ಇವಿಎಂ-ವಿವಿ ಪ್ಯಾಟ್‌ ಎಚ್ಚರಿಕೆಯಿಂದ ನಿರ್ವಹಿಸಬೇಕು: ಡಿಸಿ ಡಾ. ಆರ್‌. ಸೆಲ್ವಮಣಿ

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ಇವಿಎಂ ಮತ್ತು ವಿವಿಪ್ಯಾಟ್ ಕುರಿತು ಸಮಗ್ರವಾಗಿ ತಿಳಿದುಕೊಂಡು ಅತಿ ಜಾಗೃತೆಯಿಂದ, ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕೆಂದು ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಮಂಗಳವಾರದ ಸಭೆಯಲ್ಲಿ ತಾಕೀತು ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಇವಿಎಂ ಮತ್ತು ವಿವಿಪ್ಯಾಟ್ ಕುರಿತು ಸಮಗ್ರವಾಗಿ ತಿಳಿದುಕೊಂಡು ಅತಿ ಜಾಗೃತೆಯಿಂದ, ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕೆಂದು ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಸೂಚನೆ ನೀಡಿದರು.

ಫ್ರೀಡಂ ಪಾರ್ಕ್ ಬಳಿಯ ಗಾಂಧಿ ಭವನದಲ್ಲಿ ಮಂಗಳವಾರ ಅಧಿಕಾರಿಗಳಿಗೆ ಮೊಬೈಲ್ ಡೆಮಾನ್ ಸ್ಟ್ರೇಷನ್ ವೆಹಿಕಲ್ (ಎಂಡಿವಿ) ಮೂಲಕ ಆಯೋಜಿಸಲಾಗಿದ್ದ ಇವಿಎಂ ಮತ್ತು ವಿವಿ-ಪ್ಯಾಟ್ ಪ್ರಾತ್ಯಕ್ಷಿಕೆ ಹಾಗೂ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಪ್ರಾತ್ಯಕ್ಷಿಕೆ ಮತ್ತು ಅರಿವು ಕಾರ್ಯಕ್ರಮದಲ್ಲಿ ಮಾಸ್ಟರ್ ತರಬೇತುದಾರರು ಸಮಗ್ರವಾಗಿ ಇವಿಎಂ ಮತ್ತು ವಿವಿಪ್ಯಾಟ್ ಕಾರ್ಯಚಟುವಟಿಕೆ ಹಾಗೂ ಬಳಕೆ ವಿಧಾನವನ್ನು ತಿಳಿಸಿಕೊಡುವರು. ಅದನ್ನು ಸಮರ್ಪಕವಾಗಿ ತಿಳಿದುಕೊಂಡು ಇಂದು ಪಾಲ್ಗೊಂಡಿರುವ 7 ತಂಡಗಳು ತಾವು ಸಹ ಪ್ರಾತ್ಯಕ್ಷಿಕೆ ನೀಡಬೇಕು ಎಂದರು.

ಇವಿಎಂ ಮೆಷಿನ್‌ಗಳು ಅತ್ಯಂತ ಸೂಕ್ಷ್ಮವಾಗಿದ್ದು, ಅವುಗಳನ್ನು ಅತಿ ಎಚ್ಚರಿಕೆಯಿಂದ ನಿರ್ವಹಿಸಬೇಕು. ಚುನಾವಣಾ ಆಯೋಗ ಈ ವಿಷಯವಾಗಿ ಅತ್ಯಂತ ನಿರ್ದಿಷ್ಟವಾಗಿದೆ. ಯಾವುದೇ ತಪ್ಪುಗಳು ಜರುಗದಂತೆ ಜಾಗೃತೆ ವಹಿಸಬೇಕು. ಇವಿಎಂಗಳ ಸಾಗಾಣಿಕೆ, ಶೇಖರಣೆ ಮತ್ತು ಬಳಕೆ ಎಲ್ಲವೂ ಅತ್ಯಂತ ಜವಾಬ್ದಾರಿಯಿಂದ ಕೂಡಿದ್ದು, ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳೇ ಜವಾಬ್ದಾರಿ ಆಗುತ್ತಾರೆ. ಇವಿಎಂ ಮತ್ತು ವಿವಿ-ಪ್ಯಾಟ್‌ನಲ್ಲಿ ತಾಂತ್ರಿಕ ತೊಂದರೆಗಳು, ಇತರೆ ಸ್ಪಷ್ಟನೆಗಳು ಇದ್ದಲ್ಲಿ ಮಾಸ್ಟರ್ ಟ್ರೈನರ್ ಮತ್ತು ತಂತ್ರಜ್ಞರೊಂದಿಗೆ ಚರ್ಚಿಸಿ ಸರಿಪಡಿಸಿಕೊಳ್ಳುವಂತೆ ತಿಳಿಸಿದರು.

ಮಾಸ್ಟರ್ ಟ್ರೈನರ್ ರವಿಕುಮಾರ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಜಿಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಎಲ್ಲ ತಾಲೂಕುಗಳ ತಹಸೀಲ್ದಾರರು, ಮಾಸ್ಟರ್ ತರಬೇತುದಾರರು, ಅಧಿಕಾರಿ/ಸಿಬ್ಬಂದಿ ಪಾಲ್ಗೊಂಡಿದ್ದರು.

- - - -ಫೋಟೋ:

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಮಾತನಾಡಿದರು.

Share this article