ಬಗೆ ಬಗೆಯ ಹಣ್ಣುಗಳ ಪ್ರದರ್ಶನ : ಚೆಟ್ಟಳ್ಳಿಯಲ್ಲಿ ನಡೆದ ವೈವಿಧ್ಯ ಕಾರ್ಯಕ್ರಮ

KannadaprabhaNewsNetwork |  
Published : Oct 20, 2024, 01:54 AM IST
ಚಿತ್ರ :  19ಎಂಡಿಕೆ6 : ಚೆಟ್ಟಳ್ಳಿಯ ತೋಟಗಾರಿಕಾ ಪ್ರಯೋಗಿಕ ಕೇಂದ್ರದಲ್ಲಿ ನಡೆದ ಹಣ್ಣುಗಳ ಪ್ರದರ್ಶನ.   | Kannada Prabha

ಸಾರಾಂಶ

ವಿದೇಶಿ ತಳಿಯ ಹಣ್ಣುಗಳು ನೋಡುಗರ ಬಾಯಲ್ಲಿ ನೀರೂರುವಂತೆ ಮಾಡಿತು. ರೈತರು ಕುತೂಹಲದಿಂದ ಪಡೆದುಕೊಡ ದೃಶ್ಯ ಕಂಡು ಬಂತು.

ವಿಘ್ನೇಶ್‌ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ

ಎಲ್ಲಿ ನೋಡಿದರೂ ವಿದೇಶಿ ತಳಿಯ ಹಣ್ಣುಗಳು, ನೋಡುಗರ ಬಾಯಲ್ಲಿ ನೀರೂರುವಂತೆ ಮಾಡಿತು. ಈ ಹಣ್ಣನ್ನು ಹೇಗೆ ಬೆಳೆಯುವುದು? ಗಿಡ ಎಲ್ಲಿ ಸಿಗುತ್ತದೆ ಎಂಬ ಮಾಹಿತಿಯನ್ನು ರೈತರು ಕುತೂಹಲದಿಂದ ಪಡೆದುಕೊಂಡ ದೃಶ್ಯ ಕಂಡುಬಂತು.

ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರಲ್ಲಿ ಶನಿವಾರ ನಡೆದ ‘ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ಜಾಗೃತಿ ಕಾರ್ಯಕ್ರಮ, ಹಣ್ಣುಗಳ ವೈವಿದ್ಯತಾ ಮೇಳ ಹಾಗೂ ಮ್ಯಾಂಗೋಸ್ಟೀನ್ ಮತ್ತು ರಾಂಬುಟಾನ್ ಹಣ್ಣಿನ ಕ್ಷೇತ್ರೋತ್ಸವ ಕಾರ್ಯಕ್ರಮ ಆಕರ್ಷಕವಾಗಿ ಮೂಡಿಬಂತು.

ಕೇಂದ್ರದಿಂದ ಆಯೋಜಿಸಲಾಗಿದ್ದ ಹಣ್ಣುಗಳ ವೈವಿಧ್ಯತಾ ಮೇಳಕ್ಕೆ ಉತ್ತಮ ಸ್ಪಂದನೆ ದೊರಕಿತು. ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ರೈತರು ಕೂಡ ಆಗಮಿಸಿ ಮಾಹಿತಿ ಪಡೆದುಕೊಂಡರು.

ಚೆಯ್ಯಂಡಾಣೆಯ ಕೃಷಿಕ ಸುದೀರ್ ಮಕ್ಕಿಮನೆ ಅವರು ತಮ್ಮ ತೋಟದಲ್ಲಿ ಬೆಳೆಯಲಾಗಿದ್ದ ರಾಂಬುಟಾನ್, ಮ್ಯಾಂಗೋಸ್ಟಿನ್, ಜಬೋಟಿಕ, ಅಂಜೂರ, ಹಾಸ್ ಬೆಣ್ಣೆಹಣ್ಣು, ಎಗ್ ಫ್ರೂಟ್, ಲಕ್ಷ್ಮಣ ಫಲ, ವಿಶೇಷ ತಳಿಯ ಬಾಳೆ ಹಣ್ಣು ಸೇರಿ ವಿವಿಧ ತಳಿಯ ಹಣ್ಣುಗಳನ್ನು ಪ್ರದರ್ಶನಕ್ಕಿಟ್ಟು ಆಗಮಿಸಿದ್ದ ರೈತರಿಂದ ಮೆಚ್ಚುಗೆಗೆ ಪಾತ್ರರಾದರು.

