ಕನ್ನಡಪ್ರಭ ವಾರ್ತೆ ಮಂಡ್ಯ
ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಪೋಷಕರಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಈ ದಂಧೆಗೆ ಕಡಿವಾಣ ಹಾಕುವಂತೆ ರೈತ ಸಂಘದ ಮುಖಂಡ ಕಿರಂಗೂರು ಪಾಪು ಒತ್ತಾಯಿಸಿದ್ದಾರೆ.ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ದುಬಾರಿ ಶುಲ್ಕ ನಿಯಂತ್ರಣ ಮಾಡಲು ರಾಜ್ಯದ ಆ ಜಿಲ್ಲೆಯ ಜಿಲ್ಲಾ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಸರ್ಕಾರದ ಶಿಕ್ಷಣ ಇಲಾಖೆ ಕಾಯ್ದೆಗಳ ಮಾರ್ಗಸೂಚಿ ಸುತ್ತೋಲೆಗಳನ್ನು ಪರಿಪಾಲನೆ ಮಾಡಲು ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರ ಹಾಗೂ ಶಿಕ್ಷಣ ಇಲಾಖೆಗಳ ಅನುಮತಿ ಪಡೆಯದೇ ಜಿಲ್ಲೆಗಳಲ್ಲಿ ಕೆಲ ಖಾಸಗಿ ಶಾಲೆಗಳು ಲಂಗು ಲಗಾಮು ಇಲ್ಲದೆ ಪ್ರೀ ಕೆಜಿ, ಎಲ್ಕೆಜಿ, ಯುಕೆಜಿ ಇನ್ನಿತರ ಶಾಲೆಗಳನ್ನು ತೆರೆದಿರುವುದನ್ನು ಪತ್ತೆ ಹಚ್ಚಲು ಜಿಲ್ಲಾಮಟ್ಟದ ಅಧಿಕಾರಿಗಳು, ಶಿಕ್ಷಣ ಅಧಿಕಾರಿ, ವಿಷಯ ನಿರೀಕ್ಷಕರನ್ನು ಒಳಗೊಂಡಂತೆ ಒಂದು ತಂಡ ರಚನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ಖಾಸಗಿ ಶಾಲಾ-ಕಾಲೇಜುಗಳಲ್ಲಿ ದುಬಾರಿ ಶುಲ್ಕಗಳ ಬರೆ, ಬಟ್ಟೆ, ಬ್ಯಾಗ್, ಪುಸ್ತಕ, ವಾಹನಗಳ ಶುಲ್ಕದ ಬಗ್ಗೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಕಾಯ್ದೆಗಳ ಸುತ್ತೋಲೆ ಪ್ರಕಾರ ಶಾಲೆ ಆಡಳಿತ ಮಂಡಳಿಗಳ ನಡೆಯುತ್ತಿದ್ದೆಯೇ ಅಥವಾ ಇಲಾಖೆಗಳ ಸುತ್ತೋಲೆಗಳನ್ನು ಗಾಳಿಗೆ ತೂರಿ ದುಬಾರಿ ಶುಲ್ಕ ವಿಧಿಸುವ ಮೂಲಕ ಪೋಷಕರ ಜೇಬಿಗೆ ಕತ್ತರಿ ಹಾಕುವ ಮೂಲಕ ಹಗಲು ದರೋಡೆಗೆ ಇಳಿದಿವೆ ಎಂದು ಕಿಡಿಕಾರಿದ್ದಾರೆ.
ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ದಾಖಲಿಸಿದರೆ ಆ ಶುಲ್ಕ, ಈ ಶುಲ್ಕ ಎಂದು ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿವೆ. ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಆಟದ ಮೈದಾನಗಳು ಇಲ್ಲ. ಹಂದಿಗೂಡಿನಂತೆ ಶಾಲಾ ಕೊಠಡಿಗಳಿರುತ್ತವೆ.ಬೀದಿಗೊಂದು-ಗಲ್ಲಿಗೊಂದು ನಾಯಿಕೊಡೆಗಳಂತೆ ಖಾಸಗಿ ಶಾಲೆಗಳ ಆರ್ಭಟ ಜೋರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಶಾಲಾ-ಕಾಲೇಜುಗಳಲ್ಲಿ ತಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಾವಿರಾರು, ಲಕ್ಷಾಂತರ ವಾರ್ಷಿಕವಾಗಿ ಖರ್ಚು ಮಾಡುವ ಪರಿಸ್ಥಿತಿ ಎಲ್ಲೆಡೆ ಎಗ್ಗಿಲ್ಲದೇ ವ್ಯಾಪಕವಾಗಿ ನಡೆಯುತ್ತಿವೆ. ಆಡಳಿತ ಮಂಡಳಿ ವಸೂಲಿ ದಂಧೆಯೊಂದೇ ಕಾಯಕವಾಗಿದೆ. ಆದ್ದರಿಂದ ಸರ್ಕಾರ, ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲಾ-ಕಾಲೇಜುಗಳ ದುಬಾರಿ ಶುಲ್ಕವನ್ನು ಇಳಿಕೆ ಮಾಡುವ ಮೂಲಕ ಶಿಕ್ಷಣವಂಚಿತ ಮಕ್ಕಳು ಹಾಗೂ ಬಡ ಮಕ್ಕಳ ಪೋಷಕರ ಪರ ಕಿರಂಗೂರು ಪಾಪು ಒತ್ತಾಯಿಸಿದ್ದಾರೆ.