ಕನ್ನಡಪ್ರಭ ವಾರ್ತೆ ವಿಜಯಪುರ: ನಗರದಲ್ಲಿ ವಿಜೃಂಭಣೆಯಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದ ಗಣೇಶ ಮೂರ್ತಿಗಳನ್ನು 5ನೇ ದಿನ ಅಷ್ಟೇ ಸಾಂಪ್ರದಾಯಿಕವಾಗಿ ವಿಸರ್ಜನೆ ಮಾಡಲಾಯಿತು. ನಗರದ ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳು ಹಾಗೂ ತಾಜಬಾವಡಿ ಸೇರಿ ವಿವಿಧೆಡೆ ಪಾಲಿಕೆಯಿಂದ ನಿರ್ಮಿಸಿದ್ದ ಕೃತಕ ಹೊಂಡಗಳಲ್ಲಿ ಬುಧವಾರ ತಡರಾತ್ರಿವರೆಗೂ ವಿಸರ್ಜಿಸಲಾಯಿತು.
ಗಣೇಶ ಮೂರ್ತಿಗಳನ್ನು ಡಿಜೆ ಸೌಂಡ್, ಭಕ್ತಿಗೀತೆಗಳ ಗಾಯನ, ಬಾಜಾ ಭಜಂತ್ರಿ, ವಾದ್ಯಗಳ ಸಮೇತ ಮೆರವಣಿಗೆ ಮೂಲಕ ಬೀಳ್ಕೊಡಲಾಯಿತು. ನಗರದ ಪ್ರಮುಖ ರಸ್ತೆಗಳೆಲ್ಲವೂ ಜನಜಂಗುಳಿಯಿಂದ ತುಂಬಿದ್ದು, ಮೆರವಣಿಗೆ ಮೂಲಕ ನಡೆದ ಗಣೇಶ ವಿಸರ್ಜನೆಯನ್ನು ಜನರು ನೋಡಿ ಖುಷಿ ಪಟ್ಟರು.
ಕೊನೆಯ ಪೂಜೆನಗರದಲ್ಲಿ ಬಹುತೇಕ ಗಣೇಶನನ್ನು 5ನೇ ದಿನಕ್ಕೆ ವಿಸರ್ಜಿಸಲಾಗುತ್ತದೆ. ಹಾಗಾಗಿ ಭಕ್ತಿಪೂರ್ವಕ ಪೂಜೆಯನ್ನು ಸಲ್ಲಿಸಲಾಯಿತು. ಬುಧವಾರ ಸಂಜೆಯಿಂದಲೇ ಮನೆಗಳಲ್ಲಿ ಹಾಗೂ ಸರ್ಕಲ್ಗಳಲ್ಲಿ ಪ್ರತಿಷ್ಟಾಪಿಸಿದ್ದ ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಲಾಯಿತು. ತಡರಾತ್ರಿಯ ವರೆಗೂ ಮೆರವಣಿಗೆ ಮೂಲಕ ತೆರಳಿ ಮಹಾನಗರ ಪಾಲಿಕೆ ನಿರ್ಮಿಸಿದ್ದ ಕೃತಕ ಹೊಂಡಗಳಲ್ಲಿ ಗಣೇಶನಿಗೆ ಅಂತಿಮ ಪೂಜೆ ಸಲ್ಲಿಸಿ ವಿಸರ್ಜಿಸಲಾಯಿತು.
ಗಣೇಶನ ಮುಂದೆ ಪೂಜೆಗೆಂದು ಇಟ್ಟಿದ್ದ ವಸ್ತುಗಳನ್ನೆಲ್ಲ ಹರಾಜು ನಡೆಸಲಾಯಿತು. ಫಲ-ಪುಷ್ಪಗಳು, ತೆಂಗಿನಕಾಯಿ, ಗಣೇಶನಿಗೆ ಅಲಂಕರಿಸಿದ ವಸ್ತುಗಳು, ಚಿನ್ನಾಭರಣ, ಮುತ್ತಿನ ಹಾರ, ಕಿರೀಟ ಸೇರಿ ಇನ್ನಿತರ ವಸ್ತುಗಳನ್ನು ಹರಾಜು ಮಾಡಲಾಯಿತು. ಭಕ್ತರು ಭಾಗವಹಿಸಿ ಹೆಚ್ಚಿನ ಮೊತ್ತವನ್ನು ಕೂಗಿ ತಮಗೆ ಇಷ್ಟವಾದ ವಸ್ತುಗಳನ್ನು ಪಡೆದರು. ಹೀಗೆ ಪಡೆದ ವಸ್ತುಗಳನ್ನು ಪೂಜಿಸಿದರೆ ಆ ಮನೆಗೆ ದೇವರು ಕೃಪೆ ತೋರಲಿದ್ದಾನೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿದೆ ಎಂಬ ನಂಬಿಕೆ ಇರುವುದರಿಂದ ಭಕ್ತರು ಸವಾಲಿನಲ್ಲಿ ಒಂದೊಂದು ವಸ್ತುಗಳನ್ನಾದರೂ ತೆಗೆದುಕೊಂಡು ಇಟ್ಟುಕೊಳ್ಳುತ್ತಾರೆ.