್ಧ, ಪ್ರಕೃತಿ ವಿಕೋಪ, ಆರೋಗ್ಯ, ಸೇರಿದಂತೆ ಹಲವು ಕ್ಷೇತ್ರಗಳ ಸಹಕಾರಕ್ಕಾಗಿ ವಿಶ್ವದ ಪ್ರ್ರತಿಯೊಂದು ದೇಶಗಳು ಒಟ್ಟು ನಾಲ್ಕು ಜೀನಿವಾ ಒಪ್ಪಂದಗಳಿಗೆ ಸಹಿ ಹಾಕಿವೆ ಎಂದರು.
ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ ಎಮ್.ಕೆ.ತಾಂದಳೆ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ಯಾವುದೆ ಜಾತಿ, ಧರ್ಮ ಎನ್ನದೆ ಪ್ರತಿಯೊಬ್ಬರಿಗೂ ಸೇವೆ ಸಲ್ಲಿಸುತ್ತಿದೆ, ಇದಕ್ಕೆ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದರು.ಮಹಾವಿದ್ಯಾಲಯದ ರೆಡ್ ಕ್ರಾಸ್ ಸಂಯೋಜಕರಾದ ಡಾ. ಚನ್ನಪ್ಪಗೌಡ ಸ್ವಾಗತಿಸಿದರು. ಡಾ. ಪೃಥ್ವಿರಾಜ ನಿರೂಪಿಸಿದರೆ ಡಾ. ಪ್ರವೀಣ ವಂದಿಸಿದರು. ಮಹಾವಿದ್ಯಾಲಯದ ಭೋಧಕ, ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
--ಚಿತ್ರ 13ಬಿಡಿಆರ್57
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬೀದರ್ ವತಿಯಿಂದ ನಗರದ ಪಶು ವಿಶ್ವವಿದ್ಯಾಲಯದಲ್ಲಿ ವಿಶ್ವ ಜೀನಿವಾ ಒಪ್ಪಂದ ದಿನಾಚರಣೆ ಕಾರ್ಯಕ್ರಮ ಜರುಗಿತು.