ಪ್ರಗತಿಪರ ಕೃಷಿಕ ರವಿಶಂಕತ್ ಬಾರಿತ್ತಾಯ ಅವರು ಕೂಡ ವಿದೇಶಿ ಹಣ್ಣುಗಳನ್ನು ಬೆಳೆದಿದ್ದು, ಪ್ರದರ್ಶನದಲ್ಲಿ ಗಮನ ಸೆಳೆಯಿತು. ಅಪಾರ ತಳಿಯ ಹಣ್ಣುಗಳನ್ನು ಬೆಳೆದಿರುವುದಕ್ಕೆ ರೈತರಿಂದ ಶ್ಲಾಘನೆ ವ್ಯಕ್ತಗೊಂಡಿತು. ಸೋಮವಾರಪೇಟೆ ತಾಲೂಕಿನ ಕರ್ಕಳ್ಳಿ ಗ್ರಾಮದ ನಿರ್ಮಲ ಜಯಪ್ರಕಾಶ್ ಅವರು ಅಮೃತ ನೋಣಿ ಹಣ್ಣು, ಗಜಲಿಂಬೆ, ಚಕ್ಕೋತ, ಟ್ರೀ ಟೊಮೊಟೋ ಹಣ್ಣು, ಜಾಯಿಕಾಯಿ, ಕೊಕ್ಕೊ ಹಣ್ಣು, ಚೆರಿ, ಅಂಜೂರ, ಜಾಮೂನು ಸೀಬೆ, ಜೀ ಗುಜ್ಜೆ, ಹಿರಳೆ ಕಾಯಿ ಪ್ರದರ್ಶನದಲ್ಲಿ ಇಟ್ಟಿದ್ದರು.

ಚೆಟ್ಟಳ್ಳಿಯ ಕರುಣ್ ಕಾಳಯ್ಯ ಅವರು ದ್ರಾಕ್ಷಿ, ಸೀಬೆ, ಬಾಳೆಹಣ್ಣು ಹಾಗೂ ಪಪಾಯ ಹಣ್ಣನ್ನು ಇಟ್ಟಿದ್ದರು. ಚೆಟ್ಟಳ್ಳಿ ಕೇಂದ್ರದಿಂದ ಬೆಣ್ಣೆ ಹಣ್ಣು ಪ್ರದರ್ಶನ ಕೂಡ ಮಾಡಲಾಗಿದ್ದು, ವಿದೇಶಿ ತಳಿಗಳಾದ ಜೆಮ್ ಹಾಸ್, ಲಾಂಬ್ ಹಾಸ್, ಪಿಂಕರ್ಟೋನ್, ಮೆಕ್ಸಿಕನ್ ಹಾಸ್, ಚೆಟ್ಟಳ್ಳಿ ಕೇಂದ್ರದಿಂದ ಬಿಡುಗಡೆ ಮಾಡಲಾಗಿರುವ ಅರ್ಕಾ ಸುಪ್ರೀಂ, ಅರ್ಕಾ ಕೂರ್ಗ್ ರವಿ ಸೇರಿದಂತೆ ವಿವಿಧ ತಳಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಹಳದಿ ಬಣ್ಣದ ಬೆಣ್ಣೆ ಹಣ್ಣು ವಿಶೇಷ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಅರ್ಕಾ ಕೂರ್ಗ್ ಅರುಣ್ ತಳೀಯ ರ‍್ಯಾಂಬುಟನ್ ಗಿಡಗಳ ಉತ್ಪಾದನೆ ಮತ್ತು ಮಾರಾಟ ಸಂಬಂಧ ಖಾಸಗಿ ಸಂಸ್ಥೆಯೊಂದರ ಜತೆ ಒಪ್ಪಂದ ಮಾಡಿಕೊಳ್ಳಲಾಯಿತು.

