ಶರಣ ಸಂಸ್ಕೃತಿ ಉತ್ಸವದ ಕೃಷಿ ಮೇಳದಲ್ಲಿ ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಕನ್ನಡಪ್ರಭ ವಾರ್ತೆ, ಚಿತ್ರದುರ್ಗ ರೈತರು ಸಾವಯವ ಕೃಷಿ ಅನುಸರಿಸಿದಲ್ಲಿ ಆತ್ಮಹತ್ಯೆಯಂತಹ ಜೀವ ವಿರೋಧಿ ನಿಲುವುಗಳಿಂದ ದೂರ ಸರಿಯಬಹುದೆಂದು ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹೇಳಿದರು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದ ಅನುಭವ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕೃಷಿ ಮೇಳಧ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಾವು ಬೆಳೆದ ಉತ್ಪನ್ನಗಳಿಗೆ ರೈತರೇ ಬೆಲೆ ನಿಗದಿ ಮಾಡುವವರೆಗೂ ಶೋಷಣೆ ತಪ್ಪಿದ್ದಲ್ಲ. ಸರ್ಕಾರ ಮತ್ತು ಮಧ್ಯವರ್ತಿಗಳು ಬೆಲೆ ನಿಗದಿ ಮಾಡುವ ಪ್ರಕ್ರಿಯೆಗೆ ಇತಿಶ್ರೀ ಹಾಡಬೇಕಿದೆ ಎಂದರು. ರಾವಂದೂರು ಮುರುಘಾ ಮಠದ ಮೋಕ್ಷಪತಿ ಶ್ರೀಗಳು ಮಾತನಾಡಿ, 1978-1980ರಲ್ಲಿ ದೇಶದ ತಲಾ ಆದಾಯ 250 ರಿಂದ 300 ರು.ಗಳಷ್ಟಿತ್ತು. ಇಂದಿನ ತಲಾದಾಯ 25 ರಿಂದ 30 ಸಾವಿರವಿದೆ. ಗಿಡಮರಗಳನ್ನು ನೆಟ್ಟು ಮಳೆನೀರನ್ನು ಸಂರಕ್ಷಿಸುವತ್ತ ರೈತರು ಗಮನಹರಿಸಬೇಕಾಗಿದೆ ಎಂದು ತಿಳಿಸಿದರು.
ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ ಮುರುಘಾ ಪರಂಪರೆಯ ಸ್ವಾಮಿಗಳು ಸಾಹಿತ್ಯ ಪಂಡಿತರು. ಸಂದರ್ಭ ಬಂದಾಗ ರಾಜರುಗಳನ್ನು ವಿರೋಧಿಸುವವರು ಆಗಿದ್ದರು. ಅಪರೂಪದ ಪ್ರಜ್ಞೆಯನ್ನು ಬೆಳಗಿದವರು ಎಂದರು. ಹೆಬ್ಬಾಳು ಮಹಾಂತ ರುದ್ರೇಶ್ವರಮಠದ ಮಹಾಂತ ರುದ್ರೇಶ್ವರಸ್ವಾಮಿಗಳು, ಶರಣಸಂಸ್ಕೃತಿ ಉತ್ಸವ-2023ರ ಗೌರವಾಧ್ಯಕ್ಷ ಅಥಣಿ ಗಚ್ಚಿನಮಠದ ಶಿವಬಸವ ಮಹಾಸ್ವಾಮಿಗಳು, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಬಿ ಎಸ್ ರೇಖಾ, ಕೆಪಿಟಿಸಿಎಲ್ನ ನಿವೃತ್ತ ನಿರ್ದೇಶಕ ಕೆ.ವಿ.ಶಿವಕುಮಾರ್, ಬಿಜೆಪಿ ಯುವ ಮುಖಂಡ ಜಿ.ಎಸ್ ಅನಿತ್ ಕುಮಾರ್, ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಸಿದ್ದವೀರಪ್ಪ ಈಚಘಟ್ಟ, ಶರಣಸಂಸ್ಕೃತಿ ಉತ್ಸವ-2023ರ ಕಾರ್ಯಾಧ್ಯಕ್ಷರಾದ ಕೆ.ಸಿ.ನಾಗರಾಜ್, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ಡಯಟ್ನ ಶಿವಾನಂದ್ ಎಸ್ಜೆಎಂ ವಿದ್ಯಾಪೀಠದ ಕಾರ್ಯನಿರ್ವಹಣಾಧಿಕಾರಿಗಳಾದ ಎಂ.ಭರತ್ ಕುಮಾರ್ ಉಪಸ್ಥಿತರಿದ್ದರು. ಬಸವತತ್ವ ಧ್ವಜಾರೋಹಣ:
ಶರಣ ಸಂಸ್ಕೃತಿ ಉತ್ಸವ 2023ರ ಅಂಗವಾಗಿ ಶನಿವಾರ ಬೆಳಗ್ಗೆ 10 ಗಂಟೆಗೆ ಶ್ರೀಮಠದ ಅನುಭವ ಮಂಟಪದ ಅವರಣದಲ್ಲಿ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಬಸವತತ್ವ ಧ್ವಜಾರೋಹಣ ನೆರವೇರಿಸಿದರು. ಸವಣೂರು ದೊಡ್ಡಹುಣಸೇಮಠದ ಚನ್ನಬಸವ ಸ್ವಾಮಿಗಳು, ಹುಲಸೂರು ಗುರು ಬಸವೇಶ್ವರ ಸಂಸ್ಥಾನಮಠದ ಶಿವಾನಂದ ಸ್ವಾಮಿಗಳು, ಉಸ್ತುವಾರಿ ಬಸವಪ್ರಭು ಸ್ವಾಮಿಗಳು, ಅಥಣಿ ಗಚ್ಚಿನಮಠದ ಶಿವಬಸವ ಮಹಾಸ್ವಾಮಿಗಳು ಇದ್ದರು.ಪ್ರಗತಿಪರ ರೈತರಾದ ದೇವರಮರಿಕುಂಟೆ ಅರ್.ಎ ದಯಾನಂದಮೂರ್ತಿ ಹಾಗೂ ಚಳ್ಳಕರೆಯ ಕೆ.ಎಂ.ವಿಜಯ ಇವರುಗಳನ್ನು ಸನ್ಮ್ಮಾನಿಸಲಾಯಿತು. ಚಿತ್ರದುರ್ಗದ ನಾಟ್ಯ ರಂಜಿನಿ ನೃತ್ಯ ಕಲಾಕೇಂದ್ರದವರು ನೃತ್ಯ ಪ್ರದರ್ಶಿಸಿದರು.