ಎಲ್ಲರೂ ಆಸ್ತಿಯ ಅಧಿಕೃತ ದಾಖಲೆ ಪಡೆದುಕೊಳ್ಳಿ: ಶಾಸಕ ಹೆಬ್ಬಾರ

KannadaprabhaNewsNetwork | Published : Mar 16, 2025 1:48 AM

ಪ್ರತಿಯೊಬ್ಬರು ತಮ್ಮ ಆಸ್ತಿಯ ಅಧಿಕೃತ ದಾಖಲೆ ಪಡೆದುಕೊಂಡು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು

ಮುಂಡಗೋಡ: ಪ್ರತಿಯೊಬ್ಬರು ತಮ್ಮ ಆಸ್ತಿಯ ಅಧಿಕೃತ ದಾಖಲೆ ಪಡೆದುಕೊಂಡು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಸೋಮವಾರ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಅರ್ಹ ಫಲಾನುಭವಿಗಳಿಗೆ ಬಿ ಹಾಗೂ ಇ-ಖಾತಾ ಪಟ್ಟಾ ವಿತರಿಸಿ ಬಳಿಕ ಜನೌಷಧಿ ಕೇಂದ್ರ ಉದ್ಘಾಟನೆ ಮಾಡಿ, ಆರೋಗ್ಯ ಇಲಾಖೆಯ ಆಶಾಕಿರಣ ಕಾರ್ಯಕ್ರಮದಡಿ ಫಲಾನುಭವಿಗಳಿಗೆ ಕನ್ನಡಕ ವಿತರಿಸಿ ಮಾತನಾಡಿದರು.

ತಮ್ಮದೇ ಸ್ವಂತ ಆಸ್ತಿ ಇದ್ದರೂ ಅಧಿಕೃತ ದಾಖಲೆ ಇಲ್ಲದ ಕಾರಣ ಸಾಲ ಸವಲತ್ತು ಪಡೆಯಲಾಗದೇ ಸಾಕಷ್ಟು ತೊಂದರೆ ಅನುಭವಿಸಿದ ಜನರ ಸಮಸ್ಯೆಗೆ ಪರಿಹಾರ ಒದಗಿಸುವ ದೃಷ್ಟಿಯಿಂದ ಸರ್ಕಾರ ಇ- ಖಾತಾ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.

ಬಹಳ ಕಾಲದಿಂದ ಕಾಯುತ್ತಿದ್ದ ಫಲಾನುಭವಿಗಳಿಗೆ ಒಳ್ಳೆಯ ಕಾಲ ಬಂದಿದೆ. ಇನ್ನು ಮುಂದೆ ತಮ್ಮ ಆಸ್ತಿ ದಾಖಲೆ ಸರಿ ಇಲ್ಲ ಎಂದು ಯಾರು ಕೂಡ ಕೊರಗುವ ಅವಶ್ಯಕತೆ ಇಲ್ಲ. ಮನೆ ಕಟ್ಟಬಹುದು, ಸಾಲ ಪಡೆಯಬಹುದು. ಮಾರಾಟ ಮಾಡಬಹುದು. ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು.

ಕಣ್ಣಿನ ತೊಂದರೆ ಇರುವವರಿಗೆ ಉಚಿತವಾಗಿ ಕನ್ನಡಕ ನೀಡುವ ಸರ್ಕಾರದ ಯೋಜನೆ ಶ್ಲಾಘನೀಯವಾಗಿದೆ. ಅಗ್ಗದ ದರದಲ್ಲಿ ಔಷದ ಪೂರೈಸುವ ಜನೌಷಧ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಜಯಸುಧಾ ಬೋವಿ, ಉಪಾಧ್ಯಕ್ಷೆ ರಹೀಮಾಬಾನು ಕುಂಕೂರ, ತಾಪಂ ಇಒ ಟಿ.ವೈ. ದಾಸನಕೊಪ್ಪ, ತಾಲೂಕು ಆರೊಗ್ಯಾಧಿಕಾರಿ ನರೇಂದ್ರ ಪವಾರ, ಆಡಳಿತ ವೈದ್ಯಾಧಿಕಾರಿ ಸ್ವರ್ಣರೂಪಾ ಪಾಟೀಲ, ಪಪಂ ಮುಖ್ಯಾಧಿಕಾರಿ ಚಂದ್ರಶೇಖರ, ಪಪಂ ಸದಸ್ಯ ಗೌಸ ಮಖಾಂದಾರ, ಬೀಬಿಜಾನ ಮುಲ್ಲಾನವರ, ನಿರ್ಮಲಾ ಬೆಂಡ್ಲಗಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಮುಂಡಗೋಡ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅರ್ಹ ಫಲಾನುಭವಿಗಳಿಗೆ ಬಿ, ಇ-ಖಾತಾ ಪಟ್ಟಾ ವಿತರಿಸಿದರು.