ಕನ್ನಡಪ್ರಭ ವಾರ್ತೆ ಮಂಡ್ಯ
ಕಳೆದೊಂದು ತಿಂಗಳಲ್ಲಿ ನಗರಸಭೆಗೆ ವಸತಿ ಮತ್ತು ವಾಣಿಜ್ಯ ತೆರಿಗೆ ೫.೭೦ ಕೋಟಿ ರು. ಸಂಗ್ರಹವಾಗಿದೆ. ರಾಜ್ಯ ಸರ್ಕಾರದ ತೆರಿಗೆ ವಿನಾಯ್ತಿ ಅವಧಿ ವಿಸ್ತರಣೆಯಿಂದ ಮೇ ತಿಂಗಳಿನಲ್ಲೂ ೫ ರಿಂದ ೬ ಕೋಟಿ ರು. ತೆರಿಗೆ ಸಂಗ್ರಹವಾಗಬಹುದೆಂದು ನಿರೀಕ್ಷಿಸಲಾಗಿದೆ.
೨೦೨೫-೨೬ನೇ ಸಾಲಿನಲ್ಲಿ ನಗರಸಭೆ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ ಸಾಧನೆ ಮಾಡಿತ್ತು. ನಗರ ವ್ಯಾಪ್ತಿಯಲ್ಲಿರುವ ಆಸ್ತಿಗಳಿಂದ ತೆರಿಗೆ ಸಂಗ್ರಹದ ಒಟ್ಟು ಬೇಡಿಕೆ ೧೮.೮೫ ಕೋಟಿ ರು. ಇದ್ದರೂ, ೧೯.೨೩ ಕೋಟಿ ರು. ವಸೂಲಿ ಮಾಡುವುದರೊಂದಿಗೆ ಶೇ.೧೦೨ರಷ್ಟು ಪ್ರಗತಿ ಸಾಧಿಸಿತ್ತು.ನಗರ ವ್ಯಾಪ್ತಿಯೊಳಗೆ ೨೪, ೫೩೯ ವಸತಿ, ೨೫೭೫ ವಾಣಿಜ್ಯ ಹಾಗೂ ೬೫೪೬ ಖಾಲಿ ನಿವೇಶನ ಸೇರಿ ೩೩,೬೬೦ ಒಟ್ಟು ಆಸ್ತಿಗಳಿವೆ. ಇದರಲ್ಲಿ ವಸತಿಯಿಂದ ೧೩.೬ ಕೋಟಿ ರು., ವಾಣಿಜ್ಯದಿಂದ ೫.೨೩ ಕೋಟಿ ರು. ಹಾಗೂ ಖಾಲಿ ನಿವೇಶನದಿಂದ ೪೦ ಲಕ್ಷ ರು. ಸೇರಿ ೧೯.೨೩ ಕೋಟಿ ರು. ಕರ ಸಂಗ್ರಹಿಸುವ ಮೂಲಕ ದಾಖಲೆಯನ್ನು ಬರೆದಿತ್ತು.
ಮೊದಲ ಬಾರಿಗೆ ವಿನಾಯ್ತಿ:
ತೆರಿಗೆ ಪಾವತಿ ಸಂಬಂಧ ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಿರುವುದರಿಂದ ತೆರಿಗೆ ಪಾವತಿಗೆ ಹಿಂದೆಂದಿಗಿಂತಲೂ ಈಗ ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ. ನಗರಸಭೆಯ ಎಚ್ಡಿಎಫ್ಸಿ ಬ್ಯಾಂಕಿನ ಪಕ್ಕದಲ್ಲಿ ತೆರಿಗೆ ಪಾವತಿಗೆ ಜನರು ಕ್ಯೂ ನಿಲ್ಲುತ್ತಿರುವುದು ಕಂಡುಬರುತ್ತಿದೆ. ಇದಕ್ಕಾಗಿ ಪ್ರತ್ಯೇಕ ಕೌಂಟರ್ನ್ನೇ ತೆರೆದು ತೆರಿಗೆ ಪಾವತಿಸಲು ಬರುವ ಜನರಿಗೆ ಅನುಕೂಲ ಕಲ್ಪಿಸಲಾಗಿದೆ.
ರಾಜ್ಯ ಸರ್ಕಾರ ತೆರಿಗೆ ವಿನಾಯ್ತಿಯ ಅವಧಿಯನ್ನು ಮೇ ಅಂತ್ಯದವರೆಗೆ ವಿಸ್ತರಿಸಿದೆ. ಇದರಿಂದ ತೆರಿಗೆ ಪಾವತಿದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅನಧಿಕೃತ ಕಟ್ಟಡಗಳನ್ನು ಬಿ-ಖಾತೆಗೆ ಸೇರಿಸುವಂತೆ ಸರ್ಕಾರ ಆದೇಶಿಸಿರುವುದರಿಂದ ಹೆಚ್ಚುವರಿ ಬಡ್ಡಿಯ ಹೊರೆಯೂ ಕಡಿಮೆಯಾಗಲಿದೆ. ಶೇ.೫ರಷ್ಟು ತೆರಿಗೆ ವಿನಾಯ್ತಿಯಿಂದ ಏಪ್ರಿಲ್ ತಿಂಗಳಿನಲ್ಲಿ ೫.೭೦ ಕೋಟಿ ರು. ತೆರಿಗೆ ಸಂಗ್ರಹವಾಗಿದೆ. ಅನಧಿಕೃತ ಸ್ವತ್ತುಗಳಿಗೆ ಇದೇ ಮೊದಲ ಬಾರಿಗೆ ಶೇ.೫ರಷ್ಟು ರಿಯಾಯ್ತಿತಿ ನೀಡಲಾಗಿದೆ. ಸಾರ್ವಜನಿಕರು ಸದುಪಯೋಗ ಪಡೆದು ಸಕಾಲದಲ್ಲಿ ತೆರಿಗೆ ಪಾವತಿಸಿ, ಅಭಿವೃದ್ಧಿಗೆ ಸಹಕರಿಸಿ.
ಪಾಂಡವಪುರ:ತಾಲೂಕಿನ 24 ಗ್ರಾಮ ಪಂಚಾಯ್ತಿಗಳು 2025-26ನೇ ಸಾಲಿನಲ್ಲಿ ತೆರಿಗೆ ವಸೂಲಾತಿಯಲ್ಲಿ ಶೇ.108 ರಷ್ಟು ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ವತಿಯಿಂದ ತಾಲೂಕಿನ ಪಿಡಿಒ, ಕಾರ್ಯದರ್ಶಿ ಹಾಗೂ ಬಿಲ್ ಕಲೆಕ್ಟರ್ಗಳ ಕೆಲಸ ಪ್ರಸಂಶಿಸಿ ತಾಲೂಕಿನ ಪರ ತಾಪಂ ಇಒ ಎಂ.ಎಸ್.ವೀಣಾ ಅವರಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಅಭಿನಂದನ ಪತ್ರ ನೀಡಿ ಗೌರವ ಸಲ್ಲಿಸಿದರು. ಸೆಸ್ಕ್ ಅಧ್ಯಕ್ಷ ರಮೇಶ್ಬಂಡಿಸಿದ್ದೇಗೌಡ, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಎಚ್.ಟಿ.ಮಂಜು, ಪಿರವಿಕುಮಾರ್, ಎಂಎಲ್ಸಿ ದಿನೇಶ್ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ್, ಸಿಇಒ ನಂದಿನಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.