ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಪಾಂಡವಪುರದಲ್ಲಿ ಜ.26ರಂದು ರೈತ ನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಜನ್ಮ ದಿನದ ಸಂಸ್ಮರಣೆ ಅಂಗವಾಗಿ ಚಿತ್ರನಟ ದರ್ಶನ್ ಮತ್ತು ಕಾಟೇರ ಚಿತ್ರ ತಂಡಕ್ಕೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.
ಹಲವು ದಶಕಗಳಿಂದ ನಾಡಿನಲ್ಲಿ ಅಪಾರ ಸಂಖ್ಯೆಯಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ರೈತರ ಸಮಸ್ಯೆಗಳನ್ನು ಕೆಂದ್ರೀಕರಿಸಿ ಬಂದಿರುವ ಚಿತ್ರಗಳು ಕಡಿಮೆ. ಡಾ.ರಾಜ್ ಅಭಿನಯದ ಕಾಮನ ಬಿಲ್ಲು, ಸಿ.ಪಿ.ಯೋಗೇಶ್ವರ್ ಅವರ ಉತ್ತರ ದ್ರುವದಿಂದ ದಕ್ಷಿಣ ದ್ರುವಕೂ ಹಾಗೂ ಸಂಕ್ರಾಂತಿ ಚಿತ್ರಗಳಲ್ಲಿ ಒಂದಷ್ಟು ರೈತ ಪರವಾದ ಧ್ವನಿ ಇರುವುದನ್ನು ಬಿಟ್ಟರೆ ಇತ್ತೀಚಿನ ದಿನಗಳಲ್ಲಿ ರೈತರ ಬಗ್ಗೆ ಇರುವ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಕಡಿಮೆ ಎಂದರು.
ಪ್ರಸಕ್ತ ಸಾಲಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳು ಸ್ಥಗಿತಗೊಳ್ಳುತ್ತಿವೆ. ಇಂತಹ ಕಠಿಣ ಸನ್ನಿವೇಶದಲ್ಲಿ ವಿದ್ಯುತ್ ಸಮಸ್ಯೆ ರೈತರನ್ನು ತೀವ್ರವಾಗಿ ಬಾಧಿಸುತ್ತಿದೆ. ಸೆಸ್ಕಾಂ ಕಚೇರಿ ಎದುರು ರೈತರು ವಿದ್ಯುತ್ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಚಳವಳಿ ನಡೆಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸುಟ್ಟುಹೋದ ವಿದ್ಯುತ್ ಪರಿವರ್ತಕಗಳನ್ನು ತಕ್ಷಣವೇ ಬದಲಿಸಿ ಕೊಡುತ್ತಿಲ್ಲ. ನೂತನ ವಿದ್ಯುತ್ ಸಂಪರ್ಕಕ್ಕಾಗಿ ಹಣಕಟ್ಟಿ ವರ್ಷಗಳ ಕಾಲ ಕಾಯುತ್ತಿದ್ದರೂ ಸೆಸ್ಕಾಂ ರೈತರ ಕೃಷಿ ಪಂಪ್ ಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ವಿದ್ಯುತ್ ಸಮಸ್ಯೆಯ ನಿವಾರಣೆಗಾಗಿ ಶೀಘ್ರದಲ್ಲಿಯೇ ಅನಿಧಿಷ್ಠ ಕಾಲದ ಚಳವಳಿ ರೂಪಿಸುವ ಸಂಬಂಧ ಸಭೆಯಲ್ಲಿ ಚರ್ಚಿಸಿ ಹೋರಾಟದ ದಿನವನ್ನು ಗೊತ್ತುಪಡಿಸಲು ತಾಲೂಕು ಅಧ್ಯಕ್ಷ ಪುಟ್ಟೇಗೌಡರಿಗೆ ಸಭೆಯಲ್ಲಿ ಸೂಚಿಸಲಾಯಿತು.