ರಾಜಕೀಯಕ್ಕೆ ಬರಲು ಮಹಿಳೆಗೆ ಕುಟುಂಬದಿಂದ ಅಸಹಕಾರ

KannadaprabhaNewsNetwork | Published : Apr 17, 2025 12:02 AM

ಸಾರಾಂಶ

ಪುರಾಣ ಮತ್ತು ಪ್ರಾಚೀನ ಕಾಲದಲ್ಲೂ ಮಹಿಳೆಯರು ಉನ್ನತ ಸ್ಥಾನದಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಪ್ರಸ್ತುತ ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇದೆ. ಮೀಸಲಾತಿ ಕೊಟ್ಟರು ಮೇಲ್ವರ್ಗದ ಮಹಿಳೆಯರು ಹೆಚ್ಚಿನ ಅವಕಾಶ ಪಡೆದುಕೊಳ್ಳುತ್ತಾರೆ ಎಂಬ ಮಾತಿದೆ.

ಕೊಪ್ಪಳ:

ರಾಜಕೀಯಕ್ಕೆ ಮಹಿಳೆಯರು ಬರಲು ಕುಟುಂಬದಲ್ಲಿ ಸಹಕಾರ ನೀಡುತ್ತಿಲ್ಲ ಎಂದು ಸಹಾಯಕ ಪ್ರಾಧ್ಯಾಪಕ ಡಾ. ಉಮೇಶ ಅಂಗಡಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ ಪ್ರಸ್ತುತ ರಾಜಕೀಯದಲ್ಲಿ ಮಹಿಳೆಯರ ಪಾತ್ರ ಮತ್ತು ಮೀಸಲಾತಿ ಕುರಿತ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಪುರಾಣ ಮತ್ತು ಪ್ರಾಚೀನ ಕಾಲದಲ್ಲೂ ಮಹಿಳೆಯರು ಉನ್ನತ ಸ್ಥಾನದಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಪ್ರಸ್ತುತ ರಾಜಕೀಯದಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಇದೆ. ಮೀಸಲಾತಿ ಕೊಟ್ಟರು ಮೇಲ್ವರ್ಗದ ಮಹಿಳೆಯರು ಹೆಚ್ಚಿನ ಅವಕಾಶ ಪಡೆದುಕೊಳ್ಳುತ್ತಾರೆ ಎಂಬ ಮಾತಿದೆ. ಪ್ರಸ್ತುತ ದೇಶದಲ್ಲಿ ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 32 ಮೀಸಲಾತಿ ಇದೆ. ಆದರೆ, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಇಷ್ಟೊಂದು ಮೀಸಲಾತಿ ಇಲ್ಲ ಎಂದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗವಿಸಿದ್ದಪ್ಪ ಮುತ್ತಾಳ ಮಾತನಾಡಿ, ವಿಶೇಷ ಉಪನ್ಯಾಸಗಳಿಂದ ವಿದ್ಯಾರ್ಥಿಗಳ ಜ್ಞಾನದ ಗುಣಮಟ್ಟ ಹೆಚ್ಚಾಗುತ್ತದೆ. ಹೊಸ ವಿಷಯ ತಿಳಿದುಕೊಳ್ಳುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಮಾನತೆ ಮತ್ತು ಸಮಾನವಾದ ಅವಕಾಶ ಕಲ್ಪಿಸಲು ರಾಜಕೀಯ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಮಹಿಳಾ ಮೀಸಲಾತಿ ಅಗತ್ಯವಾಗಿದೆ. ಮಹಿಳೆಯರ ಸಮಾನತೆ ಹಕ್ಕುಗಳಿಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಶ್ರಮಿಸಿದ್ದಾರೆ. ಸಂವಿಧಾವು ಸಮಾನ ಹಕ್ಕು ನೀಡಿದೆ. ನಾವೆಲ್ಲ ಜಾತಿ ಮತ್ತು ಧರ್ಮದಿಂದ ಹೊರಬರಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಗಣಪತಿ ಲಮಾಣಿ, ಬಾರತೀಯ ಸಮಾಜ ಪುರುಷ ಪ್ರಧಾನ ಸಮಾಜ. ಮಹಿಳೆಯರ ಹಕ್ಕುಗಳನ್ನು ನಿರಾಕರಿಸಿದ್ದು ಅವುಗಳಿಗಾಗಿ ಹೋರಾಟ ನಡೆಸಿದ್ದಾರೆ. ಮಹಿಳೆರನ್ನು ಮುಖ್ಯ ವಾಹಿನಿಗೆ ತಂದು ಉನ್ನತ ಶಿಕ್ಷಣ ಪಡೆಯುವಂತೆ ಪ್ರೇರೇಪಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಗೀತಾ ಮುತ್ತಾಳ, ಜಾಫರ್ ಸಾದಿಕ್, ನಿಂಗಪ್ಪ, ಡಾ. ಅಶೋಕ ಕುಮಾರ, ಡಾ. ನರಸಿಂಹ, ಶ್ರೀಕಾಂತ, ನಿಂಗಜ್ಜ ಸೋಂಪುರ ಉಪಸ್ಥಿತರಿದ್ದರು. ತಸ್ಲೀಮ್ ನಿರೂಪಿಸಿದರು. ರತ್ನ ಸ್ವಾಗತಿಸಿದರು, ಯೋಗೀತಾ ಪ್ರಾರ್ಥಿಸಿದರು. ಭವ್ಯ ಕವನ ವಾಚಿಸಿದರೆ ಯಲ್ಲಮ್ಮ ವಂದಿಸಿದರು.

Share this article