ಕನ್ನಡಪ್ರಭ ವಾರ್ತೆ ದಾಬಸ್ಪೇಟೆ
ಸೋಂಪುರ ಹೋಬಳಿ ಚಂದನಹೊಸಹಳ್ಳಿ ಗ್ರಾಮದ ರೈತ ಚಿಕ್ಕ ಕರಿಯಪ್ಪ ಕುಟುಂಬದವರಿಗೆ ಸೇರಿರುವ ಅಗಳಕುಪ್ಪೆ ಗ್ರಾಮದ ಸರ್ವೇ ನಂ. 31/2ರಲ್ಲಿನ 4 ಎಕರೆ 36 ಗುಂಟೆ ಜಮೀನನ್ನು ನಕಲಿ ದಾಖಲೆ ಹಾಗೂ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿಕೊಂಡು ಜಮೀನು ಕಬಳಿಸುವ ಆರೋಪದಡಿ ಈಗಾಗಲೇ ದಾಬಸ್ಪೇಟೆ ಠಾಣೆಯಲ್ಲಿ ವಕೀಲ ನಾಗೇಂದ್ರ, ಗೊಟ್ಟಿಗೆರೆ ಮೂರ್ತಿ, ಜೆಡಿಎಸ್ ಮುಖಂಡ ಮೋಹನ್ ಕುಮಾರ್, ದಾಸಣ್ಣ, ನಾಗರಾಜು ಒಳಗೊಂಡಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದೆ, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಈತನ್ಮಧ್ಯೆ ವಕೀಲ ನಾಗೇಂದ್ರ ಸೇರಿ ಹಲವರು ಜಮೀನಿನ ಅಳತೆಗಾಗಿ ನಕಲಿ ಜಮೀನಿನ ಮಾಲೀಕರನ್ನು ಸ್ಥಳಕ್ಕೆ ಕರೆತಂದಾಗ ಕೆರಳಿದ ಗ್ರಾಮಸ್ಥರು, ಕಾರನ್ನು ತಡೆದು ಘೇರಾವ್ ಹಾಕಿದ ಪ್ರಸಂಗ ನಡೆಯಿತು.
ಓಡಿ ಹೋದ ರಿಯಲ್ ಎಸ್ಟೇಟ್ ವ್ಯಕ್ತಿಗಳು:ಇನ್ನು ಗ್ರಾಮಸ್ಥರು ಸರ್ವೇ ಮಾಡಿಸಲು ಬಂದಿದ್ದ ವ್ಯಕ್ತಿಗಳನ್ನು ಘೇರಾವ್ ಹಾಕಿ ಪ್ರಶ್ನಿಸಲು ಪ್ರಾರಂಭಿಸಿ ವಾದ ವಿವಾದ ನಡೆಯುತ್ತಿದ್ದಂತೆ ಹಳ್ಳ ಕೊಳ್ಳ ಹಿಡಿದು ಓಡಿ ಹೋದ ಪ್ರಸಂಗವೂ ನಡೆಯಿತು.
ಅನಾಹುತವಾದರೆ ನಾಗೇಂದ್ರನೇ ನೇರ ಹೊಣೆ: ನನ್ನ ಪತ್ನಿ ಗಂಗಮ್ಮಳು ನಾಗೇಂದ್ರ ಎಂಬುವವರನ್ನು ಪ್ರಶ್ನೆ ಮಾಡಲು ಬಂದಾಗ ಆಕೆಯನ್ನು ನಾಗೇಂದ್ರ ಕಾಲಿನಿಂದ ಒದ್ದಿದ್ದಲ್ಲದೆ ಎದೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಗಂಗಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪ್ರಾಣಕ್ಕೆ ಏನಾದರೂ ಅನಾಹುತವಾದರೆ ಅದಕ್ಕೆ ನಾಗೇಂದ್ರ ಅವರೇ ನೇರಹೊಣೆ ಎಂದು ಆಕೆಯ ಪತಿ ಚಿಕ್ಕಕರಿಯಪ್ಪ ಆರೋಪಿಸಿದರು.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಕಾರಣ ದಾಬಸ್ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.