ಉತ್ತಮ ಪ್ರದರ್ಶನಕ್ಕೆ ಪ್ರಶಸ್ತಿ: ಅತ್ಯುತ್ತಮವಾಗಿ ಹಣ್ಣುಗಳ ಪ್ರದರ್ಶನ ಮಾಡಿದ ರವಿಂಶಕರ್ ಹಾಗೂ ಸುದೀರ್ ಅವರಿಗೆ ಪ್ರಥಮ ಬಹುಮಾನವಾಗಿ ತಲಾ ರು.5 ಸಾವಿರ ನಗದು, ಎಂ.ಎಂ. ಸೋಮಯ್ಯ ಹಾಗೂ ನಿರ್ಮಲ ಜಯಪ್ರಕಾಶ್ ಅವರಿಗೆ ದ್ವಿತೀಯ ರು.3 ಸಾವಿರ ನಗದು ಹಾಗೂ ಕರುಣ್ ಕಾಳಯ್ಯ, ಮಂದಪ್ಪ ಅವರಿಗೆ ತೃತೀಯ ಬಹುಮಾನವಾಗಿ ರು.2 ಸಾವಿರ ನಗದು ನೀಡಲಾಯಿತು.

ರೈತರು ಮತ್ತು ವಿಜ್ಞಾನಿಗಳ ಮಧ್ಯೆ ಸಂವಾದ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರೈತರಿಗಾಗಿ ರಾಂಬುಟಾನ್ ಮತ್ತು ಮ್ಯಾಂಗೋಸ್ಟೀನ್ ಹಣ್ಣುಗಳ ಕ್ಷೇತ್ರ ಭೇಟಿಯನ್ನೂ ಆಯೋಜಿಸಲಾಗಿತ್ತು. ರೈತರು ನೇರವಾಗಿ ಕ್ಷೇತ್ರಕ್ಕೆ ತೆರಳಿ ಹಣ್ಣುಗಳನ್ನು ಬೆಳೆಯುವ ಬಗ್ಗೆ ಮಾಹಿತಿ ಪಡೆದುಕೊಂಡರು.

ಗಿಡಗಳಿಗೆ ಭಾರಿ ಡಿಮ್ಯಾಂಡ್!: ಹಣ್ಣುಗಳ ಪ್ರದರ್ಶನ ಅಂಗವಾಗಿ ಕೇರಳದ ಖಾಸಗಿ ನರ್ಸರಿಯೊಂದರಿಂದ ಕೇಂದ್ರದ ಆವರಣದಲ್ಲಿ ವಿವಿಧ ವಿದೇಶಿ ಹಣ್ಣು ಗಿಡಗಳ ಮಾರಾಟವನ್ನು ಮಾಡಲಾಯಿತು. ಪ್ರದರ್ಶನ ಆರಂಭವಾದ ಕೆಲವೇ ಗಂಟೆಗಳಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ರೈತರು ನಾ ಮುಂದು ತಾ ಮುಂದು ಎಂದು ಮುಗಿಬಿದ್ದು ಖರೀದಿಸಿದರು. ರಾಂಬುಟಾನ್, ಮ್ಯಾಂಗೋಸ್ಟಿನ್, ಹಲಸು, ಮಾವು ಗಿಡಗಳಿಗೆ ಹೆಚ್ಚು ಬೇಡಿಕೆ ಕಂಡುಬಂತು. ಕೆಲವು ತಳಿಯ ಗಿಡಗಳು ಸ್ಥಳದಲ್ಲೇ ಖಾಲಿಯಾಯಿತು.

ಹಣ್ಣುಗಳ ವೈವಿಧ್ಯತಾ ಮೇಳಕ್ಕೆ ರೈತರಿಂದ ಉತ್ತಮ ಸ್ಪಂದನೆ ದೊರಕಿದೆ. ನೂರು ಮಂದಿ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷಿಸಲಾಗಿತ್ತು. ಆದರೆ ಸುಮಾರು 250ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದುಪಯೋಗಪಡಿಸಿಕೊಂಡಿದ್ದಾರೆ. ಕೇಂದ್ರದಿಂದ ಮತ್ತಷ್ಟು ರೈತರಿಗೆ ಪೂರಕ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಚೆಟ್ಟಳ್ಳಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಹಣ್ಣಿನ ವಿಜ್ಞಾನಿ ಮುರುಳೀಧರ್ ಹೇಳಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