ಮಾಲೂರು: ತಾಲೂಕಿನ ಚಿಕ್ಕತಿರುಪತಿಯ ಗ್ರಾಪಂ ಸಭಾಂಗಣದಲ್ಲಿ ಗುರುವಾರ ೨೦೨೩- ೨೪ನೇ ಸಾಲಿನ ಜಮಾ ಬಂಧಿ ಸಭೆ ನೋಡಲ್ ಅಧಿಕಾರಿಗಳಾದ ಅಂಬರೀಶ್ ಹಾಗೂ ಬೈರಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸರ್ಕಾರದಿಂದ ಗ್ರಾಮಗಳ ಅಭಿವೃದ್ಧಿಗೆ ಬರುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮಗಳಲ್ಲಿ ಮೂಲಭೂತ ಸವಲತ್ತುಗಳು ಸೇರಿ ರಸ್ತೆ ಅಭಿವೃದ್ಧಿ, ಸ್ವಚ್ಛತೆ, ಬೀದಿ ದೀಪ ನಿರ್ವಹಣೆ ಮಾಡುವುದರ ಜೊತೆಗೆ ಗ್ರಾಪಂಗೆ ಬರುವ ಯೋಜನೆಗಳು ಮತ್ತು ಸವಲತ್ತುಗಳನ್ನು ಪೋಲಾಗದಂತೆ ಸಮರ್ಪಕವಾಗಿ ಬಳಸಬೇಕು, ಅಭಿವೃದ್ಧಿ ಕಾಮಗಾರಿಗಳು ಗುಣಮುಟ್ಟದಿಂದ ಕೂಡಿದೆಯೋ, ಇಲ್ಲವೋ ಎಂಬುದನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ವೀಕ್ಷಿಸಿ ಗುಣಮಟ್ಟದ ಕಾಮಗಾರಿ ಪಡೆಯಬೇಕು ಎಂದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷರಾದ ಟಿಎಂ ರಾಮಪ್ರಸಾದ್ ಜಮಾಬಂಧಿ ಸಭೆಯಲ್ಲಿ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಹಾಗೂ ಪಂಚಾಯಿತಿಯ ವರ್ಗ ೨ ರ ಅನುದಾನವನ್ನು ಬಳಸಿಕೊಂಡು ಗ್ರಾಮಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಾಗೂ ರಸ್ತೆ ಅಭಿವೃದ್ಧಿ, ಚರಂಡಿಗಳ ಸ್ವಚ್ಛತೆ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.ಗ್ರಾಪಂ ಕಾರ್ಯದರ್ಶಿ ಸ್ವರ್ಣಲತರವರು ೨೦೨೩- ೨೪ರ ಖರ್ಚು ವೆಚ್ಚ ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಒದಗಿಸಿದರು.
ಗ್ರಾಪಂ ಉಪಾಧ್ಯಕ್ಷೆ ಪದ್ಮ ವೆಂಕಟೇಶ್, ಪಿಡಿಒ ಹರಿಂದ್ರ ಗೋಪಾಲ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಬೀರೇಶ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಭಗವಾನ್ ಗುರು, ಲೆಕ್ಕಾಧಿಕಾರಿ ನಾಗರಾಜ್, ಗ್ರಾಪಂ ಸದಸ್ಯರಾದ ರಾಜಶೇಖರ್, ರಾಘವೇಂದ್ರ ಪ್ರಸಾದ್, ಸತೀಶ್ ರೆಡ್ಡಿ, ವೆಂಕಟಪ್ಪ, ಕುಮಾರ್, ಗಾಯಿತ್ರಿ, ಗಿರಿಜಾ ನಾಗೇಶ್ ಹಾಗೂ ಇತರರು, ಗ್ರಾಪಂ ಸಿಬ್ಬಂದಿ ವೆಂಕಟೇಶಪ್ಪ, ಮಾದೇಶ್, ಮುರುಗೇಶ, ಗ್ರಂಥಾಲಯ ಮೇಲ್ವಿಚಾರಕರಾದ ನಾರಾಯಣಪ್ಪ ಸೇರಿ ಮತ್ತಿತರರು ಉಪಸ್ಥಿತರಿದ್ದರು.