ಧಾರ್ಮಿಕ ಪೂಜಾ ಕಾರ್ಯಕ್ರಮ
ಸಾಮಾನ್ಯ ವ್ಯಕ್ತಿಯಿಂದ ಸಾಧಿಸಲಾಗದ ಕಾರ್ಯವನ್ನು ಅಸಾಮಾನ್ಯ ವ್ಯಕ್ತಿಗಳ ಶಕ್ತಿಯಿಂದ ಸಾಧಿಸಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಶ್ರೀವಿಷ್ಣು ಪಂಚಾಯತನದ ವೈಶಿಷ್ಟ್ಯಪೂರ್ಣ ದೇವಾಲಯಗಳ ಸ್ಥಾಪನೆ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ ತಿಳಿಸಿದರು.
ನಗರದ ಶ್ರೀವಿದ್ಯಾನಗರದಲ್ಲಿನ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಪರಂಪರಾ ಅವಧೂತ ಶ್ರೀಸತೀಶ್ ಶರ್ಮ ಗುರೂಜಿ ನೇತೃತ್ವದಲ್ಲಿ ಶ್ರೀವಿಷ್ಣು ಪಂಚಾಯತನ ವೈಶಿಷ್ಠತೆಯಲ್ಲಿ ಶ್ರೀಲಕ್ಷ್ಮೀನರಸಿಂಹ ಸ್ವಾಮಿ ಸಪರಿವಾರ ದೇವತೆಗಳ ಪ್ರತಿಷ್ಠಾಪನಾ ಹಾಗೂ ಬ್ರಹ್ಮಕಲಶೋತ್ಸವ ಧಾರ್ಮಿಕ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.‘ಧಾರ್ಮಿಕ ಶ್ರದ್ದಾಕೇಂದ್ರಗಳು ಮನುಷ್ಯನ ಮನಸ್ಸಿನಲ್ಲಿನ ಅಂಧಕಾರವನ್ನು ದೂರ ಮಾಡುವ ಸುಜ್ಞಾನದ ಬೆಳೆಕಿನ ಸನ್ಮಾರ್ಗದಲ್ಲಿ ಸುಖ, ಶಾಂತಿ, ನೆಮ್ಮದಿಯ ಬದುಕನ್ನು ಸಾಗಿಸಲು ಪ್ರೇರಣೆ ನೀಡುವ ಶಕ್ತಿ ಕೇಂದ್ರಗಳಾಗಿರುವ ಕಾರಣ ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮಾರ್ಗವನ್ನು ಕಂಡು ಕೊಳ್ಳಲು ಭಕ್ತಾದಿಗಳು ಆಗಮಿಸುತ್ತಾರೆ, ಅಂತಹ ದೈವತ್ವದ ಶ್ರದ್ದಾಕೇಂದ್ರವಾದ ಅತ್ಯಂತ ವೈಶಿಷ್ಟ್ಯತೆಯಿಂದ ಕೂಡಿರುವ ಶ್ರೀವಿಷ್ಣು ಪಂಚಾಯತನದ ಸಪರಿವಾರ ದೇವತೆಗಳ ದರ್ಶನ ಭಾಗ್ಯವನ್ನು ಭಕ್ತಾದಿಗಳಿಗೆ ಕಲ್ಪಿಸುವ ಮಹಾ ಸಂಕಲ್ಪದಲ್ಲಿ ಪರಂಪರಾ ಅವಧೂತರಾದ ಶ್ರೀಸತೀಶ್ ಶರ್ಮ ಗುರೂಜಿ ಸಾಮಾನ್ಯ ವ್ಯಕ್ತಿಯಂತೆ ಕಂಡಿದ್ದರೂ ಅಸಾಮಾನ್ಯ ಶಕ್ತಿಯಂತೆ ಬೃಹತ್ ಸುಂದರ ಕಲ್ಲಿನ ದೇವಾಲಯಗಳ ನಿರ್ಮಾಣವನ್ನು ಮಾಡುವ ಮೂಲಕ ಸಾವಿರಾರು ಭಕ್ತರಿಗೆ ಕೊಡುಗೆಯಾಗಿ ಲೋಕಾರ್ಪಣೆ ಮಾಡುತ್ತಿರುವುದು ಅತ್ಯಂತ ಹೆಮ್ಮಯ ಸಂಗತಿ’ ಎಂದರು.
ಅರಸೀಕೆರೆ ನೂತನ ದೇವಾಲಯಗಳನ್ನು ಸಂದರ್ಶಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್, ಭೋಜೇಗೌಡ ಪರಂಪರಾ ಅವಧೂತ ಶ್ರೀಸತೀಶ್ ಶರ್ಮ ಗುರೂಜಿಗಳಿಂದ ಆಶೀರ್ವಾದ ಪಡೆದರು.